ಕ.ಪಿ.ಗಳ ಸ್ವರ, ಸಾಫ್ಟವೇರಿಗಳ ಪರ
ನಮ್ಮ ಪ್ರೀತಿಯ (ಪಾಪ) ನಾನ್-ಸಾಫ್ಟವೇರಿ
ವರಮಹಾಶಯರೇ,
ನಿಮಗೆಲ್ಲ ಕ.ಪಿ. (ಕನ್ಯಾಪಿತೃಗಳ) ಸಂಘದ
ಅಧ್ಯಕ್ಷರ ಸಪ್ರೇಮ ಆಶೀರ್ವಾದಗಳು. ಮೊನ್ನೆ ಮೊನ್ನೆ
ತಾವೆಲ್ಲ ನಾನ್-ಸಾಫ್ಟವೇರಿ ವರಗಳ ವೇದಿಕೆಯಿಂದ ಹುಚ್ಚಾಪಟ್ಟೆ ಕೂಗಾಡಿ, ನಮ್ಮನ್ನೆಲ್ಲ ಮನಸೋ
ಇಚ್ಛೆ ಬೈದದ್ದು ಗೊತ್ತಾಗಿದ್ದರಿಂದ, ನಮ್ಮ ಸಂಘದ ಎಲ್ಲ ಸದಸ್ಯರ ಪರವಾಗಿ ಈ ಪತ್ರವನ್ನು ತಮಗೆ
ರವಾನಿಸುತ್ತಿದ್ದೇನೆ. ಓದಿಕೊಂಡು, ತಿಳಿದುಕೊಂಡು ಸುಮ್ಮನಾಗುವುದು.
ತರುವಾಯ, ನಾವು ಕ.ಪಿ.ಗಳು ಸಾಫ್ಟವೇರ್
ಇಂಜಿನಿಯರ ಅಲ್ಲದ ವರಗಳಿಗೆ ಹೆಣ್ಣುಮಕ್ಕಳನ್ನು ಕೊಡುವುದಿಲ್ಲ, ಅಷ್ಟೇ ಏಕೆ ತೋರಿಸುವುದೂ
ಇಲ್ಲವೆಂದು ನೀವೆಲ್ಲ ಗೋಳಾಡಿದ್ದು ತಿಳಿದು ಬಂತು. ಅಯ್ಯಾ ಮಹಾಶಯರೇ, ಇಲ್ಲಿ ನಮ್ಮದೂ ಕೆಲವೊಂದು
ವಾದಗಳಿವೆ, ಭಾವನೆಗಳಿವೆ, ಆಯ್ಕೆಗಳಿವೆ, ಅವನ್ನು ತಿಳಿದುಕೊಳ್ಳಿ. ಹಿಂದೆ ನಾವು, ಅಂದರೆ ನಮ್ಮಂಥ
ಹೆಣ್ಣು ಹೆತ್ತವರು ಪಟ್ಟ ಕಷ್ಟಗಳನ್ನು ನೆನಪಿಸಿಕೊಳ್ಳಿ, ಇಲ್ಲವೇ ನಿಮ್ಮ ಹೆತ್ತವರನ್ನು ಕೇಳಿ.
ಹೆಣ್ಣುಮಕ್ಕಳ ಜಾತಕ ಹಿಡಿದುಕೊಂಡು ಗಂಡು ಎನ್ನಿಸಿಕೊಂಡ ಎಲ್ಲ ಪ್ರಾಣಿಗಳ ಮನೆಗಳಿಗೆ ಅಲೆದಲೆದು
ನಾವು ಚಪ್ಪಲಿ ಹರಿದುಕೊಂಡಿದ್ದು ಸುಳ್ಳೇ? ಕೆಲಸವಿರಲಿ,
ಇಲ್ಲದಿರಲಿ, ಅಂತಸ್ತು ಇದ್ದರೆಷ್ಟು ಬಿಟ್ಟರೆಷ್ಟು ಎಂದುಕೊಂಡು ವರನ ತಂದೆ-ತಾಯಿಗಳು, ಅಷ್ಟೇಕೆ
ಹತ್ತಿರ ದೂರದ ಎಲ್ಲ ಬಂಧು-ಬಳಗದವರು ನಮ್ಮ ಮೇಲೆ ಉರಿದದ್ದು ಇತಿಹಾಸವೇ ಆದರೂ ಸತ್ಯವೇ ಅಲ್ಲವೇ?
ಜಾತಕ ಕೂಡಿದೆಯೋ ಇಲ್ಲವೋ ಎಂದು ತಿಳಿಯಬೇಕಾದರೆ ಹತ್ತತ್ತು ಸಲ ವರನ ಮನೆಗೆ ಎಡತಾಕಿ ಸಾಯಬೇಕು.
ಇನ್ನು ಅದು ಹೇಗೋ ದೇವರ ದಯದಿಂದ ಕೂಡಿಬಿಟ್ಟರೆ, ವರನ ಕಡೆಯಿಂದ ಬರುವವರಿಗೆಲ್ಲಾ ವಗ್ಗರಣೆ
ಅವಲಕ್ಕಿ, ಚಹಾ, ಸ್ವೀಟು, ಬಾಳೆಹಣ್ಣು ಅಂತೆಲ್ಲಾ ಸರಬರಾಜು ಮಾಡಿ ಮಾಡಿ ಸಾಕಾಗಿಹೋಗಿತ್ತು.
ಇಷ್ಟೆಲ್ಲಾ ಆದ ಮೇಲೆ ಹೆಣ್ಣು ಮನಸ್ಸಿಗೆ ಬರಲಿಲ್ಲ, ಕಾಲು ಸೊಟ್ಟಗಿದೆ, ಮೂಗು ನೆಟ್ಟಗಿಲ್ಲ
ಎನ್ನುವ ಉತ್ತರ. ಮತ್ತೆ ಬೇರೆ ಕನ್ಯಾ ನೋಡಲು, ಉಪ್ಪಿಟ್ಟು ಚಹಾಕ್ಕೆ ವರಮಹಾಶಯರೂ, ಅವರ ಶ್ರೇಷ್ಠ
ಮಾತಾ-ಪಿತೃಗಳೂ ರೆಡಿ. ಏನೋ ಬಹಳ ದೊಡ್ಡ ಉಪಕಾರ ಮಾಡಿದವರಂತೆ, ಕನ್ಯಾಸೆರೆ ಬಿಡಿಸುತ್ತೇನೆಂಬ
ಅಹಂನಿಂದ ಬಂದವರೂ ಸೂಟು-ಬೂಟು ಕೊಡಲಿಲ್ಲ, ಚಿನ್ನದ ಚೈನು ಬಿಗಿಯಲಿಲ್ಲ ಎಂದು ಮದುವೆಯ ಮಧ್ಯೆ ಜಗಳ
ತೆಗೆದು, ಒಂದು ಗಂಟೆಗೆ ಆಗಬೇಕಾದ ಊಟ ಐದು ಗಂಟೆಗೆ ಆಗಿ, ಬಂದ ಬಂಧು-ಬಳಗವೆಲ್ಲ ಹಸಿದು
ಕಂಗಾಲಾಗಿ, ಕೆಲವರ ಕಣ್ಣೂ ಭೆಳ್ಳಗಾಗಿ - - - - ಒಂದೋ, ಎರಡೋ - - - - ಮರೆತವಂದ್ರೂ ಮರೆಯಲಾಗದ
ಗತಕಾಲದ ಭೂತಗಳು.
ಈಗ
ಏನಾಗಿದೆಯಪ್ಪಾ ಅಂದ್ರೆ, ನಮ್ಮ ಹುಡ್ಗೀರ ಸಂಖ್ಯೆ ಕಡಿಮೆಯಾಗಿದೆ. ಅವರಿಗೆ ಮದುವೆ
ಮಾರ್ಕೆಟ್ಟಿನಲ್ಲಿ ಡಿಮ್ಯಾಂಡ್ ಬಂದಿದೆ. ಒಂದು ಕಾಲದಲ್ಲಿ ನಿಮಗಿತ್ತಲ್ಲಾ ಹಾಗೆ! ಸಿಂಪಲ್ ಎಕನಾಮಿಕ್ಸ್ ಥೇರಿ, ಲಾ ಆಫ್ ಡಿಮಾಂಡ್ ಎಂಡ್ ಸಪ್ಲೈ ಅಷ್ಟೇ,
ಅರ್ಥವಾಯ್ತಾ? ಈ ಜಗತ್ತು ದುಂಡಗಿದೆ ಸ್ವಾಮೀ, ಒಮ್ಮೆ ಮೇಲೆ ಇದ್ದೋರು ನೀವು ಕೆಳಗೆ ಬಂದಿದ್ದೀರಾ
ಅಷ್ಟೇ! ನಿಮ್ಮಪ್ಪ, ನಿಮ್ಮಜ್ಜ ಮಾಡಿದ ಪಾಪ ನಿಮ್ಮನ್ನು
ಪ್ರಾಯಶ್ಚಿತ ಕೇಳ್ತಿದೆ ಅಷ್ಟೇ.
ಹೋಗಲಿ ಈಗ ಮುಖ್ಯ ವಿಷಯಕ್ಕೆ ಬರೋಣ. ನಾವೆಲ್ಲಾ
ನಮ್ಮ ಹೆಣ್ಣುಮಕ್ಕಳನ್ನು ಸಾಫ್ಟವೇರ ವರಗಳಿಗೇ ಕೊಡಬಯಸುತ್ತೇವೆ. "ಹಾಗಾದರೆ ನಾವೆಲ್ಲ
(ಅರ್ಥಾತ್ ಉಳಿದ ನಾನ್-ಸಾಫ್ಟವೇರಿಗಳು) ಏನು
ಮಾಡಬೇಕು? ಮದುವೆಯಿಲ್ಲದೇ ಬ್ರಹ್ಮಚಾರಿಗಳಾಗಿಯೇ ಬದುಕಿ, ಬ್ರಹ್ಮಚಾರಿಗಳಾಗಿಯೇ ಸಾಯಬೇಕೇ?
ನಾವೇನು ಕಡಿಮೆ ಗಳಿಸುತ್ತೇವೆಯೇ? ನಮಗೇನು ಹೊಲ-ಮನೆಗಳಿಲ್ಲವೇ?" ಎಂದೆಲ್ಲಾ ಲಾ ಪಾಯಿಂಟ್
ಬಿಗಿದು, ನಮ್ಮನ್ನೆಲ್ಲಾ ಉಗಿದು ಉಪ್ಪಿನಕಾಯಿ ಹಾಕಿದಿರಂತೆ ನೀವು! ಇರಲಿ, ಈಗ ಸಾಫ್ಟವೇರಿಗಳೇ
ಯಾಕೆ ಬೇಕು ಎನ್ನುವುದರ ರಹಸ್ಯ ಬಿಚ್ಚುತ್ತೇನೆ ಕೇಳಿ.
೧) ಮೊದಲನೇಯದಾಗಿ ಅವು ಕೈ ತುಂಬ ಸಂಪಾದನೆ
ಮಾಡುತ್ತವೆ. (ಮಾವಂದಿರಿಗೆ ಖುಶಿಯಾಗದೇ ಇರುತ್ತಾ ಹೇಳಿ?) ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ
ಜಿಗಿದಾಗಲೆಲ್ಲಾ ಈ ಸಂಪಾದನೆ ಮತ್ತೂ ಜಾಸ್ತಿಯಾಗುತ್ತಾ ಹೋಗುತ್ತದೆ.
