Friday, 23 November 2018

ಪ್ರಬಂಧ

ಭಾರತೀಯರ ಸಿನೆಮಾ ಸಂಗೀತದ ಪ್ರೇಮ

(ಡಿಸೆಂಬರ್ ತಿಂಗಳಿನ ತುಷಾರ ಮಾಸಪತ್ರಿಕೆಯಲ್ಲಿ "ಆಕಾಶವಾಣಿ, ಈಗ ಚಿತ್ರಗೀತೆಗಳ ಕಾರ್ಯಕ್ರಮ" ಎನ್ನುವ ತಲೆಬರಹದೊಂದಿಗೆ ಪ್ರಕಟವಾದ ಪ್ರಬಂಧ )
       ಭಾರತೀಯರ ಸಿನೆಮಾ ಸಂಗೀತ ಪ್ರೇಮ ಅನನ್ಯವಾದದ್ದು. ಹಾಡಿಲ್ಲದ ಸಿನೆಮಾಗಳನ್ನೇ ನಾವು ಕಲ್ಪಿಸಲಾರೆವು. ಒಂದೂ ಹಾಡಿಲ್ಲದ ಇಂಗ್ಲಿಷ್  ಮತ್ತಿತರ ವಿದೇಶಿ ಚಿತ್ರಗಳಿರುತ್ತವೆ. ಅವುಗಳನ್ನು ನೋಡಿ ನಾವೂ "ಎಷ್ಟು ನ್ಯಾಚರಲ್ಲಾಗಿದೆ ಸಿನೆಮಾ! ಸುಮ್ಮಸುಮ್ಮನೇ ಹೀರೊ, ಹಿರೋಯಿನ್ನಗಳು ಹಾಡು ಹಾಡಿ ಮರ ಸುತ್ತೋ ಕೆಲಸ ಇಲ್ಲವೇ ಇಲ್ಲ" ಅಂತ ಹೊಗಳಿರುತ್ತೇವೆ.
ನಿಜ ಜೀವನದಲ್ಲಿ ಪ್ರತಿ ಸನ್ನಿವಾಶಕ್ಕೆ ಯಾರು ಹಾಡು ಹಾಡುತ್ತಾ ಕೂರುತ್ತಾರೆ ಅಥವಾ ಮರ ಸುತ್ತುತ್ತಾರೆ ಹೇಳಿ! ಅಳು ಬಂದರೆ ಅತ್ತು ಕಣ್ಣೀರಾಗುವ ಬದಲು ಒಂದು ದುಃಖಭರಿತ ಹಾಡನ್ನು ಹಾಡುತ್ತಾ ನೋಡುಗರ ಕಣ್ಣಲ್ಲಿ ಕರುಣೆ ಉಕ್ಕಿಸುವುದು ಸಾಧ್ಯವೇ? ಹಾಗೆ ಮಾಡಬೇಕೆಂದರೂ ಥಟ್ಟನೇ ಶಬ್ದಗಳು ಹೊಳೆದು, ಅದೊಂದು ಗೀತೆಯಾಗಿ, ಅದಕ್ಕೆ ನಾವೇ ಟ್ಯೂನ್  ಕೊಟ್ಟುಕೊಂಡು (ಹಿನ್ನೆಲೆ ಸಂಗೀತ ಇಲ್ಲ ಎಂದೇ ಇಟ್ಟುಕೊಳ್ಳಿ) ಹಾಡುವುದು ಎಷ್ಟೊಂದು ಕಷ್ಟ ಊಹಿಸಿಕೊಳ್ಳಿ. ಹಾಗಿದ್ದರೆ ಈ ಸಿನೆಮಾಗಳಲ್ಲಿ ಮಾತ್ರ ಅದು ಹೇಗೆ ನಾಯಕ, ನಾಯಕಿಯರು ಒಮ್ಮೊಮ್ಮೆ ಸಪೋರ್ಟಿಂಗ್ ನಟ, ನಟಿಯರು ಕೂಡ, ಪ್ರತೀ ಸನ್ನಿವೇಶಕ್ಕೆ ಸರಿಯಾಗಿ, ತಮ್ಮ ಮಾನಸಿಕ ಸ್ಥಿತಿಗೆ ಸರಿಯಾಗಿ, ರಾಗ-ತಾಳ ಸಮೇತÀವಾಗಿ ಸುಂದರವಾದ ಹಾಡುಗಳನ್ನು ಹಾಡುತ್ತಾರೆ! ಅದೆಲ್ಲಾ ಬೋಗಸ್ ಅಂತ ನಾವು ಅನ್ನಬಹುದು.
ಚಿಕ್ಕ ಮಕ್ಕಳಿದ್ದಾಗ ನಾವೊಂದಿಷ್ಟು ಹಾಡುಗಳನ್ನು ಕಲಿತು ಅಂದಿರುತ್ತೇವೆ. ಏಕೆಂದರೆ ನಮ್ಮ ಅಮ್ಮಂದಿರು ಮತ್ತು ಶಾಲೆಯಲ್ಲಿ ಟೀಚರುಗಳು ಶ್ರಮಪಟ್ಟು ಅಭಿನಯ ಸಹಿತವಾಗಿ ಹಾಡಲು ಕಲಿಸಿಕೊಟ್ಟಿರುತ್ತಾರೆ. ನನ್ನ ಹಿರಿಯ ಮಗ ಟಿಪಿಕಲ್ ಮಕ್ಕಳ ಹಾಡುಗಳನ್ನು ತನ್ನ ಗೆಳೆಯನೊಡನೆ ಕೂಡಿಕೊಂಡು ಹೇಳುತ್ತಿದ್ದ. 'ಗಣಪ್ಪ ಬಂದಾ, ಹೊಟ್ಟಿ ಮ್ಯಾಲೆ ಗಂಧಾ', 'ಝಣ ಝಣಾ ಝಣಾ ಜೇಬು ತುಂಬ ಹಣಾ', 'ಕಪ್ಪೆ ಕರಕರ, ತುಪ್ಪಾ ಜಲಿಜಲಿ', 'ಬಸ್ ಬಂತು ಬಸ್ಸು, ಗೋರ್ಮೆಂಟ ಬಸ್ಸು' ಇವೆಲ್ಲಾ ಪದ್ಯಗಳನ್ನು ಮೈಕೈ ತಿರುಗಿಸುತ್ತ ಅಭಿನಯಿಸಿ ರಾಗವಾಗಿ ಹೇಳುತ್ತಿದ್ದ. ನಾವೂ ಮೇಲಿಂದ ಮೇಲೆ ಅವೇ ಅವೇ ಪದ್ಯಗಳನ್ನು ಮಕ್ಕಳ ಬಾಯಿಂದ ಕೇಳಿ ಸಂತೋಷ ಪಡುತ್ತಿದ್ದೆವು. ಆದರೆ ಮಕ್ಕಳು ದೊಡ್ಡವರಾದಂತೆ ಹಾಡು ಹಾಡುವುದನ್ನು ನಿಲ್ಲಿಸಿಬಿಡುತ್ತಾರೆ. ತೀರಾ ಸಿನೆಮಾ ಹಾಡುಗಳ ಹುಚ್ಚು ಹಿಡಿಸಿಕೊಂಡವರು ಬಾಥರೂಮ ಸಿಂಗರಗಳಾಗುತ್ತಾರೆ. ಹಾಡಿನ ನಾದವಿರುವ ಹೆಣ್ಣುಮಕ್ಕಳು ಅಡುಗೆ ಮಾಡುತ್ತ ಯಾರು ಇಲ್ಲದ ಸಮಯದಲ್ಲಿ ಒಗ್ಗರಣೆಯ ಸದ್ದಿನೊಂದಿಗೆ ತಮ್ಮ ದನಿಯನ್ನು ಬೆರೆಸಿ ಅಡುಗೆಯ ರುಚಿ ಹೆಚ್ಚಿಸುತ್ತಾರೆ. ಆದರೆ ಪ್ರತೀ ಸನ್ನಿವೇಶಕ್ಕೆ ಮತ್ತು ಭಾವನೆಗೆ ತಕ್ಕಂತೆ ಯಾರೂ ಹಾಡುತ್ತಾ ಕೂರಲು ಆಗುವುದಿಲ್ಲ. 
ಆದರೂ ಸಿನೆಮಾಗಳಲ್ಲಿ ನಟ, ನಟಿಯರು ಹಾಗೆ ಸಂದರ್ಭಕ್ಕೆ ತಕ್ಕಂತೆ ಹಾಡುಗಳನ್ನು ಹೇಳಿದರೆ ನಮಗ್ಯಾರಿಗೂ ವಿಚಿತ್ರ ಅನಿಸುವುದೇ ಇಲ್ಲ. ಬದಲಾಗಿ ಖುಶಿಯೇ ಆಗುತ್ತದೆ. ಕೆಲವು ಚಿತ್ರಗಳಂತೂ ಕತೆಗಿಂತ ಹಾಡುಗಳಿಗಾಗಿಯೇ ಹೆಚ್ಚು ಫೇಮಸ್  ಆಗುತ್ತವೆ. ಹಾಡುಗಳಿಗಾಗಿಯೇ ಚಲನಚಿತ್ರ ತಯಾರಿಸಿದ ಅಪರೂಪದ ಉದಾಹರಣೆಗಳೂ ನಮ್ಮಲ್ಲಿ ಇವೆ. 'ಮೈಸೂರು ಮಲ್ಲಿಗೆ' ಅಂಥ ಒಂದು ವಿಶೇಷ ಚಿತ್ರ. ಕೆ.ಎಸ್.ಎನ್. ಅವರ ಭಾವಗೀತೆಗಳನ್ನು ದೃಶ್ಯಕಾವ್ಯವಾಗಿಸಿ ತೆರೆಗಿಳಿಸಿದ ಈ ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಹಿಂದಿಯಲ್ಲಿ ಕುಮಾರ ಸಾನು ಮತ್ತು ಅನುರಾಧಾ ಪೋಡವಾಲ ಅವರ ಅಲ್ಬಮ ಹಾಡುಗಳನ್ನೇ ಮತ್ತಷ್ಟು ಜನಪ್ರೀಯವಾಗಿಸಲು ಮಾಡಿದ 'ಆಶಿಕಿ' ಚಿತ್ರ ತೊಂಬತ್ತರ ದಶಕದಲ್ಲಿ ಬಹಳ ಫೇಮಸ್ ಆಯಿತು. ಸುಮಾರು ಇಪ್ಪತ್ತೇಳು ವರ್ಷಗಳಷ್ಟು ಹಳೆಯದಾದ ಆ ಚಿತ್ರದ ಹಾಡುಗಳನ್ನು ಇನ್ನೂ ನಮ್ಮ ವಯಸ್ಸಿನ ಅನೇಕರು ಗುಣುಗುಣಿಸುತ್ತಾರೆ, ಅನೇಕ ಹಾಟೆಲ್ಲುಗಳಲ್ಲಿ ಇವುಗಳ ರೆಕಾರ್ಡ ಹಾಕಿರುತ್ತಾರೆ. ಇತ್ತಿತ್ತಲಾಗಿ ಚಿತ್ರಕ್ಕಿಂತ ಮೊದಲೇ ಹಾಡುಗಳ ಆಡಿಯೋ ರಿಲೀಸ್ ಸಮಾರಂಭಗಳನ್ನು ಅದ್ದೂರಿಯಾಗಿ ಆಚರಿಸುವ ಸಂಪ್ರದಾಯ ಶುರುವಾಗಿದೆ. ಹಾಗಾಗಿ ಹಾಡುಗಳು ಸಿನೆಮಾ ರಿಲೀಸ್ ಆಗುವುದಕ್ಕಿಂತ ಮೊದಲೇ ರಸಿಕರಿಗೆ ತಿಳಿದುಬಿಟ್ಟಿರುತ್ತವೆ. ಅವು ಚಿತ್ರದ ಮೌಲ್ಯವನ್ನು ಇನ್ನೂ ಹೆಚ್ಚಿಸುತ್ತವೆ. ಸಿನೆಮಾಗಳ ಬಗ್ಗೆ ಜಾಸ್ತಿ ಗೊತ್ತಿಲ್ಲದಿದ್ದರೂ ಹಿಂದೆ ಕೂಡ ರೇಡಿಯೋಗಳಿಂದಾಗಿ ಹಾಡುಗಳು ಎಲ್ಲರ ಮನೆಮಾತಾಗಿರುತ್ತಿದ್ದವು. 
