Tuesday, 24 May 2016

ಲಘು ಬರಹ

ಮಧ್ಯಮ ತಾನಧಮನು


ರವಿವಾರ ಬಂತಂದ್ರ ಒಳಗೊಳಗೇ ಒಂದು ಖುಶಿ. ಎಷ್ಟೊತ್ತಿಗಾದರೂ ಎದ್ದು, ಮನಸ್ಸಿಗೆ ಬಂಧಂಗ ಕೆಲಸಾ ಮಾಡಕೋತ, ಇಲ್ಲಾ ಮಾಡಿಧಂಗ ಮಾಡಕೋತ, ಇಲ್ಲಾ ಆಳಸಿತನದಿಂದ ಮಲಕೊಂಢಂಗ ಕುತಗೊಂಡು ಟಿ.ವಿ. ನೋಡಕೋತ, ನಡುನಡುವ ಪೇಪರ ಮ್ಯಾಲೆ ಕಣ್ಣು ಹಾಯಿಸಿಕೋತ, ಇಕಿ ಏನರೆ ಬೈಕೋತ ಆದ್ರೂ ಒಂದು ಕಪ್ಪು ಛಾ ಕೊಡೊ ಕೃಪಾ ಮಾಡತಾಳೇನೋ ಅಂತ ಅಡಗಿಮನಿ ಕಡೆ ಕಳ್ಳನೋಟ ಬೀರಕೋತ, ಇನ್ನ ಇವತ್ತೇನೇನು ನನ್ನ ಲೇಖನಿಯಿಂದ ಬರದು ಝಳಪಿಸಬೇಕಂತ ಲೆಕ್ಕಾಚಾರ ಹಾಕ್ಕೋತ, ..............ನಾನು ಹೀಂಗ ಆರಾಮಾಗಿ ಕೂತಾಗ ಒಂದೈದಾರು ಧಾಂಡಿಗ ಹುಡುಗೋರು ಮನಿವಳಗ ಕಾಲಿಟ್ಟರು. ನನ್ನ ಜೀವ ಫುಕುಫುಕು ಹೆದರಿ ಇಲಿ ಹಂಗ ಯಾವುದರೇ ಬಿಲಾ ಸಿಗತದೇನು ಅಂತ ನೋಡಲಿಕತ್ತು. ಬಂದಾವ್ರು, "ನಮಸ್ಕಾರ ಸಾ" ಅಂತ ಹೇಳಿಸಿಕೊಳ್ಳದನ ತಾವ ಸುಖಾಸೀನರಾದ್ರು. ನಾನು ಪಿಳಿಪಿಳಿ ಕಣ್ಣು ಬಿಟ್ಟು ಮುಂದೇನು ಗಂಡಾಂತರ ಕಾದದ ಅಂತ ನೋಡಲಿಕತ್ತೆ. "ಸಾ ನಮ್ಮ ಕಾಲನಿ ಯುವಕರ ಸಂಘದ ವಾರ್ಷಿಕೋತ್ಸವಕ್ಕ ನಿಮ್ಮನ್ನ ಮುಖ್ಯ ಅತಿಥಿ ಮಾಡಬೇಕಂತ ಮಾಡೇವಿ. ಮುಂದಿನ ಭಾನುವಾರ ಫಂಕ್ಷನ್ನು. ನೀವು ಬಂದು ಒಂದೆರಡು ಮಾತಾಡಬೇಕು ಸಾ" ಅಂದ್ರು. ನಂಗಂತೂ ಖುಶಿಯಿಂದ ಕುಪ್ಪಳಿಸೋ ಹಂಗ ಆತು. ಎಷ್ಟು ವರ್ಷದಿಂದ ಈ ಅಕ್ಷರಸೇವಾ, ಸಾಹಿತ್ಯಸೇವಾ ಮಾಡಕೋತ ಬಂದೇನಿ, ಮಕ್ಕಳು ಒಬ್ಬರರೇ ಗುರತಿಸಲಿಲ್ಲ. ಈಗ ಈ ಹುಡುಗೋರು ನನ್ನೊಳಗಿರೋ ಲೇಖಕನ್ನ ಗುರುತಿಸಿ ಕರೀಲಿಕ್ಕೆ ಬಂದಾರ, ಪಾಪ - - - ಹೋಗದನ ಇರಲಿಕ್ಕೆ ಆಗತದ? ಬರದು ಬರದು ನನ್ನ ಕೈಬೆರಳು ಸವದ ಹೋಗ್ಯಾವ, ಆದ್ರೂ ಈ ಪತ್ರಿಕೆಯವರಿಗೇನು ಸೊಕ್ಕು ಕಡಿಮಿ ಅಂತೀರೀ, - - - ಕಳಿಸಿದ ಕಥಿ, ಲೇಖನ, ಕವನ ಎಲ್ಲಾ ಹಂಗ ಇಟಗೊಂಡು ಕೂಡತಾರ, ಇಲ್ಲಾ ಅಲ್ಲೇ ಕಾಲಕೆಳಗ ಇರೊ ಕಸದ ಬುಟ್ಯಾಗ ಹಾಕತಾರ, ಹೊರತೂ ಸ್ವೀಕೃತ, ಅಸ್ವೀಕೃತ ಅಂತ ಒಂದು ಮಾತು ತಿಳಸಿದ್ರ ಕೇಳ್ರಿ. ಮತ್ತ ಮ್ಯಾಲೆ ಸಂಪಾದಕರ ನಿರ್ಣಯನ s ಅಂತಿಮ ಅಂತ ಹೇಳಿ ಶರಾ ಬರದಬಿಡ್ತಾರ, ಕೇಳೋ ಹಕ್ಕು ನಿಮಗಿಲ್ಲ, ಹೇಳೋ ದರ್ದು ನಮಗಿಲ್ಲ ಅಂತ ಅದರರ್ಥ. ಆದರೂ ಛಲ ಬಿಡದ ತ್ರಿವಿಕ್ರಮನ ಹಂಗ ನಾನೂ ಬರದ-ಬರದ ಕಳಸೇ ಕಳಸ್ತೇನಿ. ಎಲ್ಲೋ ಒಂದೆರಡು ಲೇಖನ ಪ್ರಕಟ ಆಗ್ತಾವ, ಇನ್ನಿಪ್ಪತ್ತು ಕ.ಬು. ಸೇರಿರ್ತಾವ. ಈಗೀಗ ಈ ಫೇಸಬುಕ್ಕ ಒಂದಾಗಿ ಭಾಳ ಛೊಲೊ ಆಗೇದ ನೋಡ್ರಿ. ಯಾರು ಓದ್ಲಿ, ಬಿಡ್ಲಿ, ನಮ್ಮಷ್ಟಕ್ಕ ನಾವು ಬರದದ್ದನ್ನ ಪೋಸ್ಟ್ ಮಾಡಿ ಥಣ್ಣಗ ಕುತಗೊಂಡುಬಿದೋದು, ಓದೋದು ಬಿಡೋದು ಮಂದಿ ಕರ್ಮ. ಏನೋ ಓದ್ಯರೆ, ಓದದನ ಅರೆ, ಒಂದು ಲೈಕ್ ಕುಟ್ಟಿದರ ಇವರ ಗಂಟೇನ ಹೋಗ್ತದ ಹೇಳ್ರಿ, ಆದ್ರೂ ಕುಟ್ಟಂಗಿಲ್ಲ, ಹರಾಮ ನನ್ನ ಮಕ್ಕಳು. ಆದ್ರ ಹಂಗಂತ ಯಾರಿಗೂ ಕುಟ್ಟಂಗಿಲ್ಲ ಅನಕೋಬ್ಯಾಡ್ರಿ, ಕೆಲವರಿಗೆ ಫೇಸಬುಕ್ಕಿನ್ಯಾಗೂ ಭಾರೀ ಬೇಡಿಕಿ ಅದ. ಅವ್ರು ಏನ ಬರೀಲಿ, ಹೆಂಥಾ ಕತ್ತಿಮಾರಿ ಫೋಟೊ ಹಾಕಲಿ, ಪಟಾಪಟಾಂತ ನೂರು, ಎರಡ್ನೂರು ಲೈಕ್ ಬಂದ ಬಿದ್ದಿರತಾವ. ಆದ್ರೂ ನಾನೂ ಎನು ಸೋಲೋ ಆಸಾಮಿ ಅಲ್ಲ. "ಕರ್ಮಣ್ಯೆ ವಾ ಅಧಿಕಾರಸ್ತೆ, ಮಾ ಫಲೇಶು ಕದಾಚನ" ಅಂತ ಸಂಪೂರ್ಣ ನಂಬಿಕಿ ಇಟ್ಟು ನಾ ಬರದದ್ದನ್ನೆಲ್ಲಾ ಪೋಸ್ಟ್ ಮಾಡಕೋತನ ಇರತೇನಿ. ಅದರ ಫಲಾ ನೋಡ್ರಿ ಇವತ್ತ ಈ ಹುಡುಗೋರು ನನ್ನ ಚೀಫ್ ಗೆಸ್ಟ್ ಮಾಡಬೇಕಂತ ಬಂದಾರ. ಮಾರ್ಕ್ ಝುಕರಬರ್ಗ್ ನಿನಗೊಂದು ಪ್ರಣಾಮ ಅಂತ ಮನಸ್ಸಿನ್ಯಾಗ ಅನಕೊಂಡು ಖುಶಿ ಮುಖದ ಮ್ಯಾಲೆ ಧಿಮಿಧಿಮಿ ಅಂತ ಕಾಣಿಸಿಕೊಳ್ಳಿಕ್ಕೆ ಒದ್ದಾಡತಿದ್ರೂ ಭಾಳ ಪ್ರಯತ್ನ ಪಟ್ಟು ಗಂಭೀರ ವದನನಾಗಿ "ಅವತ್ತ ನನಗೇನರೆ ಬ್ಯಾರೆ ಫಂಕ್ಷನ್ನು ಅದ ಏನು ನೋಡತೇನಿ ತಡ್ರಿ" ಅಂತ ಹೇಳಿ ಡೈರಿ ಪುಟಗೋಳ್ನ ಅಕಡಿಕಡೆ ಸುಮ್ಮನ ತಿರವಿ, "ಹೂಂ, ಲಕ್ಕಿಲಿ ಅವತ್ತ ಏನೂ ಕಾರ್ಯಕ್ರಮ ಇಲ್ರೆಪಾ, ಎಷ್ಟೊತ್ತಿಗೆ ನಿಮ್ಮ ಕಾರ್ಯಕ್ರಮಾ" ಅಂತ ಹಗೂರಾಗಿ, ಪರೋಕ್ಷವಾಗಿ ಒಪ್ಪಿಗಿ ಕೊಟ್ಟಬಿಟ್ಟೆ. ಭಾಳ ಭಾವ ಹೊಡಿಲಿಕತ್ತರ ಇವರೂ ಇನ್ನೊಬ್ಬ ಫೇಸಬುಕ್ಕ ರೈಟರನ್ನ ಹುಡಿಕ್ಕೊಂಡು ಹೋದರ ಏನ್ಮಾಡಲಿ? ಮದ್ಲ ಈಗಂತೂ ಗಲ್ಲಿ ಒಳಗ ಹತ್ತ ಜನಾ ಲೇಖಕರು ಹುಟಗೊಂಡಾರ, ಇದ s ಮಾರ್ಕ್ ಝುಕರಬರ್ಗ್ ಮಹಾಶಯನ ಕೃಪಾದಿಂದ.