೨) ಸೋಮವಾರದಿಂದ ಶುಕ್ರವಾರದವರೆಗೆ ದಿನಾಲೂ
ದುಡಿದು ದುಡಿದು, ದಣಿದು ಸುಸ್ತಾಗಿ ಮಧ್ಯರಾತ್ರಿಯೋ, ಮರುದಿನದ ನಸುಕಿನ ವೇಳೆಯೋ ಮನೆ ಸೇರಿಕೊಂಡು
ನಿದ್ದೆ ಮಾಡಲು ಆರಂಭಿಸಿದರೆ, ಮತ್ತೆ ಎದ್ದು ಕೆಲಸಕ್ಕೆ ಓಡಿ ಹೋಗುವ ಚಿಂತೆಯೇ ಜಾಸ್ತಿಯಾಗಿ,
"ಇದೇನು ಅಡುಗೆ ಮಾಡಿದ್ದೀ? ಸಾರಿಗೆ ಉಪ್ಪು ಸಾಲ್ದು, ಹುಳಿಗೆ ಹೋಳು ಕಡಿಮೆಯಾಯ್ತು,
ವಗ್ಗರಣೆ ಹೊತ್ತಿಹೋಗಿದೆ." ಎಂದೆಲ್ಲಾ ಕೆಲಸಕ್ಕೆ ಬಾರದ ರಗಳೆ ತೆಗೆದು (ನಿಮ್ಮಂತೆ) ನಮ್ಮ
ಹೆಣ್ಣುಮಕ್ಕಳನ್ನು ಕಾಡುವುದಿಲ್ಲ. ಮುಖ್ಯವಾಗಿ ಕಾಡುವುದಕ್ಕೆ ಪಾಪ ಅವುಗಳಿಗೆ ನಿಮ್ಮಂತೆ
ಸಮಯವಾಗಲೀ ತಾಕತ್ತಾಗಲೀ ಉಳಿದಿರುವುದೇ ಇಲ್ಲ.
೩) ಇನ್ನು ಮೂರನೇಯದಾಗಿ ಶನಿವಾರ, ಭಾನುವಾರ
ಎರೆಡೆರೆಡು ದಿನ ರಜೆ ಇರುವುದರಿಂದ ವೀಕೆಂಡಿಗೆ ಅಂತ ಕೊಡಗು, ಕೊಡಚಾದ್ರಿ ಬೆಟ್ಟ, ಚಿಕ್ಕಮಗಳೂರು,
ನಾಗರಹೊಳೆ, ಎಂದೆಲ್ಲಾ ಹೆಂಡತಿಯನ್ನೂ ಕರೆದುಕೊಂಡು ಜಾಲಿ ಟ್ರಿಪ್ಪಿಗೆ ಹೋಗುತ್ತವೆ. ಅಂದರೆ ನಮ್ಮ
ಮುದ್ದಿನ ಮಕ್ಕಳಿಗೆ ವಾರವಿಡೀ ಗಂಡನ ಕಾಟವಿಲ್ಲ, ಅಡುಗೆಯ ಜಂಜಡವಿಲ್ಲ. ನಿಮಗಾದರೋ ವೇಳೆ
ಧಂಡಿಯಾಗಿ ಬಿದ್ದಿರುವುದರಿಂದ ಮನೆಯಲ್ಲಿ ಹೆಂಡರನ್ನು ಕುಕ್ಕುವ ಕೆಲಸವೇ! ಅದಕ್ಕೇ ಗಿಣಿಗಳಂತೆ
ಸಾಕಿದ ನಮ್ಮ ಹೆಣ್ಣುಮಕ್ಕಳನ್ನು ಹದ್ದುಗಳಿಗೆ ಕೊಡುವುದಕ್ಕಿಂತ, ಇನ್ನೊಂದು ಮೈನಾ ಪಕ್ಷಿಗೆ
ಕೊಡುವುದು ಲೇಸೆಂದು ನಾವು ನಿರ್ಧರಿಸುವುದು ತಪ್ಪಾ?
೪) ಅವರ ಪರವಾಗಿ ವಾದಿಸಲು
ಇನ್ನೂ ಅನೇಕ ಕಾರಣಗಳಿವೆ ಕೇಳಿ. ಮದುವೆಯಾಗಿ ವರ್ಷದೊಳಗೆ ನಮ್ಮ ಸಾಫ್ಟವೇರಿ ಅಳಿಯಂದಿರು
ಕೋರಮಂಗಲದಲ್ಲೋ, ವೈಟ್-ಫೀಲ್ಡನಲ್ಲೋ ಲಕ್ಷುರಿ ಅಪಾರ್ಟಮೆಂಟನಲ್ಲಿ ಫ್ಲ್ಯಾಟ ಖರೀದಿ ಮಾಡಿ,
"ಮಾವಾ ರಜಿಸ್ಟ್ರೇಶನ್ನಿಗೆ ನೀವೇ ಬರಬೇಕು, ಇದೆಲ್ಲಾ ವ್ಯವಹಾರ ನನಗಿಂತ ನಿಮಗೇ ಚೆನ್ನಾಗಿ
ಗೊತ್ತು" ಅಂತ ಗೋಗರೀತಾರೆ. "ಅತ್ತೆ ನೀವೇ ಮುಂದೆ ನಿಂತು ಗೃಹಪ್ರವೇಶದ
ಕಾರ್ಯಕ್ರಮವನ್ನು ನಡೆಸಿಕೊಡಬೇಕು, ನನಗೆ ಬಹಳ ಕೆಲಸವಿದೆ, ಇವಳೂ ಇನ್ನೂ ಚಿಕ್ಕವಳು" ಅಂತ ಪ್ರೀತಿಯಿಂದ ಕರೀತಾರೆ.
೫) ಇನ್ನು ಮದುವೆಯಾಗಿ ಎರೆಡು ವರ್ಷಗಳಲ್ಲಿ,
ಎರೆಡು ವರ್ಷದ ಅವಧಿಗೆ ಪ್ರಾಜೆಕ್ಟ ಮೇಲೆ ಅಮೇರಿಕಾಕ್ಕೋ ಇನ್ನಾವುದೋ ವಿದೇಶಕ್ಕೋ ಹೆಂಡತಿಯೊಡನೆ
ಹಾರುತ್ತಾರೆ. ನಿಮ್ಮ ಹಾರಾಟವೋ ಯಾವಾಗಲೂ ಅಡುಗೆಮನೆಯಲ್ಲಿಯೇ, ಹೆಂಡತಿ-ಮಕ್ಕಳ ಮುಂದೆ ಮುಗಿದು
ಹೋಗುತ್ತದೆ.
೬) ಮಗಳು ಅಲ್ಲಿದ್ದಾಗಲೇ ಬಸಿರು ಅಂತಾದರೆ
ಅತ್ತೆ-ಮಾವನಿಗೂ ವಿದೇಶಕ್ಕೆ ಹಾರುವ ಛಾನ್ಸ್, ಬಾಳಂತನದ ನೆವದಲ್ಲಿ. ಹೇಗೂ ಆರಾರು ತಿಂಗಳು
ಹೋಗಿರುತ್ತೇವೆ, ದೇಶ ಸುತ್ತಿ ಬಂದರಾಯ್ತು ಎಂದುಕೊಂಡರೆ ಅಳಿಮಯ್ಯ ಟಿಕೆಟ್ಟುಗಲೊಂದಿಗೆ ಹಾಜರು.
೭) ಪ್ರಾಜೆಕ್ಟ ಮುಗಿಸಿ ಬಂದವರು, ಆಗೀಗ
ಸಣ್ಣ-ಪುಟ್ಟ ಕೆಲಸಗಳಿಗಾಗಿ ಲಂಡನ್ನು, ಪ್ಯಾರಿಸ್ಸು, ಜರ್ಮನಿ ಅಂತ ಹದಿನೈದು-ಇಪ್ಪತ್ತು ದಿನಗಳ
ಟ್ರಿಪ್ ಹೊಡೆಯುತ್ತಾರೆ. ನೀವು ಗಡದ್ದಾಗಿ ಊಟ
ಮಾಡಿ ನಿದ್ದೆ ಹೊಡೆದದ್ದೇ ಬಂತು.