ನಾವು ಭಾರತೀಯರು ಹಾಡುಗಳನ್ನು ಬಹುವಾಗಿ ಮೆಚ್ಚುತ್ತೇವೆ ಹಾಗೂ ನೆಚ್ಚುತ್ತೇವೆ. ಲಕ್ಷ ಲಕ್ಷ ಸಂಖ್ಯೆಯಲ್ಲಿರುವ ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿರುವ ಹಾಡುಗಳಿಗೆ ನಮ್ಮ ನಿಜ ಜೀವನದ ಯಾವುದೇ ಸನ್ನಿವೇಶಕ್ಕೂ ಸೆಟ್ಟಾಗುವ ವಿಶೇಷ ಗುಣವಿದೆ. ಹಾಗಾಗಿ ನಾವೇ ಬರೆದು, ಸಂಯೋಜಿಸಿ ಹಾಡುವ ತಾಪತ್ರಯವೇ ಇಲ್ಲ. ನನ್ನ ಅಕ್ಕನ ಮಗಳು ಪುಟ್ಟ ಮಗುವಾಗಿದ್ದಾಗ ರಾತ್ರಿ ಎಷ್ಟೊತ್ತಾದರೂ ಮಲಗುತ್ತಿರಲಿಲ್ಲ. ಮೇಲೆ ಜೋರು ಧ್ವನಿಯಲ್ಲಿ ಅಳುವುದು ಬೇರೆ. ಒಂದು ದಿನ ಬೇಸರಗೊಂಡು ನನ್ನಕ್ಕ ಮತ್ತು ಅಪ್ಪ ತೊಟ್ಟಲಿನ ಎರೆಡೂ ಬದಿಗೆ ನಿಂತು ಹಾಡುತ್ತಾ ಅವಳನ್ನು ತೂಗಲು ಶುರು ಮಾಡಿದರು. ಹಾಡುವುದು ನಿಲ್ಲಿಸಿದ ತಕ್ಷಣ ಅವಳು ಅಳಲು ಶುರುಮಾಡುತ್ತಿದ್ದಳು. ಹಾಡು ಹಾಡುವ ತನಕ ಸುಮ್ಮನೇ ಕೇಳುತ್ತಿದ್ದಳು. ಹೀಗೆ ಅನೇಕ ಸಿನೆಮಾ ಹಾಡುಗಳು, ದೇವರ ನಾಮಗಳು ಎಲ್ಲ ಹೇಳಿ ಅವರು ಸುಸ್ತಾದರೂ ಅವಳು ಅಳುವುದನ್ನೂ ನಿಲ್ಲಿಸಲಿಲ್ಲ, ಮಲಗಲೂ ಇಲ್ಲ. ಕೊನೆಗೆ ಬೇಸರಗೊಂಡು ಲಾಲಿ ಹಾಡು ಹೇಳುವುದೇ ಸರಿ ಎಂದುಕೊಂಡು 'ಲಾಲಿ ಲಾಲಿ, ಲಾಲಿ ಲಾಲಿ, ಕತ್ತೆಯ ಮರಿಚಂದ' ಎನ್ನುವ ಸಿನೆಮಾ ಹಾಡನ್ನು ಹೇಳಿದ ಮೇಲೆಯೇ ಅವಳು ನಿದ್ದೆಗೆ ಜಾರಿದ್ದು. ನಾವು ಚಿಕ್ಕವರಿದ್ದಾಗ ಅಮ್ಮ-ಅಪ್ಪ ಏನಾದರೂ ಜಗಳವಾಗಿ ಮಾತು ಬಿಟ್ಟಾಗ, ಶುಭಮಂಗಳ ಚಿತ್ರದ 'ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು, ನಗತದ ಭೂತಾಯಿ ಮನಸು' ಹಾಡು ಹೇಳಿ ಇಬ್ಬರನ್ನೂ ನಗಿಸಿಬಿಡುತ್ತಿದ್ದೆವು. 
ನಾಗರಹಾವು ಚಿತ್ರ ನೋಡಿದ ನನ್ನಕ್ಕನಿಗೆ ಅದರಲ್ಲಿನ ಹಾಡುಗಳ ಹುಚ್ಚು ಸರಿಯಾಗಿ ಹಿಡಿದಿತ್ತು. ರೇಡಿಯೋದಲ್ಲಿ 'ಕನ್ನಡ ನಾಡಿನ ವೀರ ರಮಣಿಯಾ ಗಂಡುಭೂಮಿಯಾ ವೀರ ನಾರಿಯಾ ಚರಿತೆಯ ನಾನು ಹಾಡುವೆ' ಹಾಡು ಬಂದ ತಕ್ಷಣ ಅವಳು ಆವೇಶಕ್ಕೊಳಗಾಗಿ ಫಡಫಡನೇ ಕಪಾಟು ಬಾಗಿಲು ತೆಗೆದು ಅದರಲ್ಲಿನ ಅಮ್ಮನ ಒಂದು ಸೀರೆಯನ್ನು ಎಳೆದುಕೊಂಡು ಸರಸರನೇ ಮೈಗೆ ಸುತ್ತಿಕೊಂಡು ವೀರಗಚ್ಚೆ ಹಾಕಿಕೊಂಡು ಒನಕೆಯನ್ನು ಹಿಡಿದು ನಿಂತುಬಿಡುತ್ತಿದ್ದಳು. ಒಂದು ಹಾಡು ಕೇಳುವುದರಲ್ಲಿ ಇಷ್ಟೆಲ್ಲ ಮಾಡುವುದು ಸಾಧ್ಯವೇ ಅನ್ನುವ ಪ್ರ್ಯಾಕ್ಟಿಕಲ್ ಪ್ರಶ್ನೆ ಒಗೆಯಬೇಡಿ. ಅಷ್ಟು ದೊಡ್ಡ ಹಾಡು ಮುಗಿಯುವುದರೊಳಗೆ ಇಷ್ಟೆಲ್ಲ ಮಾಡಲು ಸಾಧ್ಯವೇ ಹೌದು ಎಂಬುದನ್ನು ನಾನು ಕಣ್ಣಾರೆ ಕಂಡಿದ್ದೇನೆ. 'ಕೈಗೆ ಸಿಕ್ಕಿದಾ ಒನಕೆ ಹಿಡಿದಳು' ಎಂದು ಪಿ.ಬಿ.ಶ್ರೀನಿವಾಸ ಹಾಡುವುದರಲ್ಲಿ ಅಡುಗೆಮನೆಯ ಮೂಲೆಯಲ್ಲಿನ ಒನಕೆ ಅವಳ ಕೈಗೆ ಬಂದಿರುತ್ತಿತ್ತು. 'ವೀರಗಚ್ಚೆಯಾ ಹಾಕಿ ನಿಂತಳು' ಎನ್ನುವಷ್ಟರಲ್ಲಿ ಉಟ್ಟ ಸೀರೆಯ ನೆರಿಗೆಗಳನ್ನು ಹಿಡಿದು ಹಿಂದೆ ತೆಗೆದುಕೊಂಡು ವೀರಗಚ್ಚೆ ಹಾಕಿಕೊಂಡು ಬಿಡುತ್ತಿದ್ದಳು. ಮತ್ತಾಮೇಲೆ ಅವಳ ಮೈಮೇಲೆ ನಮ್ಮ ನೆಚ್ಚಿನ ನಟಿ ಜಯಂತಿ ಬರುತ್ತಿದ್ದಳೋ ಅಥವಾ ಸ್ವತಃ ಒನಕೆ ಓಬವ್ವನೇ ಆವಾಹನೆಯಾಗುತ್ತದ್ದಳೋ ನಾವು ತಲೆ ಕೆಡಿಸಿಕೊಂಡಿರಲಿಲ್ಲ. ಅಂತೂ ವಿಷ್ಣುವರ್ಧನ್ ಕಥೆಯ ಕೊನೆಯ ಘಟ್ಟಕ್ಕೆ ತಲುಪಿ 'ಅಮರಳಾದಳು ಓಬವ್ವಾ ದುರ್ಗವು ಮರೆಯದ ಓಬವ್ವಾ' ಎಂದು ಹೇಳಿ ಶಾಲೆಯ ಮಕ್ಕಳ ಕಣ್ಣಲ್ಲಿ ಕಣ್ಣೀರ ಕೋಡಿ ಹರಿಸುವ ಹೊತ್ತಿಗೆ ಇಲ್ಲಿವಳು ಸಕಲ ವೀರಾವೇಶದೊಂದಿಗೆ ಒನಕೆಯಿಂದ ನಮ್ಮ ಮನೆಯ ಶಗಣಿಯಿಂದ ಸಾರಿಸಿದ ಮಣ್ಣಿನ ನೆಲವನ್ನು ಕುಟ್ಟಿ ಕುಟ್ಟಿ ಒಂದಿಷ್ಟು ಮಣ್ಣು ಎದ್ದು ಒಂದೆರೆಡು ಸಣ್ಣಪುಟ್ಟ ತೆಗ್ಗುಗಳಾಗಿ ಮನೆಯ ಮಾಲಿಕರು ಏನು ನಡೆದಿದೆ ಇವರ ಮನೆಯಲ್ಲಿ ಎಂದು ಬಯ್ಯಲು ಮೇಲೆ ಓಡೋಡಿ ಬಂದು ಅಭಿನವ ಓಬವ್ವನನ್ನು ನೋಡುತ್ತ ದಂಗಾಗಿ ನಿಂತುಬಿಡುತ್ತಿದ್ದರು. ಅವರೇನಾದರೂ ಆಗ ಮಾತನಾಡಿದರೆ ಹೈದರಾಲಿಯ ಸೈನಿಕರಿಗಾದ ಗತಿಯೇ ತಮಗೂ ಆಗಬಹುದೆಂಬ ಹೆದರಿಕೆಯಿಂದ ಮಾತನಾಡದೇ ಶಬ್ದ ಮಾಡದಂತೆ ಮೆಟ್ಟಿಲು ಇಳಿದು ಹೋಗಿ ಬಿಡುತ್ತಿದ್ದರು. ಇವಳ ಹಾಡಿನ ಪ್ರೇಮ 'ನಾಗರಹಾವಿ'ಗಷ್ಟೇ ಭುಸುಗುಟ್ಟಿದ್ದರೆ ನನಗೇನೂ ಆತಂಕವಿರಲಿಲ್ಲ. ಆದರೆ ಅದು 'ದೇವರ ಕಣ್ಣು' ವರೆಗೂ ಹರಿದು ಬಂದು ನನಗೆ ತ್ರಾಸು ಕೊಡಲಾರಂಭಿಸಿತು. 'ಓ ಇನಿಯಾ ನೀ ಎಲ್ಲಿರುವೆ, ನಿನಗಾಗಿ ನಾ ಕಾದಿರುವೆ' ಎಂದು ದೆವ್ವದಂತೆ ಆ ಚಿತ್ರದಲ್ಲಿ ನಟಿಯೊಬ್ಬಳು ಹಾಡುತ್ತ ಕಾಡು ಮೇಡು ಅಲೆಯಲಾರಂಭಿಸಿದಳೆಂದರೆ ಇವಳು ಭೂತವೊಂದನ್ನು ತನ್ನ ಮೇಲೆ ಬಿಟ್ಟುಕೊಳ್ಳುತ್ತಿದ್ದಳು. ಆ ಸಮಯಕ್ಕೆ ಸರಿಯಾಗಿ ಅಮ್ಮನೇನಾದರೂ ಹತ್ತಿರದಲ್ಲೇ ಇದ್ದ ಅಜ್ಜಿಯ ಮನೆಗೆ ಹೋಗಿದ್ದಳೆಂದರೆ ಭೂತಕ್ಕೆ ಇನ್ನೂ ಶಕ್ತಿ ಹೆಚ್ಚಾಗುತ್ತಿತ್ತು. ಬಿಳಿ ಸೀರೆ ಉಟ್ಟು ತಲೆಕೂದಲನ್ನೆಲ್ಲ ಬಿಚ್ಚಿ ಹರಡಿಕೊಂಡು ನನ್ನನ್ನು ಹೆದರಿಸುತ್ತಿದ್ದಳು. ನಾನೋ ಹೆದರಿ ಕಂಗಾಲಾಗಿ ಸತ್ತೆನೋ ಕೆಟ್ಟೆನೋ ಅನ್ನುತ್ತ ಅಜ್ಜಿಯ ಮನೆಗೆ ಓಡಿ ಹೋಗುತ್ತಿದ್ದೆ. ಹೀಗಾಗಿ ಮುಂದೆ ಎಷ್ಟೋ ವರುಷಗಳು ಈ 'ಓ ಇನಿಯಾ' ಹಾಡು ನನ್ನನ್ನು ಹೆದರಿಸಿದ್ದಿದೆ. 
ಪ್ರೀತಿಯಲ್ಲಿ ಬಿದ್ದು ವಿಲಿವಿಲಿ ಒದ್ದಾಡುವ ಪ್ರೇಮಿಗಳಿಗಂತೂ ಹಾಡುಗಳೆಂದರೆ ತಮ್ಮ ಗುರಿಯನ್ನು ಮುಟ್ಟಿಸುವ ಸುವರ್ಣ ಸೇತುವೆಗಳಿದ್ದಂತೆ. ಆಗ ಅವರ ಸಹಾಯಕ್ಕೆ ಗಾಯನ ಪ್ರಪಂಚದ ದಿಗ್ಗಜರೆಲ್ಲರೂ ಓಡೋಡಿ ಬರುತ್ತಾರೆ. "ನಾ ಮೆಚ್ಚಿದ ಹುಡುಗನಿಗೆ ಕಾಣಿಕೆ ತಂದಿರುವೆ" ಎಂದು ಎಸ್. ಜಾನಕಿ ಹಾಡಿ ಹುರಿದುಂಬಿಸಿದರೆ, "ಏ ಮೇರಾ ಪ್ರೇಮ ಪತ್ರ ಪಢಕರ ಕೆ ತುಮ ನಾರಾಜ ನಾ ಹೋನಾ" ಎನ್ನುತ್ತ ರಫಿ ಸಹಾಬ ಬರುತ್ತಾರೆ. "ಸಾಗರ ಕಿನಾರೆ ದಿಲ ಏ ಪುಕಾರೆ" ಎಂದು ಕಿಶೋರ ದಾ ಹೇಳುತ್ತಾನೆ. "ದಿಲ್ ಕಾ ಆಲಮ್ ಮೈ ಕ್ಯಾ ಬತಾವೂಂ ತುಝೆ" ಎಂದು ಕುಮಾರ ಸಾನು ಪ್ರಶ್ನಿಸುತ್ತಾನೆ. ಹೊಸ ಹುಡುಗರಿಗಾಗಿ "ಮಳೆ ನಿಂತು ಹೋದ ಮೇಲೆ ಹನಿಯೊಂದು ಜಾರಿದೆ" ಎಂದು ಸೋನು ನಿಗಮ ಹಾಡಿದರೆ, "ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ" ಎಂದು   ಶ್ರೇಯಾ ಘೋಷಾಲ್ ಹೇಳುತ್ತಾಳೆ. ಇವರೆಲ್ಲ ಪ್ರೇಮಿಗಳ ದನಿಯಾಗಿ ಅವರ ಸಂದೇಶಗಳನ್ನು ಸರಿಯಾದ ವ್ಯಕ್ತಿಗಳಿಗೆ ಸರಿಯಾದ ಸಮಯದಲ್ಲಿ ತಲುಪಿಸುವ ಪವಿತ್ರ  ಕೈಂಕರ್ಯದಲ್ಲಿ ಸದಾ ತೊಡಗಿಸಿಕೊಂಡಿದ್ದಾರೆ. ಇಂಥ ಪ್ರೇಮ-ರೋಗಗ್ರಸ್ತ ನಾಯಕ, ನಾಯಕಿಯರೊಡನೆ ಉಳಿದ ಹುಡುಗರು ಸಹಕಲಾವಿದರ ವೇಷದಲ್ಲಿ "ಕುಣಿದಾಡುವಾ ವಯಸಿದು, ನಲಿದಾಡುವ ದಿನವಿದು" ಎಂದು ಕೋರಸ್ ಹಾಡುತ್ತ ನರ್ತಿಸುತ್ತಿರುತ್ತಾರೆ.
ನಾವು ಅದೇ ತಾನೇ ಕಾಲೇಜು ಮೆಟ್ಟಿಲು ಹತ್ತಿದ ವೇಳೆ. ಶಾಲೆಯ ಬಿಗಿ ವಾತಾವರಣದಿಂದ ಒಮ್ಮಿಲೇ ಮುಕ್ತ ಹವೆಗೆ ಒಡ್ಡಿಕೊಂಡ ಅನುಭವ. ಪ್ರತೀ ಕ್ಲಾಸಿಗೆ ಆ ಲೆಕ್ಚರ್ ಹಾಲಿನಿಂದ ಈ ಹಾಲಿಗೆ, ಇಲ್ಲಿಂದ ಇನ್ನೊಂದು ಹಾಲಿಗೆ ತಿರುಗಾಡಬೇಕಿತ್ತು. ಫ್ರೀ ಪಿರಿಯಡ್ ಇದ್ದಾಗ ಖಾಲಿ ಕ್ಲಾಸೊಂದನ್ನು ಹುಡುಕಿಕೊಂಡು ಹೋಗಿ ಕುಳಿತುಕೊಳ್ಳುತ್ತಿದ್ದೆವು. ನಮಗಿಂತ ಸಾಕಷ್ಟು ಸಿನೀಯರ್ ಇದ್ದ  ಹುಡುಗನೊಬ್ಬ ಇಂಥ ಬೆದರುಗಣ್ಣಿನ ಹೊಸಹುಡುಗಿಯರನ್ನೇ ಟಾರ್ಗೆಟ್ ಮಾಡಿಕೊಂಡು ಕ್ಲಾಸಿನಲ್ಲಿ ಬಂದು ಕುಳಿತುಕೊಳ್ಳುತ್ತಿದ್ದ. ಮತ್ತೆ ಹಾಡಲು ಶುರುವಿಟ್ಟುಕೊಳ್ಳುತ್ತಿದ್ದ. ಅದೇ ಅವನು ಹೊಸ ಹುಡುಗಿಯರಿಗೆ ಕೊಡುತ್ತಿದ್ದ ರ್ಯಾಗಿಂಗ್ ಪನಿಶಮೆಂಟ್ ಆಗಿತ್ತು. ಒಂದು ದಿನ ಅವನು ಹಿಂದಿಯಲ್ಲಿ ಡೈಲಾಗ್ ಹೊಡೆಯುತ್ತ ಆಗ ತಾನೇ ಬಂದಿದ್ದ ಸಿನೆಮಾವೊಂದರ ಹಾಡು, "ಡಿಸ್ಕೊ 82, ಡಿಸ್ಕೊ 82, ತೂ ಎಕ ಡಿಸ್ಕೊ" ಎಂದು ಹಾಡಲಾರಂಭಿಸಿದ ಕೂಡಲೇ ನಾವು ಜಾಗ ಖಾಲಿ ಮಾಡಲಾರಂಭಿಸಿದೆವು. ಅವನಿಗೋ ತನ್ನ ಸಿರಿಕಂಠದಿಂದ ಹಾಡುಗಾರಿಕೆಯ ಪ್ರದರ್ಶನವಾಗಬೇಕಿತ್ತು. ಅದಕ್ಕೆ ನಮ್ಮಂಥ ಮುಗ್ಧ ಪ್ರೇಕ್ಷಕರ ಅವಶ್ಯಕತೆ ಇತ್ತು. ಹಾಗಾಗಿ ಮಧ್ಯದಲ್ಲೇ ಹಾಡು ನಿಲ್ಲಿಸಿ ನಾವು ರಸಭಂಗ ಮಾಡದೇ ಒಂದೆರೆಡು ಹಾಡು ಕೇಳಿಕೊಂಡು ಹೋಗುವ ಕೃಪೆ ತೋರಬೇಕಾಗಿ ನಾಟಕೀಯವಾಗಿ ಕೈ ಜೋಡಿಸಿ ವಿನಂತಿಸಿಕೊಂಡ. ಹಾಡಿನ ವಿಪರೀತ ಹುಚ್ಚಿದ್ದ ಗೆಳತಿಯೊಬ್ಬಳು ಕುಳಿತುಕೊಳ್ಳುವ ಇರಾದೆ ತೋರಿದರೂ ನಾವು ಹೊರಟೇಬಿಟ್ಟೆವು. "ರುಕಜಾ ಓ ಜಾನೆವಾಲಿ ರುಕಜಾ, ಮೈ ತೊ ರಾಹಿ ತೆರೆ ಮಂಝಿಲ ಕಾ" ಎಂದು ಅವನು ಕೂಗಿ ಹಾಡಿದರೂ ನಾವು ಕರುಣೆ ತೋರದಾದೆವು. ಅವನಿಗೆ ಭಾರೀ ನಿರಾಸೆಯಾಯ್ತು. ಆದರೆ ಅವನ ರಸಿಕತನ ಮತ್ತು ಸಮಯಸ್ಫೂರ್ತಿ ಅಂಥ ಹೊತ್ತಿನಲ್ಲೂ ಕೈಕೊಡಲಿಲ್ಲ. " ಓ ಜಾನೆವಾಲೆ ಹೋ ಸಕೆ ತೋ ಲೌಟಕೆ ಆನಾ" ಎಂದು ಮುಕೇಶನ ಕಂಠದಲ್ಲಿ ಅಳತೊಡಗಿದ. ನಾವು ನಗುನಗುತ್ತ ಕೇಳಿ ಹೊರಬಂದೆವು.
ನಾವು ಬಿ.ಕಾಂ. ಕೊನೆಯ ವರ್ಷದಲ್ಲಿದ್ದಾಗ ನಮ್ಮ ಕ್ಲಾಸಿನ ಒಬ್ಬ ಹುಡುಗನ ಕಾಕ ದೃಷ್ಟಿ ಅದು ಹೇಗೋ ಏನೋ ನಮ್ಮ ಗೆಳತಿಯೊಬ್ಬಳ ಮೇಲೆ ಬಿದ್ದುಬಿಟ್ಟಿತು. ಮತ್ತು ಅದೇ ನೆಪದಲ್ಲಿ ಅವನು ಕೋಗಿಲೆಯಂತೆ ಹಾಡಲಾರಂಭಿಸಿಬಿಟ್ಟ. ಮುಕೇಶನನ್ನು ವಶ ಮಾಡಿಕೊಂಡುಬಿಟ್ಟ. ಅಲ್ಲಿಯವರೆಗೂ ಅದೆಲ್ಲಿ ಎಮ್ಮೆ ಕಾಯುತ್ತಿದ್ದನೋ ಕೊನೆಯ ವರ್ಷದಲ್ಲಿ ಒಮ್ಮಿಂದೊಮ್ಮಿಲೇ ಅವಳನ್ನು ನೋಡಿ ಐಲುಪೈಲಾಗಿ ವರ್ತಿಸಲಾರಂಭಿಸಿದ. ರೊಮ್ಯಾಂಟಿಕ್ ಹಾಡುಗಳನ್ನು ಹಾಡುತ್ತ ಅವಳ ಹಿಂದೆ ಹಿಂದೆ ಹೋಗಿ ಮನೆಯ ವರೆಗೂ ಬಿಟ್ಟುಬರಲಾರಂಭಿಸಿದ. "ಕಭಿ ಕಭಿ ಮೆರೆ ದಿಲ್ ಮೆ ಖಯಾಲ ಆತಾ ಹೈ, ಕಿ ಜೈಸೆ ತುಝಕೊ ಬನಾಯಾ ಗಯಾ ಹೈ ಮೇರೆ ಲಿಯೆ" ಎಂದು ಕೂತಲ್ಲಿ ನಿಂತಲ್ಲಿ ಹಾಡಲಾರಂಭಿಸಿದ. ಕೊನೆಗೆ ಬೇಸತ್ತ ಹಿರೋಯಿನ್ನಳ ಅಣ್ಣಂದಿರು ನಾಲ್ಕು ಧರ್ಮದೇಟು ನೀಡಿದರು. ಪೆಟ್ಟು ತಿಂದರೂ ಪಟ್ಟು ಬಿಡದೇ ಥೇಟ್ ಸಿನೆಮಾ ಹೀರೊಗಳಂತೆ " ಪ್ಯಾರ ತೆರಾ ಪಾನೆ ಕೋ ಹಮನೆ ಅಪನಾ ಸಬ ಕುಛ ಖೋಯಾ" ಎಂದು ಅಲವತ್ತುಕೊಂಡ. ಯಾವುದೂ ಉಪಯೋಗಕ್ಕೆ ಬರಲಿಲ್ಲ. ಕೊನೆಗೂ ಸಹಾಯ ಮಾಡಿದ್ದು ಪಾಪ ಮುಕೇಶನೇ. ದುರಂತ ನಾಯಕ "ಕೊಯಿ ಜಬ ತುಮ್ಹಾರಾ ಹೃದಯ ತೋಡ ದೇ ತಡಪತಾ ಹುವಾ ಜಬ ಕೊಯಿ ಛೋಡ ದೇ, ತಬ ತುಮ ಮೆರೆ ಪಾಸ ಆನಾ ಪ್ರಿಯೆ, ಮೆರಾ ದರ ಖುಲಾ ಹೈ ಖುಲಾ ಹೀ ರಹೆಗಾ ತುಮ್ಹಾರೆ ಲಿಯೆ" ಎಂದು ಕಣ್ಣೀರು ಹಾಕಿ ತನ್ನ ಪ್ರೇಮ ಪ್ರಕರಣಕ್ಕೆ ತಿಲಾಂಜಲಿ ನೀಡಿದ. ನೋಡಿ, ಹೇಗೆ ಇವರಿಗೆಲ್ಲ ತಮ್ಮ ಭಾವನೆಗಳನ್ನು ತೋಡಿಕೊಳ್ಳಲು, ತೋರಿಸಿಕೊಳ್ಳಲು ನಮ್ಮ ಶ್ರೇಷ್ಠ ಗಾಯಕರು, ಅವರ ಹಿನ್ನೆಲೆಯಲ್ಲಿ ಗೀತಕಾರರು, ಸಂಗೀತಕಾರರು ನೆರವಾದರು! ನಮ್ಮಲ್ಲಿ ಅದೆಷ್ಟು ಹಾಡುಗಳ ಅಮೂಲ್ಯ ಭಂಡಾರವೇ ಇದೆಯೆಂದರೆ ನಮ್ಮ ಪ್ರತೀ ಸಂದರ್ಭಕ್ಕೆ ತಕ್ಕಂತೆ ನೂರಾರು ಹಾಡುಗಳು ಒದಗಿಬರುತ್ತವೆ. ನೀವೇನೂ ಕಷ್ಟ ಪಡದೇ, ಇಷ್ಟಪಟ್ಟ ಹಾಡುಗಳನ್ನು ಶುದ್ಧ ಸ್ವರದಲ್ಲಿ ಹಾಡಿದರೆ ಸಾಕು, ನಿಮ್ಮ ಭಾವನೆಗಳು ಹೊಳೆಯಾಗಿ ಹರಿದು ಆ ದಂಡೆ ತಲುಪಿ ಅಲ್ಲಿನ ನೆಲವನ್ನು ತಂಪುಗೊಳಿಸುತ್ತವೆ. ಇಲ್ಲಿನ ಕುದಿಯ ಬಿಸಿ ಅಲ್ಲಿ ತಟ್ಟುತ್ತದೆ. ಅಲ್ಲಿನ ನಿಟ್ಟುಸಿರು ಇಲ್ಲಿನ ಬಾಯಲ್ಲಿ ಹೊರಬರುತ್ತದೆ. 