೮) ಅವರ ಖರೀದಿಯೆಲ್ಲಾ ಬಿಗ ಬಝಾರ, ಸ್ಟಾರ ಬಝಾರ, ಗರುಡಾ, ಮಂತ್ರಿ, ಫೋರಂ ಮಾಲ್
ಇಂಥಲ್ಲೇ. ನಿಮ್ಮ ಹಾಗೆ ಬೀದಿ ಬದಿಯಲ್ಲಿ ನಿಂತು ಚೌಕಾಶಿ ಮಾಡಲು ಅವರಿಗೆ ಟೈಮಾದರೂ
ಎಲ್ಲಿರುತ್ತದೆ ಪಾಪ! ಹೆಂಡತಿ ಸೀರೆ, ಆಭರಣಕ್ಕೆ ಮಾಡಿದ ಖರ್ಚಿನ ಲೆಕ್ಕವೂ ಸಿಗುವುದಿಲ್ಲ.
ಕ್ರೆಡಿಟ್ ಕಾರ್ಡ ಕೊಟ್ಟು ಎಲ್ಲೋ ನೋಡುತ್ತ ನಿಲ್ಲುವ ಅವರಿಗೆ ಬ್ಯಾಂಕಿನಿಂದ ಬಂದ ಎಸ್ಸೆಮ್ಮೆಸ್ಸು,
ಸ್ಟೇಟಮೆಂಟು ನೋಡಲೂ ಟೈಮಿರುವುದಿಲ್ಲ.
೯) ವರ್ಷಕ್ಕೊಮ್ಮೆ ಎರೆಡು ವರ್ಷಕ್ಕೊಮ್ಮೆ
ಕಾರು ಚೇಂಜ ಮಾಡುತ್ತಾ ಹೆಂಡತಿ-ಮಕ್ಕಳಿಗೆ ಸ್ವರ್ಗ ಸುಖವನ್ನು ಉಣಿಸುವ ಅವರೆಲ್ಲಿ,
ಉಸಿರಿಗೊಂಬತ್ತು ಸಲ ಹೆಂಡತಿಯ ತಪ್ಪು ಎತ್ತಿ ತೋರಿಸುತ್ತ ನಿಮ್ಮಪ್ಪ ಮದುವೇಲಿ ಅದು ಕೊಡಲಿಲ್ಲ,
ಇದು ಮಾಡಲಿಲ್ಲ ಅನ್ನು ನೀವೆಲ್ಲಿ?
೧೦) ಇನ್ನೂ ಒಂದು ಬಲವಾದ ಕಾರಣವಿದೆ,
ಅವರನ್ನು ಮೆಚ್ಚಿಕೊಳ್ಳಲು, ಕೇಳಿ. ಕಂಪ್ಯೂಟರ ಮುಂದೆ ಕೂತು-ಕೂತು ತಲೆ ಉಪಯೊಗಿಸಿ, ಉಪಯೋಗಿಸಿ,
ತಲೆ ಕೂದಲೆಲ್ಲ ಬೇಗನೇ ಬೆಳ್ಳಗಾಗಿ ಸಣ್ನ ವಯಸ್ಸಿಗೇ ಹಿರಿಯರಂತೆ ಕಾಣುವ ಅಳಿಯಂದಿರು, ಮಾವಂದಿರ
ಗೆಳೆಯರಂತೇ ಕಾಣುತ್ತಾರೆ, ಮತ್ತು ಸ್ವಲ್ಪ ದಿನಗಳಲ್ಲೇ ಗೆಳೆಯರೇ ಆಗುತ್ತಾರೆ.