ಪ್ರೇಮ ಉಂಟಾದರೆ ಸಹಸ್ರ ಸಹಸ್ರ ಗೀತೆಗಳು ಓಡೋಡಿ ಬರುತ್ತವೆ. ಯಾವುದು ಅನ್ನುತ್ತೀರಿ, ಯಾವುದು ಬಿಡುತ್ತೀರಿ. ಇವತ್ತು "ಪೆಹಲಾ ನಶಾ, ಪೆಹಲಿ ಖುಮಾ" ಹಾಡುತ್ತೇನೆ, "ಆಪಕೆ ನಜರೋ ನೆ ಸಮಝಾ ಪ್ಯಾರ ಕೆ ಕಾಬಿಲ್  ಮುಝೆ" ನಾಳೆಗಿರಲಿ ಎಂದು ನೀವೆ ಆರಿಸಿ ಆರಿಸಿ ಎತ್ತಿಟ್ಟುಕೊಳ್ಳಬೇಕು. ಪ್ರೇಮಕ್ಕೆ ಎರಡೂ ಕಡೆಗಳಿಂದ ಗ್ರೀನ ಸಿಗ್ನಲ್ ಸಿಕ್ಕು ಮರ ಸುತ್ತುವ ವ್ಯಾಯಾಮ ಶುರುವಾದ ಮೇಲೆ ಮತ್ತಷ್ಟು ಹಾಡುಗಳು. "ಗಗನವು ಎಲ್ಲೋ, ಭೂಮಿಯು ಎಲ್ಲೋ" ಅನಿಸಲಾರಂಭಿಸುತ್ತದೆ. ಇಡೀ ಜಗತ್ತು ಮರೆತು ಹೋಗಿ "ನೀನೆ ನನ್ನ ಮನಸಲಿ, ಬರಿ ನಿಂದೆ ನನ್ನ ಕನಸಲಿ" ಆಗುತ್ತದೆ. ಇನ್ನೂ ಮುಂದೆ ಹೋಗಿ "ಅನ್ನೊರೆಲ್ಲಾ ಅನ್ನಲಿ" ಎನ್ನುವ ಧಾಷ್ರ್ಟ್ಯ ಬೆಳೆಯುತ್ತದೆ. ನಿಮ್ಮ ಪ್ರೇಮಿ ಊರಲ್ಲಿಲ್ಲ ಎಂದುಕೊಳ್ಳಿ, ವಿರಹದ ಬೆಂಕಿ ನಿಮ್ಮನ್ನು ಸುಡುತ್ತದೆ, ಮತ್ತು "ವಿರಹಾ ನೂರು ನೂರು ತರಹಾ"  ಎಂದು ಹಾಡುತ್ತ ಪಿ.ಸುಶಿಲಾ ಬರುತ್ತಾಳೆ. ಇಲ್ಲವೇ ನಿಮ್ಮ ಜಾಗದಲ್ಲಿ ನೀವು, ನಿಮ್ಮ ಪ್ರೇಮಿಯ ಸ್ಥಳದಲ್ಲಿ ಅವಳು ನಿಂತು ಮೊಹಮ್ಮದ ರಫಿ ಮತ್ತು ಲತಾ ಮಂಗೇಶ್ಕರಳಂತೆ "ವೊ ಜಬ ಯಾದ ಆಯೆ ಬಹುತ ಯಾದ ಆಯೆ" ಅಂತ ಹಾಡಿಕೊಳ್ಳಿ. ಒಬ್ಬರೇ "ಯಾದ ಮೇ ತೇರೆ ಜಾಗ ಜಾಗ ಕೆ ಹಮ, ರಾತ ಭರ ಕರವಟೆ ಬದಲ್ತೆ ಹೈಂ" ಎಂದು ಹಾಸಿಗೆಯ ಮೇಲೆ ಹೊರಳಾಡಿ ರಾತ್ರಿಯನ್ನು ಬೆಳಗು ಮಾಡಿ. 
ದುರದೃಷ್ಟವಶಾತ್  ನಿಮ್ಮ ಪ್ರೇಮವೇನಾದರೂ ವಿಫಲವಾದರಂತೂ ಅಳಲಿಕ್ಕೆ ಅಳಿಸಲಿಕ್ಕೆ ಎಲ್ಲಾ ಗಾಯಕರು ಓಡೋಡಿ ಬರಲು ತುದಿಗಾಲ ಮೇಲೆ ನಿಂತಿರುತ್ತಾರೆ. "ನಸೀಬ ಮೆ ಜಿಸಕೆ ಜೋ ಲಿಖಾ ಥಾ ವೋ ತೆರೆ ಮೆಹಫಿಲ ಮೆ ಕಾಮ ಆಯಾ" ಎಂದು ರಫಿ ಕಣ್ಣೀರಾದರೆ, "ಮೆರೆ ಕಿಸಮತ ಮೆ ತೂ ನಹಿ ಶಾಯದ, ಮೈ ತೆರಾ ಇಂತಜಾರ ಕರತಾ ಹೂಂ" ಅಂತ ಸುರೇಶ ವಾಡಕರ ಮತ್ತು ಲತಾ ಅಳುತ್ತಾರೆ. "ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ, ಅದರ ಮಧುರ ಸ್ಮøತಿಯ ನಾನು ಹೇಗೆ ತಾನೆ ಅಳಿಸಲಿ?" ಎಂದು ಪಿ.ಬಿ.ಶ್ರೀ ಕೇಳುತ್ತಾರೆ. "ಇವನು ಗೆಳೆಯನಲ್ಲ, ತುಂಬ ಸನಿಹ ಬಂದಿಹನಲ್ಲ" ಎಂದು ಶ್ರೇಯಾ ಕಂಗಾಲಾಗಿ ಬಿಕ್ಕುತ್ತಾಳೆ. ಆದರೂ "ಅಬ್ ತೇರೆ ಬಿನ್ ಜೀ ಲೇಂಗೆ ಹಮ್, ಜೆಹರ್ ಜಿಂದಗಿ ಕಾ ಪೀಲೇಂಗೆ ಹಮ್" ಎಂದು ಕುಮಾರ ಸಾನು ಧೈರ್ಯ ತುಂಬಿ ಬದುಕಿನೆಡೆಗೆ ಹೊಸ ಆಸೆಗಳನ್ನು ಹುಟ್ಟಿಸುತ್ತಾನೆ.
ಮುಂದೆ ನಿಮ್ಮ ಮದುವೆ ಬೇರೆ ಯಾರದೋ ಜೊತೆ ಆಗಿ, ನಂತರ ಸಹಜ ಪರಿಣಾಮವಾದ ಮಕ್ಕಳು ನಿಮ್ಮ ಮಡಿಲು ತುಂಬಿದ ಮೇಲೆ ಅವರನ್ನು ಮುದ್ದಿಸಲು, ಲಾಲಿ ಹಾಡಿ ಮಲಗಿಸಲು ಮತ್ತಷ್ಟು ಹಾಡುಗಳು. ಮಕ್ಕಳು ಶಾಲೆಗೆ ಹೊರಟ ನಂತರ "ಅ ಆ ಇ ಈ ಕನ್ನಡದಾ ಅಕ್ಷರ ಮಾಲೆ, ಅಮ್ಮಾ ಎಂಬುದು ಕಂದನ ಕರುಳಿನ ಕರೆಯೋಲೆ" ಹಾಡು, "ಸಂಪಿಗೆ ಮರದಾ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು" ಹಾಡು ಎಲ್ಲ ಸಾಲಾಗಿ ಶಿಸ್ತಾಗಿ ಬಂದು ಕೈಕಟ್ಟಿ ನಿಲ್ಲುತ್ತವೆ.
ನಂತರ ಅದೃಷ್ಟವಶಾತ್ ನಿಮ್ಮ ಸಂಸಾರ ಸುಖಮಯವಾಗಿದ್ದಲ್ಲಿ "ನಮ್ಮ ಸಂಸಾರಾ ಆನಂದ ಸಾಗರಾ, ಪ್ರೀತಿಯೆಂಬ ದೈವವೇ ನಮಗಾಧಾರಾ" ಎಂದು ಮನೆಮಂದಿಯೆಲ್ಲ ಕೂಡಿ ಕೋರಸ್ ಹಾಡಿ. ಇಲ್ಲವೇ "ಮುಳ್ಳೇ ಇಲ್ಲದ ಗುಲಾಬಿ ಹೂಗಳು ನಾವೆಲ್ಲಾ, ಪ್ರೇಮದ ಪರಿಮಳ ತುಂಬಿದೆ ನಮ್ಮಾ ಒಡಲೆಲ್ಲಾ" ಎಂದು ಸಂತಸ ಪಡಿ. ಸುಖವೆಂಬುದು ಮರೀಚಿಕೆಯಾಗಿದೆಯೇ, "ಹರುಷ ದೂರದ ಮೇರು ಏರದೆನ್ನಾ ಬಾಳ ತೇರು, ಪಯಣಾ ಏರುಪೇರು" ರೆಡಿ ಇದೆ. ಹಳೆಗೆಳತಿಯ ನೆನಪು ಅಲೆಅಲೆಯಾಗಿ ಬಂದು ಬಂಡೆಗಲ್ಲು ಮಾಡಿಕೊಂಡರೂ ನಿಮ್ಮ ಮನಸ್ಸಿಗಪ್ಪಳಿಸುತ್ತಿದೆಯೇ, "ಯಾದ ನ ಜಾಯೆ ಬೀತೆ ದಿನೊಂ ಕಿ, ಜಾಕೆ ನ ಆಯೆ ಜೋ ದಿನ ದಿಲ ಕ್ಯೂಂ ಬುಲಾಯೆ ಉನ್ಹೆ" ಎಂದು ಉತ್ತರವಿಲ್ಲದ ಪ್ರಶ್ನೆಗಳನ್ನು ನಿಮಗೆ ನೀವೇ ಹಾಕಿಕೊಂಡು ಸಂಕಟಪಟ್ಟು ಒದ್ದಾಡಿ ಒದ್ದಾಡಿ ಎಂಜಾಯ್ ಮಾಡಿ. ಜೀವನದ ಸುಖ-ದುಃಖಗಳನ್ನುಂಡು ಮೈ-ಮನಸ್ಸು ಮಾಗಿದ ಮೇಲೆ ನಡಗುವ ಧ್ವನಿಯಲ್ಲಿ ಎಂ. ಬಾಲಮುರಳಿಕೃಷ್ಣ ಅವರು ನಿಮಗಾಗಿಯೇ ಹಾಡಿದ "ದೇವರು ಹೊಸೆದಾ ಪ್ರೇಮದ ದಾರ" ಕೇಳುತ್ತ  ಕಣ್ಣೀರಾಗಿ. ಜೀವನದ ಬಿರುಬಿಸಿಲು, ಧಾರಾಕಾರ ಮಳೆ, ಕೆಟ್ಟ ಛಳಿ ಎಲ್ಲವನ್ನೂ ಒಂದೇ ಹಾಡಿನಲ್ಲಿ ಅನುಭವಿಸಿಬಿಡಿ. ಇಳಿವಯಸ್ಸಿಗೆ "ಎಲ್ಲಿಗೆ ಪಯಣಾ, ಯಾವುದೋ ದಾರಿ ಏಕಾಂಗಿ ಸಂಚಾರಿ" ಎಂದು ಹಾಡುತ್ತ ಪಿ.ಬಿ.ಶ್ರೀ. ಊರುಗೋಲಾಗುತ್ತಾರೆ. ದಾಸವರಣ್ಯರು ಹಾಡುಗಳಲ್ಲೇ ವೇದಾಂತದ ಸಾರವನ್ನೆಲ್ಲ ತಿಳಿಸಿ ಪೊರೆಯುತ್ತಾರೆ. 
ಅಂತೂ ಹುಟ್ಟಿನಿಂದ ಸಾವಿನವರೆಗೆ ಈ ಸಿನೆಮಾ ಹಾಡುಗಳ ನಂಟು ಬಿಡದೇ ಕಾಡುವುದು, ಕಾಯುವುದು. ಒಮ್ಮೆಯೂ ಒಂದೂ ಸಿನೆಮಾ ಹಾಡು ಗುಣುಗುಣಿಸದ ಭಾರತೀಯನೇ ಇರಲಿಕ್ಕಿಲ್ಲ ಎಂದರೆ ಅತಿಶಯೋಕ್ತಿ ಅಲ್ಲವೇ ಅಲ್ಲ. ಅಷ್ಟರ ಮಟ್ಟಿಗೆ ಸಿನೆಮಾ ಹಾಡುಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿವೆ. ನಾವೆಲ್ಲ ಇಂಥ ರಸಿಕಶಿಖಾಮಣಿಗಳು ಇರುವುದರಿಂದಲೇ ನಮ್ಮ ಗಾಯಕರು, ಸಂಗೀತಕಾರರು, ಗೀತರಚನೆಕಾರರು ಪ್ರಸಿದ್ಧಿಯ ಉತ್ತುಂಗ ಶಿಖರಕ್ಕೇರಿದ್ದಾರೆ. ತೆರೆಯ ಮೇಲೆ ನಾಯಕ-ನಾಯಕಿಯೇ ಮುಖ್ಯವಾದರೂ ಅವರಿಗೆ ಕಂಠವಾಗಿ, ಅವರ ಭಾವನೆಗಳನ್ನೆಲ್ಲ ತಮ್ಮ ಗೀತೆಗಳಿಂದಲೇ ವಿಜ್ರಂಭಿಸುವ ಗಾಯಕರು ಸ್ವತಃ ನಾಯಕರಾಗಿ ಬಿಟ್ಟಿದ್ದಾರೆ. ಜನಸಾಮಾನ್ಯರ ಆರಾಧ್ಯದೈವವೇ ಅವರು.
ಈಗ ಒಮ್ಮೆ ಯೋಚಿಸಿ, ಈ ಎಲ್ಲ ಹಾಡುಗಳೇ ಇಲ್ಲದ ನಮ್ಮ ಜೀವನ ಅದೆಷ್ಟು ಬರಡಾಗುತ್ತಿತ್ತು!
                      *******************
ನೀತಾ ರಾವ್




Sunday, 4 November 2018

                  ಲಲಿತ ಪ್ರಬಂಧ

        ಮಹಿಳಾ ಸಬಲೀಕರಣದ ಗಾಲಿಗಳು
      (ವಾಹನ ಪುರಾಣ ಎಂಬ ಹೆಸರಿನಲ್ಲಿ ದಿನಾಂಕ ೪ ನವ್ಹೆಂಬರ್, ೨೦೧೮ ರಂದು ಉದಯವಾಣಿಯ ಭಾನುವಾರದ ಪುರವಣಿಯಲ್ಲಿ ಪ್ರಕಟವಾದದ್ದು)

       ಹಿಂದೊಮ್ಮೆ ಯಾವಾಗಲೋ ಐದು-ಆರನೇ ಕ್ಲಾಸಿನಲ್ಲಿರುವಾಗ, ಮನೆಗೊಂದು ಸೈಕಲ್ ಕೂಡ ಇಲ್ಲದ ಕಟಾನುಕಟಿ ದಿನಗಳಲ್ಲಿ ಒಂದು ತಾಸಿಗೆ ನಾಲ್ಕಾಣೆಯಂತೆ ನೀಡಿ ಬಾಡಿಗೆ ಸೈಕಲ್ ತಂದು ನಾನು, ನನ್ನ ಗೆಳತಿಯರು ಓಣಿಯ ತುಂಬ ಬೀಳುತ್ತ ಏಳುತ್ತ ಅಂತೂ ಸೈಕಲ್ ಕಲಿತೇ ಸೈ ಎಂದಿದ್ದೆವು. ಆದರೆ ಮುಂದೆ ಹೈಸ್ಕೂಲಿಗೆ ಹೋಗುವಾಗ ಆಗಲಿ, ದೂರದ ಕಾಲೇಜಿಗೆ ಕಾಲೆಳೆದುಕೊಂಡು ನಡೆದು ಹೋಗುವ ಸಮಯದಲ್ಲಾಗಲಿ, ಸೈಕಲ್ಲೊಂದನ್ನು ಕೊಂಡು ಸಮಯ ಉಳಿಸಬಹುದೆಂಬ ಪರಿಜ್ಞಾನ ನಮಗಾಗಲಿ ನಮ್ಮ ಪಾಲಕರಿಗಾಗಲಿ ಎಂದೂ ಮೂಡಲೇ ಇಲ್ಲವಲ್ಲ! ನಡೆಯುವುದೇ ಎಲ್ಲರ ನಿತ್ಯ ಕಾಯಕದ ಮುಖ್ಯ ಭಾಗವಾದ ಆ ದಿನಗಳಲ್ಲಿ, ತೀರಾ ದೂರವೆನಿಸಿದ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನೇ ಹೊತ್ತೊಯ್ಯುತ್ತ ಯೌವನದಿಂದ ತುಂಬಿ ತೊನೆದಾಡುತ್ತಿದ್ದ ಸಿಟಿ ಬಸ್‍ಗಳ ಜಮಾನಾದ ಎಂಬತ್ತು-ತೊಂಬತ್ತರ ದಶಕಗಳಲ್ಲಿ ಸೈಕಲ್ಲೊಂದಕ್ಕೆ ರೇಟೇನಿರಬಹುದೆಂದು ಕೂಡ ನಾವ್ಯಾರೂ ತಲೆ ಕೆಡಿಸಿಕೊಂಡವರಲ್ಲ. ಕಾಲುಗಳೆಂಬ ಹನ್ನೊಂದು ನಂಬರಿನ ಗಾಡಿ ನಮ್ಮಲ್ಲಿರುವಾಗ, ಮತ್ತವು ಸಾಕಷ್ಟು ಗಟ್ಟಿಯಿರುವಾಗ ಬೆಳಿಗ್ಗೆ ಹತ್ತು ಗಂಟೆಯ ಕ್ಲಾಸಿಗೆ ಒಂಬತ್ತೂ ನಲವತ್ತಕ್ಕೆಲ್ಲ ಮನೆ ಬಿಟ್ಟು ಕಾಲೇಜು ಸೇರುತ್ತಿದ್ದ ನಮಗೆ ಅದೊಂದು ಪ್ರಯಾಸದ ಕೆಲಸವೆಂದು ಯಾವತ್ತೂ ಅನಿಸಿರಲೇ ಇಲ್ಲ, (ಎರೆಡು ಹೆಜ್ಜೆಗೆ ಸೈಕಲ್- ಬೈಕ್ ಅಂತ ತಲೆ ತಿನ್ನುವ ಮಕ್ಕಳಿಗೆ ಈಗ ಇದನ್ನೆಲ್ಲ ಹೇಳಿದರೆ ನಿಮ್ಮ ಕಾಲದ ಗತವೈಭವದ ರೀಲು ಈಗ ಬಿಡಬೇಡ, ಆಗ ಹಾಗಿತ್ತು, ಈಗ ಬೇರೆಯಾಗಿದೆ ಎನ್ನುತ್ತಾರೆ.) ಈ ಜನ್ಮದಲ್ಲಿ ನಾನೂ ಒಂದು ದ್ವಿಚಕ್ರ ವಾಹನದ ಮೇಲೆ ಕುಳಿತು ತಿರುಗಾಡಬಹುದೆಂಬ ದುಬಾರಿ ಕನಸನ್ನು ಹಗಲಿನಲ್ಲಾಗಲಿ ಇರುಳಿನಲ್ಲಾಗಲಿ ಕಂಡದ್ದೇ ಇಲ್ಲ. ನಮ್ಮ ಮನೆಯೇ ಅಂತಲ್ಲ, ನಮ್ಮ ಸುತ್ತಮುತ್ತಲಿನ ಯಾರ ಮನೆಗಳಲ್ಲೂ ಯಾವುದೇ ವಾಹನಗಳು ಇರಲಿಲ್ಲ. ಕೆಲವರ ಮನೆಗಳ ಪಡಸಾಲೆಗಳಲ್ಲಿ ಗೋಡೆಗೊರಗಿ ನಿಂತ ಸೈಕಲ್ಲುಗಳ ಮೇಲೆ ನನಗಂತೂ ಎಂದೂ ಲವ್ವಾಗಿರಲಿಲ್ಲ. ಯಾರೋ ಕೆಲವರ ಮನೆಗಳಲ್ಲಿ ಅನುಕೂಲವಿದ್ದವರು ಬಜಾಜ ಸ್ಕೂಟರಿಗೆ ನಂಬರು ಹಚ್ಚಿ ವರ್ಷಾನುಗಟ್ಟಲೇ ಕಾದು ನಂಬರು ಬಂದಾಗ ಅದನ್ನು ಬೇರೆಯವರಿಗೆ ಕೊಟ್ಟು ಅದರ ಮೇಲೊಂದಿಷ್ಟು ಹೆಚ್ಚಿಗೆ ದುಡ್ಡು ಇಸಿದುಕೊಂಡು ಫಾಯಿದೆ ಮಾಡಿಕೊಳ್ಳುತ್ತಿದ್ದರೇ ವಿನಹ ತಾವೇ ಕೊಂಡು ಸವಾರಿ ಮಾಡುವಷ್ಟು ಹವ್ಯಾಸವನ್ನು ಬೆಳೆಸಿಕೊಂಡಿರಲಿಲ್ಲ. 