ಈಗ
ನೀವೇ ಹೇಳಿ, ಇಷ್ಟೆಲ್ಲಾ ಅನುಕೂಲವಿರುವ ಸಾಫ್ಟವೇರಿಗಳನ್ನು ಬಿಟ್ಟು ನಿಮ್ಮಂಥ (ಪಾಪ ಅನಿಸುತ್ತದೆ
ನಮಗೂ) ವರಗಳಿಗೆ ಕೊಡಲು ನಾವೇನು ತಲೆಕೆಟ್ಟ ಯಬಡರೇ? ನಾವೂ ಜಾಣರಾಗಿದ್ದೇವೆ ತಡವಾಗಿಯಾದರೂ!
ಇನ್ನೊಂದು ಗುಟ್ಟು ಹೇಳುತ್ತೇನೆ ಕೇಳಿರಿ, ಕಷ್ಟ ನಿಮಗಷ್ಟೇ ಅಲ್ಲ, ನಮಗೂ ಬಂದಿದೆ, "ಒಂದು
ಹದಿನೈದಿಪ್ಪತ್ತು ವರ್ಷ ತಡವಾಗಿಯಾದರೂ ಹುಟ್ಟಬಾರದಿತ್ತೇ? ನನಗೂ ಸಾಫ್ಟವೇರಿ ವರನೇ
ಸಿಗುತ್ತಿದ್ದ" ಅಂತ ಬೆಳ್ಳಗಾದ ತಲೆಕೂದಲಿಗೆ ಹೇರಡೈ ಮಾಡಿಕೊಂಡು ಕಂಗೊಳಿಸುವ ನಮ್ಮ
ವಯಸ್ಸಾದ ಹೆಂಡರು ಬೇರೆ ಹೆಣ್ಣುಮಕ್ಕಳ ಮುಂದೆ, ಇಲ್ಲಾ ಇನ್ನೂ ವಯಸ್ಸಾಗಿರುವ ಬಚ್ಚು ಬಾಯಿಯ
ತಮ್ಮಮ್ಮನ ಮುಂದೋ ಆಲವತ್ತುಕೊಳ್ಳುವುದು ನೋಡಿಯೂ ನೋಡದ ಕುರುಡರಂತೆ ನಾವೇ ಇದ್ದುಬಿಡುತ್ತೇವೆ
ಕಣ್ರಯ್ಯಾ, ಇನ್ನು ನಿಮ್ಮಂಥವರ ಪಾಡೇನು? ಮೊದಲಿನಂತೆ ನಾವೂ ನಮ್ಮ ಹೆಂಡರಿಗೆ ಜೋರು ಮಾಡುವ
ಪರಿಸ್ಥಿಯಲ್ಲಿ ಇಲ್ಲ. ಬಿಟ್ಟುಹೋದರೇ? ಬೇಯಿಸಿ ಹಾಕುವರಾರು! ಹಾಗಾಗಿ ಅವರ ವರಾತಗಳನ್ನೆಲ್ಲ
ಸಹಿಸಿಕೊಂಡು ಅವರಿಗೆ ಬೇಕಾದಂಥ ಅಳಿಯನನ್ನು ಹುಡುಕುತ್ತಿದ್ದೇವೆ. ಹಾಗಂತ ನಮಗೆ ಸಾಫ್ಟವೇರಿಗಳು
ಬೇಡವೆಂತಲ್ಲ. ಯಾರು ಬೇಡ ಅನಲಿಕ್ಕೆ ಸಾಧ್ಯ ಹೇಳಿ ನೋಡೋಣ.
ಏನೇ ಆಗಲಿ, ನಿಮ್ಮಗಳ ಮದುವೆಯೂ ಆಗಲಿ, ನಿಮಗೂ ಮದುವೆಗೆ ಹೆಣ್ಣು ಸಿಗಲಿ ಎಂದು ಹಾರೈಸಿ,
ಆಶೀರ್ವದಿಸುವ,
ಇಂತಿ ತಮ್ಮ ವಿಶ್ವಾಸಿ
ಅಧ್ಯಕ್ಷರು
ಕ.ಪಿ.ಸಂಘ
ಕರ್ನಾಟಕ
No comments:
Post a Comment