     ನಾವು ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿ ನಮ್ಮ ಎಲ್ಲ ಲೆಕ್ಚರರುಗಳು ಕೂಡ ನಡೆದೇ ಬರುತ್ತಿದ್ದರು. ಕೇವಲ ಒಬ್ಬರ ಬಳಿ ಲ್ಯಾಂಬ್ರೆಟ್ಟಾ ಎನ್ನುವ ಸ್ಕೂಟರ್ ಇತ್ತು ಮತ್ತದು ಫಡ್ ಫಡ್ ಸಪ್ಪಳವಿಲ್ಲದೇ ಬರುತ್ತಿರಲಿಲ್ಲ. ನಮ್ಮ ಒಬ್ಬನೇ ಒಬ್ಬ ಕ್ಲಾಸಮೇಟನ ಹತ್ತಿರ, ಆಗ ಬಹಳ ಚಾಲ್ತಿಯಲ್ಲಿದ್ದ ಇಂಡ್-ಸುಝುಕಿ ಬೈಕ್ ಇತ್ತು. ಅದರ ಮೇಲೆ ಅವನು ಭರ್ ಎಂದು ಹೋಗುವುದನ್ನು ನೋಡಿದಾಗಲೆಲ್ಲ ಎರೆಡು ಫೀಲಿಂಗಗಳು ನನ್ನನ್ನು ಕಾಡುತ್ತಿದ್ದವು. ಒಂದು, ನಾನು ಮದುವೆಯಾಗುವ ಹುಡುಗನ ಹತ್ತಿರವೂ ಒಂದು ಬೈಕಿರಬೇಕು, ಇನ್ನೊಂದು ಈ ನಮ್ಮ ಕ್ಲಾಸಮೇಟ್ ಮಹಾರಾಯ ಈ ರೀತಿ ಜೋರಾಗಿ ಗಾಡಿ ಓಡಿಸಿದರೆ ಖಂಡಿತಾ ಬಿದ್ದು ಅವಘಡ ಮಾಡಿಕೊಳ್ಳುತ್ತಾನೆ ಅಂತ. ಪುಣ್ಯವಶಾತ್ ಅಂಥದ್ದೇನೂ ಆಗಲಿಲ್ಲ. ಮತ್ತೆ ನನ್ನ ಪತಿರಾಯರು ಮದುವೆಗೆ ಒಂದಷ್ಟೇ ದಿನ ಮೊದಲು ಒಂದು ಸೆಕೆಂಡ್ ಹ್ಯಾಂಡ್ ಲೂನಾ ಖರೀದಿಸಿ ನನ್ನನ್ನು ನಿರಾಸೆಯ ಕೂಪಕ್ಕೆ ತಳ್ಳಿದರೂ ಮುಂದೆ ಮೂರು ಬೇರೆ ಬೇರೆ ಬೈಕುಗಳ ಮೇಲೆ ನನ್ನನ್ನು ಹತ್ತಿಸಿಕೊಂಡು ತಿರುಗಾಡಿದರು. ಇದೀಗ ರಾಯಲ್ ಎನ್‍ಫೀಲ್ಢನ ದುರಾಸೆಗೆ ಬಿದ್ದು ಅದರ ಭಾರವನ್ನು ನಿಭಾಯಿಸುವುದರಲ್ಲೇ ಬೆವರಿಳಿಸುತ್ತಿರುವಾಗ ನನ್ನ ಭಾರವನ್ನೂ ಅವರ ಮೇಲೆ ಹಾಕುವುದು ಬೇಡವೇ ಬೇಡವೆಂದುಕೊಂಡು ಬೈಕಿನ ಬಗ್ಗೆ ನಿರ್ಮೋಹಿಯಾಗಿಬಿಟ್ಟಿದ್ದೇನೆ.
      ನಾನು ಬ್ಯಾಂಕಿನ ಕೆಲಸಕ್ಕೆ ಸೇರಿ ವಿಜಾಪುರಕ್ಕೆ ಹೊದಾಗ ನಾನೂ ಒಂದು ಸೈಕಲ್ಲಾದರೂ ಕೊಳ್ಳಬೇಕೆಂಬ ಆಸೆ ಬಲವತ್ತರವಾಯಿತು. ಇಬ್ರಾಹಿಂಪುರದ ಹತ್ತಿರದ ನನ್ನ ಬಾಡಿಗೆ ಮನೆಯಿಂದ ಒಂದಿಷ್ಟು ನಡೆದು ಬಸ್ಟಾಪ್ ತಲುಪಿ ನಂತರ ಸಿಟಿ ಬಸ್ ಹಿಡಿದು ಮಿನಾಕ್ಷಿ ಚೌಕಿನಲ್ಲಿ ಇಳಿದುಕೊಂಡು ಮತ್ತೆ ಅಲ್ಲಿಂದ ಸಿದ್ಧೇಶ್ವರ ರೋಡಿನಲ್ಲಿದ್ದ ನನ್ನ ಬ್ಯಾಂಕಿಗೆ ತಲುಪಿದಾಗ ಹತ್ತು ಇಲ್ಲವೇ ಹತ್ತೂ-ಕಾಲು ಆಗಿರುತ್ತಿತ್ತು. ಇನ್ನೂ ಹತ್ತು ಹದಿನೈದು ನಿಮಿಷ ಉಳಿದಿರುತ್ತಿತ್ತು. ಈ ಎಲ್ಲ ಧಾವಂತಕ್ಕಿಂತ ಒಂದು ಸೈಕಲ್ ಕೊಂಡುಬಿಟ್ಟರೆ ಹತ್ತು ಗಂಟೆಗೆ ಮನೆ ಬಿಟ್ಟರೂ ಆರಾಮವಾಗಿ ಟೈಮಿಗೆ ಸರಿಯಾಗಿ ನಾನು ಬ್ಯಾಂಕ್ ತಲುಪಬಹುದಾಗಿತ್ತು. ಆದರೆ ನನ್ನಾಸೆಯನ್ನು ನಾನು ಯಾರ ಮುಂದೆಯೂ ಹೇಳಲು ಹೋಗಲೇ ಇಲ್ಲ, ಸ್ವತಃ ನಿರ್ಣಯವನ್ನೂ ಮಾಡಲಿಲ್ಲ. ಹೀಗಾಗಿ ಸೈಕಲ್ ಕೊಳ್ಳುವ ನನ್ನ ಕನಸು ಕನಸಾಗಿಯೇ ಉಳಿದುಹೋಗಿದೆ. ಈಗ ಕೊಳ್ಳಬಹುದಾದರೂ ನನ್ನ ಭಾರವಾದ ದೇಹವನ್ನು ಹೊತ್ತುಕೊಂಡು ಅದು ಕಿರ್ ಕಿರ್ ಎಂದು ಕಿರುಚುವುದು ಬೇಡವೆಂದು ನಾನೇ ಸುಮ್ಮನಾಗಿದ್ದೇನೆ. ಮದುವೆಯ ನಂತರ ಮಧ್ಯೆ ಒಂದಿಷ್ಟು ದಿನಗಳು ಹುಬ್ಬಳ್ಳಿಯಿಂದ ಗದಗವರೆಗೆ ಮಾಡಿದ ಪ್ರಯಾಣದಲ್ಲಿ ನಮ್ಮ ಲೂನಾ, ಸಿಟಿ ಬಸ್ಸುಗಳು ಮತ್ತು ರೈಲು ಎಲ್ಲ ಪ್ರಕಾರದ ವಾಹನಗಳು ಏಕಪ್ರಕಾರವಾಗಿ ನನಗೆ ಸೇವೆ ಒದಗಿಸಿ ಕೃತಾರ್ಥವಾಗಿವೆ.
      ಮತ್ತೆ ಬೆಳಗಾವಿಗೆ ಬಂದಾಗ ಆಗಿನ್ನೂ ಬಜಾಜ ಚೇತಕ ಸ್ಕೂಟರನ್ನು ಕೊಂಡಿದ್ದ ಪತಿರಾಯರು ದಿನಾಲೂ ಸಂಜೆ ಬ್ಯಾಂಕು ಬಿಡುವ ಹೊತ್ತಿಗೆ ಬಾಗಿಲಿನ ಎದುರು ಹಾಜರಾಗಿ ಹಾರ್ನ ಹಾಕಿದರೆಂದರೆ ಸಹೋದ್ಯೋಗಿಗಳ ಬಾಯಿಂದ ನಾನಾ ರೀತಿಯ ಕಮೆಂಟುಗಳು ಉದುರುತ್ತಿದ್ದವು. "ನಿನ್ನ ಪೈಲಟ್ ಬಂದರು, ಓಡು", "ನಿನ್ನ ಡ್ರೈವರ್ ಹಾಜರಾದರು ಹೊರಡು", ಹೀಗೆ ಕಾಲೆಳೆಯುತ್ತಿದ್ದರು. ಅಂತೂ ಹೀಗೆ ನನ್ನ ಕಾಲುಗಳನ್ನು, ಇವರ ಸ್ಕೂಟರನ್ನು ನಂಬಿಕೊಂಡು ವರ್ಷಗಳನ್ನೇ ತಳ್ಳಿದ್ದಾಯ್ತು.
     ನಾನು ನನ್ನ ಕೆಲಸಕ್ಕೆ ರಾಜಿನಾಮೆ ನೀಡಿ ಮಹಿಳಾ ಸಹಕಾರಿ ಬ್ಯಾಂಕಿಗೆ ಮ್ಯಾನೇಜರ್ ಆಗಿ ಸೇರಿಕೊಂಡ ಮೇಲೆ ಮಾತ್ರ ಅಲ್ಲಿನ ಆಡಳಿತ ಮಂಡಳಿಯವರು, "ಮ್ಯಾನೇಜರ್ ಎಂದಮೇಲೆ ಹೊರಗೆ ತಿರುಗಾಟ ಇದ್ದೇ ಇರುತ್ತದೆ, ನಾವೇ ಸಾಲ ಕೊಡುತ್ತೇವೆ, ಒಂದು ದ್ವೀಚಕ್ರ ವಾಹನವನ್ನು ಖರೀದಿಸಲೇಬೇಕು" ಎಂದು ಖಡಾಖಂಡಿತವಾಗಿ ಹೇಳಿದ ಮೇಲೆ ನಾನು ನನ್ನ ಸ್ವಂತ ವಾಹನದ ಮೇಲೆ ವಿರಾಜಮಾನಳಾದೆ. ಆಗಿನ್ನೂ ಹೊಸದಾಗಿ ಟಿವಿಎಸ್ ಸ್ಕೂಟಿ ಬಂದಿತ್ತು. ನೋಡಲು ತೆಳ್ಳಗೆ ಕ್ಯೂಟಾಗಿತ್ತು. ಮತ್ತೆ ಅದಾಗಲೇ ಸಾಕಷ್ಟು ಸದ್ದು ಮಾಡಿ ಮೈಲೇಜ್ ಸಾಧಿಸಿದ್ದ ಕೈನೆಟಿಕ್ ಹೊಂಡಾ ಗಾಡಿಗಿಂತ ತೂಕ ಮತ್ತು ಬೆಲೆ ಎರಡರಲ್ಲೂ ಹಗುರವಾಗಿತ್ತು. ಹಾಗಾಗಿ ನನ್ನ ನ್ಯಾಚರಲ್ ಚಾಯ್ಸ್ ಸ್ಕೂಟಿನೇ ಆಗಿತ್ತು. ನಮ್ಮ ಬ್ಯಾಂಕಿನ ಮಹಿಳಾ ಅಕೌಂಟಂಟ್ ತನ್ನ ಎತ್ತರ ಮತ್ತು ಗಾತ್ರಕ್ಕೆ ತಕ್ಕಂತೆ ಕೈನಿ ಕೊಂಡಿದ್ದಳು. ಇನ್ನಿಬ್ಬರು ಮಹಿಳಾ ಸ್ಟಾಫ್ ಆಗಿನ್ನೂ ವಾಹನ ಕೊಂಡಿರಲಿಲ್ಲ. ಮಹಿಳೆಯರಿಂದ, ಮಹಿಳೆಯರಿಗಾಗಿಯೇ ಪ್ರಾರಂಭವಾದ, ಮಹಿಳಾ ನಿರ್ದೇಶಕರು ಮತ್ತು ಉದ್ಯೋಗಿಗಳೇ ಇದ್ದ ಬ್ಯಾಂಕು ನಮ್ಮದು. ಎಂದೆಂದೂ ಬ್ಯಾಂಕಿನ ಮೆಟ್ಟಲನ್ನೇ ಏರದ, ಕೇವಲ ಅಡುಗೆ ಮತ್ತು ಮನೆಗೆಲಸಗಳಲ್ಲಿ, ಶ್ರಾವಣದ ವ್ರತಗಳು, ದೀಪಾವಳಿಯ ಫರಾಳಗಳು, ಅಮಾವಾಸ್ಯೆಯ ಹೋಳಿಗೆ ಎಡೆಗಳು ಇವುಗಳಲ್ಲೇ ಕಳೆದು ಹೋದ ಸುತ್ತಮುತ್ತಲಿನ ಹೆಣ್ಣುಮಕ್ಕಳನ್ನು ಬ್ಯಾಂಕಿನ ಮೆಟ್ಟಲೇರುವಂತೆ, ತಮ್ಮದೇ ಒಂದು ಖಾತೆಯನ್ನು ತೆರೆಯುವಂತೆ ಮನವೊಲಿಸಲು ನಾವು ನಮ್ಮೆಲ್ಲ ಜಾಣತನವನ್ನು ಖರ್ಚು ಮಾಡುತ್ತಿದ್ದ ಕಾಲವದು. ಜನರೊಂದಿಗೆ ಬೆರೆಯುವುದರಿಂದ ಮಾತ್ರ ಬ್ಯಾಂಕಿಂಗನ್ನು ಬೆಳೆಸಬಹುದೆಂದು ನಾವೆಲ್ಲ ಬಲವಾಗಿ ನಂಬಿದ್ದರಿಂದ ಯಾರು ಯಾವ ಸಭೆ-ಸಮಾರಂಭಗಳಿಗೇ ಕರೆದರೂ ತಪ್ಪದೇ ಹಾಜರಿ ಕೊಡುತ್ತಿದ್ದೆವು. ನಮ್ಮ ಎರೆಡು ದ್ವಿಚಕ್ರ ವಾಹನಗಳ ಮೇಲೆ ನಾವು ನಾಲ್ಕು ಜನ ಮಹಿಳಾ ಸಿಬ್ಬಂದಿ ಎಲ್ಲೆಂದರಲ್ಲಿ ಅಲೆಯಲು ಶುರು ಮಾಡಿ ಸಾಕಷ್ಟು ಹೆಸರು ಮಾಡಿದೆವೆಂದೇ ಹೇಳಬೇಕು. ನಮ್ಮ ಗಾಡಿಗಳಿಗೆ ಸ್ಟ್ಯಾಂಡ್ ಹಾಕಿ ನಿಲ್ಲಿಸುವಷ್ಟರಲ್ಲಿ "ಮಹಿಳಾ ಬ್ಯಾಂಕಿನವರು ಬಂದ್ರು" ಅಂತ ಹೆಣ್ಣುಮಕ್ಕಳು, ಅವರ ಗಂಡಂದಿರು ಮಾತನಾಡಿಕೊಂಡು ಸಂಭ್ರಮ ಪಡುವಷ್ಟರ ಮಟ್ಟಿಗೆ ನಮ್ಮ ಕೀರ್ತಿಪತಾಕೆಗಳು ಹಾರಾಡಲು ಕಾರಣ ನಮ್ಮ ಈ ಎರೆಡು ದ್ವಿಚಕ್ರ ವಾಹನಗಳೇ ಆಗಿದ್ದವೆಂದು ನಾನಂತೂ ಬಲವಾಗಿ ನಂಬಿದ್ದೇನೆ. ಎಲ್ಲೆಂದರಲ್ಲಿ, ಯಾವಾಗ ಬೇಕೆಂದಾಗ, ಯಾರ ಮರ್ಜಿಗೂ ಕಾಯದೇ ನಾವು ನಾವೇ ನಮ್ಮ ಪ್ರೀತಿಯ ವಾಹನಗಳ ಮೇಲೆ ಹೆಮ್ಮೆಯಿಂದ ಕುಳಿತು ಓಡಾಡಿದಾಗ ಸ್ತ್ರೀಸ್ವಾತಂತ್ರ್ಯದ ಎರಡನೇಯ ಮಜಲನ್ನು ಮುಟ್ಟಿ ಆನಂದ ಪಟ್ಟಿದ್ದೆವು.
     ಮಕ್ಕಳು ಮರಿಗಳೆಂದು ನಮ್ಮ ಸಂಸಾರದ ಜವಾಬ್ದಾರಿಗಳೂ ಬೆಳೆಯಲಾರಂಭಿಸಿದಾಗ, ಈ ಕಡೆ ಆಫೀಸಿನ ಕೆಲಸಗಳೂ ವಿಪರೀತವಾಗಿ ತೊಡಗಿಸಿಕೊಳ್ಳಲಾರಂಭಿಸಿದಾಗ ಇವೇ ವಾಹನಗಳು ನಮ್ಮ ಆಪದ್ಬಾಂಧವರಾಗಿ ಕೆಲಸಗಳನ್ನೆಲ್ಲ ಹಗುರಗೊಳಿಸಿದವು. ಬೆಳಿಗ್ಗೆ ಶಾಲೆಗೆ ಹೋದ ಮಗರಾಯ ಸಂಜೆ  ಅಜ್ಜಿಯ ಮನೆ ತಲುಪಿ, ಒಂದಿಷ್ಟು ತಿಂಡಿ ತಿಂದು ಆಟವಾಡುವ ಹೊತ್ತಿಗೆ ಸರಿಯಾಗಿ ಹೋಗಿ ಅವನನ್ನು ಕರೆದುಕೊಂಡು, ಬರುಬರುತ್ತ ಮಾರ್ಕೆಟ್ಟಿನಲ್ಲಿ ತರಕಾರಿ ಕೊಂಡು, ಮತ್ತೇನೋ ಮನೆಗೆ ಬೇಕಾಗುವ ನೂರೆಂಟು ಸಾಮಾನುಗಳಲ್ಲಿ ಅರ್ಜೆಂಟಿಗೆ ಬೇಕಾದದ್ದನ್ನು ಕೊಂಡು ನಮ್ಮ ಮತ್ತು ವಾಹನದ ಎಡ-ಬಲಗಳಲ್ಲೂ ಹಾಕಿ ಹರಡಿ ಮನೆ ಮುಟ್ಟುವುದೆಂದರೆ ನಿತ್ಯ-ಯುದ್ಧ ಗೆದ್ದು ಬಂದಂತೆ. ಅಂಥ ಯುದ್ಧಗಳಲ್ಲಿ ನನ್ನ ಸ್ಕೂಟಿಯೇ ನನ್ನ ರಥ. ಒಮ್ಮೊಮ್ಮೆ ಕೆಲಸ ಹೆಚ್ಚಾಗಿ ಇನ್ನೂ ದಾರಿಯಲ್ಲಿರುವಾಗಲೇ ಆಗಸವೆಲ್ಲ ಕಪ್ಪಡರಿ ಬೆಳ್ಳಿ ನಕ್ಷತ್ರಗಳು ಫಳ-ಫಳ ಹೊಳೆಯಲಾರಂಭಿಸುವಷ್ಟು ತಡವಾದಾಗ, ಇದೇ ಸ್ಕೂಟಿಯ ಮೇಲೆ ಹಿಂಬದಿಯ ಸವಾರನಾಗಿ ಬೆರಗುಗಣ್ಣುಗಳಿಂದ ಬಾನಂಗಳವನ್ನೇ ನೋಡುತ್ತಿದ್ದ ಮಗನಿಗೆ ನಿದ್ದೆ ಬರಲೆಂದು ರಾತ್ರಿ ಹೇಳಿರುತ್ತಿದ್ದ ಕಥೆಗಳೆಲ್ಲ ಮನದ ಓಣಿಯ ತುಂಬ ಮೆರವಣಿಗೆ ಹೊರಟು, "ಅಮ್ಮಾ ಈಗ ಗಣಪ್ಪ ಅಲ್ಲಿ ಆಕಾಶದಲ್ಲಿ ಇಲಿಯ ಮೇಲೆ ಕುಳಿತು ಮನೆಗೆ ಹೊರಟಿದ್ದಾನೆಯೇ?" ಎಂದು ಪ್ರಶ್ನೆ ಎಸೆಯುತ್ತಿದ್ದ. ಅದಕ್ಕೇನಾದರೂ ಉತ್ತರ ಕೊಟ್ಟು ಮುಂದೆ ಸಾಗುತ್ತಿದ್ದಂತೇ "ಅಮ್ಮಾ ಈಗ ಯಾವ್ಯಾವ ದೇವರು ಆಕಾಶದಲ್ಲಿ ಸಂಚರಿಸುತ್ತಿದ್ದಾರೆ?" ಎಂದು ಇನ್ನೊಂದು ಪ್ರಶ್ನೆ. ಅವನಿಗೆ ಕನ್ವಿನ್ಸ್ ಆಗುವ ರೀತಿಯಲ್ಲಿ ಉತ್ತರ ಕೊಡುವುದಕ್ಕೆ ಗೋಳಾಡುತ್ತ ಮನೆಗೆ ಬರುವುದು. ಮಳೆಗಾಲದಲ್ಲಿ ಮಾತ್ರ ಈ ಸ್ಕೂಟಿಯ ಸಹವಾಸವೇ ಬೇಡ ಎನ್ನುವಷ್ಟು ಹೆದರಿಕೆ, ತಾಪತ್ರಯ. ಆದರೂ ಅದಿಲ್ಲದೇ ಈ ಜೀವನವೇ ನಿಂತು ಹೋಗುತ್ತದೆನ್ನುವಷ್ಟು ಅವಲಂಬನೆ.
      ಬರೀ ಆರ್ಥಿಕ ಸ್ವಾತಂತ್ರ್ಯವಷ್ಟೇ ಮಹಿಳಾ ಸಬಲೀಕರಣವಲ್ಲ, ಸ್ವತಂತ್ರವಾಗಿ ಓಡಾಡುವ ಸ್ವಾತಂತ್ರ್ಯವೂ ಸೇರಿದಾಗ ಮಾತ್ರ ನಿಜ ಅರ್ಥದ ಮಹಿಳಾ ಸಬಲೀಕರಣ ಎಂದೆಲ್ಲ ಆಗಲೇ ಅನಿಸಿದ್ದು ಅದು ಇಂದಿಗೂ ಸುಳ್ಳಲ್ಲ ಎಂದು ಮನದಟ್ಟಾದದ್ದು ಎಲ್ಲವೂ ಈ ನನ್ನ ಪುಟ್ಟ ದ್ವಿಚಕ್ರ ವಾಹನದ ದೆಸೆಯಿಂದಲೇ.
     ನಂತರದ ದಿನಗಳಲ್ಲಿ ನಾನು ಇಷ್ಟಪಟ್ಟು ಮಾರುತಿ ಕಾರನ್ನು ಒಲಿಸಿಕೊಳ್ಳಲು ಹೊರಟರೂ ಅದೇಕೋ ಕೈಗೂಡದೇ ಭಗ್ನಪ್ರೇಮದಲ್ಲಿ ಪರ್ಯವಸಾನವಾಯಿತು. ಈ ವಿದ್ರೋಹದಲ್ಲಿ ಹೊರಗಿನ ಜನರ ಜೊತೆಜೊತೆಗೆ ನನ್ನ ಮನೆಮಂದಿಯೂ ಅಷ್ಟೇ ಪ್ರಮಾಣದಲ್ಲಿ ಶಾಮೀಲಾಗಿದ್ದಾರೆ ಎನ್ನುವ ನನ್ನ ಸಂಶಯ ಇಂದಿಗೂ ಬಲವಾಗಿಯೇ ಇದೆ. ಹೊಸದಾಗಿ ಕಾರು ಕಲಿತ ನಾನು ಎರಡನೇ ಮಗನನ್ನು ತಾಯಿಯ ಮನೆಯಲ್ಲಿ ಬಿಟ್ಟು ಬ್ಯಾಂಕಿಗೆ ಹೋಗಬೇಕಿತ್ತು. ಕಾರಿನಲ್ಲಿ ಅವನನ್ನು ಕೂರಿಸಿಕೊಂಡು ಹೋಗುವಾಗ ಏನಾದರೊಂದು ಕಸರತ್ತು ಮಾಡಿ ಧೊಪ್ಪೆಂದು ಬೀಳುತ್ತಿದ್ದ. ಬಿಝಿ ರೋಡಿನಲ್ಲಿ ನಾನು ರಸ್ತೆಯ ಮೇಲೆ ಗಮನ ಕೊಡಲೋ, ಬಿದ್ದು ಅಳುತ್ತಿರುವ ಮಗನನ್ನು ಎತ್ತಿಕೊಳ್ಳಲೋ ತಿಳಿಯದೇ ಚಡಪಡಿಸುವಂತಾಗುತ್ತಿತ್ತು. ನಾನು ಗಾಬರಿ ಬೀಳುತ್ತಿದ್ದೆ. ಮೊದಲೇ ನೂರಾರು ತಿರುವುಗಳು, ಸಂದಿ-ಗೊಂದಿಗಳಿಂದ ಕೂಡಿದ ಸಣ್ಣ ಸಣ್ಣ ಓಣಿಗಳ ಊರು ಬೆಳಗಾವಿ. (ಈಗ ರಸ್ತೆಗಳು ಅಗಲವಾಗುತ್ತಿವೆ.) ಇಡೀ ರಸ್ತೆಯೇ ನಮ್ಮ ಮನೆಯ ಅಂಗಳವೆಂದು ತಿಳಿದುಕೊಂಡು ಕೈ ಕೈ ಹಿಡಿದುಕೊಂಡು ನಿತ್ಯ ಮ್ಯಾರಥಾನ್ ನಡೆಸುವ ಬೆಳಗಾವಿಯ ರಸಿಕ ಜನರು. ಅಂಥದ್ದರಲ್ಲಿ ಒಟ್ಟಿಗೇ ಕ್ಲಚ್ಚು, ಗೇರು, ಬ್ರೇಕು ಮತ್ತು ಎಕ್ಸೆಲರೇಟರು ಎಂದು ಮ್ಯಾನೇಜ್ ಮಾಡುತ್ತ, ಹಿಂದೆ-ಮುಂದೆ, ಅಕ್ಕ-ಪಕ್ಕ ನೋಡಿಕೊಂಡು ಗಾಡಿ ಓಡಿಸುವುದೆಂದರೆ ಅದೊಂದು ಮಹಾಪರಾಕ್ರಮವೇ ಸೈ. ಅಂಥದ್ದರಲ್ಲಿ ಒಂದು ದಿನ ನನ್ನ ಮಾರುತಿಯ ಮನಸ್ಸು ಅದೇಕೆ 'ಎಲ್ಲಿ ಜಾರೀತೋ, ಮನವು ಎಲ್ಲೆ ಮೀರಿತೋ', ಅದು ತನ್ನಷ್ಟಕ್ಕೆ ತಾನು ಕೈಬೀಸಿಕೊಂಡು ಆನಂದವಾಗಿ ನಡೆದುಕೊಂಡು ಹೋಗುತ್ತಿದ್ದ ದಾರಿಹೋಕನೊಬ್ಬನ ಹಿಂಗಾಲಿಗೆ ಸಿಹಿಚುಂಬನದ ಸ್ಪರ್ಷವನ್ನು ನೀಡಿಯೇಬಿಟ್ಟಿತು. ಆತ ತಪ್ಪೆಲ್ಲ ನನ್ನದೇ ಎನ್ನುವಂತೆ ಕೆಕ್ಕರಿಸಿ ನೋಡಿದ. ನಾನು ಅವನ ಅದೃಶ್ಯ ಮೂರನೇ ಕಣ್ಣಿನ ಉರಿನೋಟದಿಂದ ತಪ್ಪಿಸಿಕೊಂಡು ಬಂದು ಹುಶ್ಶಂತ ಕುಳಿತು ಮಾರುತಿಯ ಪ್ರೇಮ ಪ್ರಕರಣದ ಬಗ್ಗೆ ಹೇಳುತ್ತಿದ್ದರೆ ಮನೆಯವರೆಲ್ಲ ನನ್ನ ಮೇಲೆಯೇ ಉರಿದುಬಿದ್ದು, "ನೀನು, ನಿನ್ನ ಮಾರುತಿ ಹೀಗೆಯೇ ಜನರನ್ನು ತಬ್ಬಿಕೊಳ್ಳುತ್ತ ಹೋದರೆ, ಕ್ರಿಮಿನಲ್ ಕೇಸುಗಳು ಬಂದು ನಿಮ್ಮನ್ನು ಅಪ್ಪಿಕೊಳ್ಳುತ್ತವೆ,ಮತ್ತು ಜೈಲಿನಲ್ಲಿ ಮಧುಚಂದ್ರದ ಏರ್ಪಾಡಾಗುತ್ತದೆ” ಎಂದು ಹೆದರಿಸಿಬಿಟ್ಟರು. ನಾನು ಈ ಮಾರುತಿಯ ಸಹವಾಸವೇ ಬೇಡವೆಂದುಕೊಂಡು, ನನ್ನ ಹಳೆಯ ಸ್ನೇಹವೇ ವಾಸಿಯೆಂದು ಇನ್ನೊಂದು ಸ್ಕೂಟಿಯನ್ನೇ ಕೊಂಡುತಂದೆ. ಮತ್ತಾರು ವರ್ಷಗಳು ಕಳೆಯುವುದರಲ್ಲಿ ಆಗಿನ್ನೂ ಹೊಸದಾಗಿ ಬಂದಿದ್ದ ಪ್ಲೆಜರ್ ನನ್ನ ಮಿತ್ರನಾಗಿ ಜೊತೆಯಾಯಿತು. ಹೀಗೆ ಇಪ್ಪತ್ತು ವರ್ಷಗಳ ತನಕ ಇಡೀ ಬೆಳಗಾವಿಯ ಸಂದಿ-ಗೊಂದಿಗಳಲ್ಲಿ, ಇಕ್ಕಟ್ಟು ಓಣಿಗಳಲ್ಲಿ, ತಿರುವುಗಳಲ್ಲಿ, ರಸ್ತೆಮಧ್ಯೆ ಧುತ್ತೆಂದು ಅವತರಿಸುವ ಬೆಟ್ಟಗುಡ್ಡಗಳಲ್ಲಿ, ಭೋರೆಂಬೋ ಮಳೆಯ ಧಾರೆ ಮಾಡಿದ ಗುಂಡಿ-ಕೊರಕಲುಗಳಲ್ಲಿ, ಕೆಸರು ಕೊಚ್ಚೆಗಳಲ್ಲಿ ನನ್ನ ಜೊತೆಜೊತೆಯಾಗಿ ಕಷ್ಟ-ಸುಖಗಳನ್ನನುಭವಿಸಿದ್ದು ಇವೇ ದ್ವಿಚಕ್ರ ವಾಹನಗಳು. ನನ್ನ ಅವುಗಳ ಅವಿನಾಭಾವ ಸಂಬಂಧದ ಆಳ ಎತ್ತರಗಳನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಕಷ್ಟದ ಕೆಲಸ. ಮೊದಲು ಕಚೇರಿ, ನಂತರ ಕಾಲೇಜಿನ ಕೆಲಸ, ಇದೀಗ ಮನೆಯ ನೂರಾರು ಕೆಲಸಗಳ ಜೊತೆಗೆ ಸಂಸಾರದಲ್ಲಿನ ಸರಿಗಮವು ಯಾವತ್ತೂ ಬೇಸೂರಾಗದಿರಲಿ ಎಂದು ಹಂಬಲಿಸಿ, ನನ್ನ ಶಕ್ತಿ ಮೀರಿ ಪ್ರಯತ್ನಿಸುವಾಗ, ಮನೆಯಿಂದ ಆಫೀಸಿಗೆ, ಅಲ್ಲಿಂದ ಮತ್ತೆ ಕೆಲಸದ ಮೇಲೆ ಬೇರೆ-ಬೇರೆ ಕಡೆ ತಿರುಗಾಡುವಾಗ, ಮಕ್ಕಳನ್ನು ಟ್ಯೂಶನ್ನು, ಗೆಳೆಯರ ಮನೆ ಎಂದೆಲ್ಲ ಬಿಟ್ಟು-ಕರೆದುಕೊಂಡು ಬರುವಾಗ, ತರಕಾರಿ ಪೇಟೆಗೆ ಹೋಗುವಾಗ, ಅಮ್ಮನ ಮನೆಗೆ ಭೇಟಿ ಕೊಡುವಾಗ, ಒಂಟಿಯಾಗಿ ಶಾಪಿಂಗ್‍ನ ಆನಂದವನ್ನು ಪಡೆಯುವಾಸೆಯಾದಾಗ, ಹೀಗೆ ಮನೆಯಲ್ಲಿರುವುದಕ್ಕಿಂತ ಹೆಚ್ಚು ರಸ್ತೆಯ ಮೇಲೇ ಇರುವಾಗ ನನ್ನ ಜೊತೆಯಾದದ್ದು ನನ್ನ ಪ್ರೀತಿಯ ಟೂ ವ್ಹೀಲರ್.
     ಒಂದು ದಿನ ಸರ್ವಿಸಿಂಗಿಗೋ ರಿಪೇರಿಗೋ ಕೂಡ ಬಿಡಲಾರದಷ್ಟು ಅಂಟು-ನಂಟು ಬೆಸೆದುಕೊಂಡಿದ್ದ ಟೂ-ವ್ಹೀಲರನ್ನು ಮತ್ತೊಮ್ಮೆ ಬದಲಾಯಿಸುವಷ್ಟು ವಯಸ್ಸು, ಸರ್ವೀಸು ಅದಕ್ಕೆ ಆದಾಗ ನನ್ನಲ್ಲಿ ಹತ್ತಾರು ಯೋಚನೆಗಳು ದಶದಿಕ್ಕುಗಳಲ್ಲಿ ಓಡಲಾರಂಭಿಸಿದವು. ಇದೀಗ ಮತ್ತೆ ದ್ವಿಚಕ್ರ ವಾಹನವನ್ನು ಕೊಳ್ಳಬೇಕೆಂದರೆ ಮತ್ತೆ ಅದಕ್ಕೆ ಎಪ್ಪತ್ತು ಸಾವಿರವಾದರೂ ಹಾಕಬೇಕು. ದ್ವಿಚಕ್ರ ವಾಹನವು ನನ್ನನ್ನು ಮತ್ತು ನಾನು ಅದನ್ನು ಎಷ್ಟೇ ಪ್ರೀತಿಸಿದರೂ, ಬೆಳಗಾವಿಯ ಮಳೆಯಿಂದ ಮತ್ತು ವರ್ಷದಿಂದ ವರ್ಷಕ್ಕೆ ಹೆಚ್ಚು ನಿಷ್ಕರುಣಿಯಾಗಿ ಉರಿಯುತ್ತಿರುವ ಸೂರ್ಯನಿಂದ ಅದು ನನ್ನನ್ನು ರಕ್ಷಿಸಲಾರದು. ಮೇಲಾಗಿ ಇಪ್ಪತೈದು ಕಿಲೋಮಿಟರ್ ದೂರದಲ್ಲಿರುವ ಯುನಿವರ್ಸಿಟಿಯಲ್ಲಿ ಕೆಲಸವಿದ್ದಾಗಲೆಲ್ಲಾ ಹೈವೇ ಮೇಲಿಂದ ನನ್ನನ್ನು ಕರೆದುಕೊಂಡು ಹೋಗಿ ಸುರಕ್ಷಿತವಾಗಿ ಕರೆತರುವುದು ಅದರ ಶಕ್ತಿ ಮೀರಿದ ಕೆಲಸ. ಇಂಥ ಎಲ್ಲ ಕಾರಣಗಳನ್ನು ಮುಂದೆ ಮಾಡಿ ನಾನು ಪಾಯಿಂಟ್ ಬೈ ಪಾಯಿಂಟ್ ವಿವರಿಸಿ ನಾನೇಕೆ ಸಣ್ಣದೊಂದು ಕಾರನ್ನು ಸ್ವಂತಕ್ಕಾಗಿ ತೆಗೆದುಕೊಳ್ಳಬಾರದು ಎನ್ನುವ ಅಹವಾಲನ್ನು ಮುಂದಿಟ್ಟಾಗ, ಮನೆಮಂದಿಯೆಲ್ಲ ಜೈ ಎಂದು ಜೋಷ್ ನೀಡಿ, ಆ ಕಾರು ಈ ಕಾರೆಂದು ತುಲನಾತ್ಮಕ ವಿಶ್ಲೇಷಣೆಗಳನ್ನು ನಡೆಸಿದರೂ, ಮನದಲ್ಲಿ ಅಚ್ಚೊತ್ತಿದ್ದ ಆಟೋ ಗೇರ್ ನ್ಯಾನೋ ಕಾರನ್ನು ಬಿಟ್ಟು ಬೇರಾವುದನ್ನು ವರಿಸಬಾರದೆಂದು ನಾನಾಗಲೇ ನಿರ್ಣಯಿಸಿ ಆಗಿತ್ತು.
     ಅಂತೂ ಇಂತೂ ಜೀವನದ ಫಸ್ಟ್ ಹಾಫ್‍ನ ಹೊಸ್ತಿಲಲ್ಲಿ ಬಂದು ನಿಂತಿರುವ ಈ ಸಂದರ್ಭದಲ್ಲಿ ಮಹಿಳಾ ಸಬಲೀಕರಣದ ಹೊಸ ದಾರಿಯೊಂದು ನನ್ನೆದುರಿಗೆ ತೆರೆದುಕೊಂಡು, ಅದರ ಮೇಲಿನ ನನ್ನ ಸುಖಕರ ಪಯಣಕ್ಕೆ ಸಾಥ ನೀಡಲು ಹೊಸ ಕೆಂಪು ನ್ಯಾನೋ ಕಾರು ಬಂದು ನಿಂತಿತು.  ಇದು ಕೂಡ ನನ್ನ ಹಳೆಯ ದ್ವಿಚಕ್ರ ವಾಹನಗಳಂತೆಯೇ ನನ್ನನ್ನು ಎಲ್ಲೆಂದರಲ್ಲಿ ಹೊತ್ತು ಒಯ್ದು ಕೆಲಸಗಳನ್ನು ಹಗುರಗೊಳಿಸುತ್ತಿರುವದನ್ನು ಅನುಭವಿಸಿದಾಗ ಸ್ತ್ರೀ ಸ್ವಾತಂತ್ರ್ಯದ ಮೂರನೆಯ ಮೆಟ್ಟಿಲನ್ನು ಏರಿ ನಿಂತಂತಾಗಿ, ಖುಷಿಯಿಂದ ಈ ಎಲ್ಲ ವಾಹನಗಳಿಗೆ ಅಕ್ಷರದ ಅಭಿನಂದನೆಗಳನ್ನೂ, ಅಕ್ಕರೆಯ ಧನ್ಯವಾದಗಳನ್ನೂ ಸಲ್ಲಿಸುವ ಬಯಕೆ ಭುಗಿಲೆದ್ದ ಕಾರಣ, ಈ ಲೇಖನವನ್ನು ಬರೆದು ಅವುಗಳ ಹೆಸರಿನಲ್ಲಿ ಅರ್ಪಿಸಬೇಕಾಯಿತು.
 
                                  ****************************************

ನೀತಾ. ರಾವ್