ಇನ್ನೇನು ಎಲ್ಲಾ ಮುಗೀತು, ನನ್ನ ಭಾಷಣ ಫಿಕ್ಸ್ ಆತು ಅನ್ನೋದರೊಳಗ, "ಸಾ s ಒಂದ ಪ್ರಶ್ನೆ, ನೀವು ಎಡಾನೋ, ಬಲನೋ ಗೊತ್ತಾಗಲಿಲ್ಲ" ಹುಡುಗ ಒಬ್ಬ ಕೇಳಿದ. ಈ ಯುವಕ ಮಂಡಳದ ಅಧ್ಯಕ್ಷನ ಇರಬೇಕು ಅನಿಸ್ತು ನನಗ. "ನಾನು ಎಡಾನೂ ಅಲ್ಲ, ಬಲಾನೂ ಅಲ್ಲ. ಒಂದ ರೀತಿ ಮಧ್ಯಮ ಮಾರ್ಗಿ" ಅಂದೆ ಭಾರಿ ಹೆಮ್ಮೆಯಿಂದ. ಆದರ ಅಧ್ಯಕ್ಷನ ಮಾರಿ ಸಪ್ಪಗಾತು, "ಸಾರ್, ನೀವು ಯಾವದೂ ಕಡೆ ಇಲ್ಲ ಅಂದ್ರ ಹೆಂಗರೀ ಸಾರ್? ಇಲ್ಲಾ ಎಡಕ್ಕ ಇರಬೇಕು, ಇಲ್ಲ ಬಲಕ್ಕಿರಬೇಕು, ಈ ಮಧ್ಯಮ ಮಾರ್ಗ ಅನ್ನೋದು ಇಲ್ಲೇ ಇಲ್ರಿ ಸರ್". ನಾನೂ ಬಿಡಲಿಲ್ಲ, "ಇಲ್ಲಪಾ ತಮ್ಮಾ ನಾನು ಸೀದಾಸಾದಾ ಮನಷ್ಯಾ, ಸುಮ್ನ ಖುಶಿಗೆ ಒಂದಿಷ್ಟು ಹಾಸ್ಯಲೇಖನ, ಪ್ರಬಂಧ, ಕಥಿ, ಕವನಾ ಬರ್ಯಾಂವ, ನನಗೆಂಥಾ ಎಡಾ-ಬಲಾ" ಅಂತ ಅವನ್ನ s ಕೇಳಿದೆ. "ಸಾ ನೀವು ಹಿಂಗ ಹೇಳಲಿಕ್ಕೇ ಬರಂಗಿಲ್ಲರಿ, ಯಾವದರೆ ಒಂದ ಕಡೆ ಇದ್ದೇನಿ ಅಂತ ನೀವು ಡಿಕ್ಲೇರ್ ಮಾಡಕೊಳ್ಳಲಿಲ್ಲಾ ಅಂದ್ರ ನಿಮ್ಮನ್ಯಾರು ಲೇಖಕರು ಅಂತಾರ್ರಿ ಸಾರ್" , ಅವನೂ ಒಂದು ಪ್ರಶ್ನಿ ಒಗದ ಕೂತಾ, ಈಗ ಉತ್ತರಾ ಕೊಡ್ರಿ ನೋಡೋಣು ಅಂತ.
"ತಮ್ಮಾ ನಾನು ಇಲ್ಲೇ ಸುತ್ತಮುತ್ತಲೂ ಕಾಣಸೋ ಸಣ್ಣಪುಟ್ಟ ವಿಷಯಗಳನ್ನ, ಜನರನ್ನ ನೋಡಿ ಹಾಸ್ಯ ಲೇಖನಾ ಬರೀತೇನಿ. ಒಂದಿಷ್ಟು ಪ್ರೇಮಕವನಗಳು, ಒಮ್ಮೊಮ್ಮೆ ಕಥಿ-ಗಿಥಿ ಬರೀತೇನಿ. ಪ್ರೀತಿ-ಪ್ರೇಮನ ಹೆಚ್ಚಾಗಿ ನನ್ನ ಬರಹದ ವಸ್ತು ಆಗಿರ್ತದ" ಅಂತಂದು ಕಾಲಮ್ಯಾಲೆ ಕಾಲು ಹಾಕ್ಕೊಂಡು ಆರಾಮಾಗಿ ಕೂತೆ. ಈಗರೇ ಇವ್ರಿಗೆ ಖುಶಿ ಆಗಬಹುದು, ಎಷ್ಟs ಅಂದ್ರೂ ಹರೇದ ಹುಡುಗರು, ಪ್ರೀತಿ-ಪ್ರೇಮಾ ಅಂದ್ರ ಸಾಯತಾರ. ಆದ್ರ ಹುಡುಗೋರು ಒಬ್ಬರನೊಬ್ರು ನೋಡಕೊಂಡು ಖಿಸಿಖಿಸಿ ನಗಲಿಕತ್ರು. ಇನ್ನೊಬ್ಬ ಹುಡುಗ ಇನ್ನೂ ನಗಿ ತಡೀಲಾರದ ಒದ್ಯಾಡಕೋತ ಹೇಳಿದ, "ಸರ್ ಈಗೆಲ್ಲ ಯಾರು ಲವ್ವು-ಗಿವ್ವು ಅಂತ ಬರದಿರೋ ಕಥಿ ಓದ್ತಾರ ಸರ್, ಅವೆಲ್ಲಾ ಸುಮ್ಮಸುಮ್ಮನ ಟೈಮಪಾಸ್. ಇಕಿ ಮೊಬೈಲಿಗೆ ಕರನ್ಸಿ ಹಾಕ್ಸಿದ್ರ ಇಕಿ ಗರ್ಲ್ ಫ್ರೆಂಡ್ ಆಗ್ತಾಳ, ಅಕಿಗ ಹಾಕ್ಸಿದ್ರ ಅಕಿ ಆಗ್ತಾಳ. ಅಷ್ಟು ಸಿಂಪಲ್ ಸರ್. ಒಂದೆರಡು ವರ್ಷದ ನಂತರ ಇಬ್ಬರದೂ ಮದವಿ ಆಗ್ತದ, ಅವರವರ ಮನೆಯವ್ರು ನೋಡಿದ ವಧು ಅಥವಾ ವರನ ಜೋಡಿ. ಅಲ್ಲಿಗೆ ಲವ್ವಿನ ಪ್ರಥಮೋಧ್ಯಾಯ ಮುಗಿದು ದ್ವಿತಿಯೋಧ್ಯಾಯ ಪ್ರಾರಂಭ ಆಗ್ತದ. ನೀವು ಪಾಪ ಹಳೇ ಕಾಲದವ್ರು, ಇದೆಲ್ಲಾ ಲೇಟೆಸ್ಟ್ ಬೆಳವಣಿಗಿ ಗೊತ್ತಿಲ್ಲ ಕಾಣಸ್ತದ ನಿಮಗ" ಅಂತ ಕನಿಕರದಿಂದ ಲೊಚಗುಟ್ಟಿದ.
ಅಷ್ಟರಾಗ ಇನ್ನೊಬ್ಬ ಮಹಾಶಯ, "ಸಾರ್ ನೀವು ಎಡ ಪಂಥದೊಳಗಿದ್ರ ಪ್ರಶಸ್ತಿ, ಬಿರುದು-ಬಾವಲಿ ಒಳ್ಳೊಳ್ಳೆ ಹುದ್ದೆ, ಫಾರಿನ್ ಟೂರು ಎಲ್ಲಾ ಸಿಗ್ತಾವ. ಪೇಪರಿನವ್ರು, ಟಿ.ವಿ. ಅವ್ರು ಭಾಳ ಭಯಂಕರ ಪ್ರಚಾರ ಕೊಡ್ತಾರ, ನಿಮಗಂತೂ ಏನೇನೂ ಖರ್ಚಿಲ್ಲ, ಎಲ್ಲಾ ತಾನಾಗೇ ಬಂದು ನಿಮ್ಮ ಕಾಲಬುಡಕ ಬೀಳ್ತದ. ನಿಮ್ಮನ್ನ ಕಂಡಕಂಡ ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿ ಅಂತ ಕರದು ಶಾಲು, ಸ್ಮರಣಿಕೆ, ಕಾಣಿಕೆ ಅಂತೆಲ್ಲ ಕೊಡತಾರ. ಟಿ.ಎ, ಡಿ.ಎ. ಅಂತೂ ಇಂಪ್ಲೈಡ್ ಅಂತ ತಿಳ್ಕೋರಿ. ಯಾರಿಗುಂಟು ಯಾರಿಗಿಲ್ಲ ಸರ್. ನೀವು ಒಂದು ಸ್ಟೇಟಮೆಂಟು ಕೊಟ್ಟು ನೋಡ್ರಿ, ಹ್ಯಾಂಗ ಚೇಂಜ್ ಆಗ್ತದ ನಿಮ್ಮ ಹಣೆಬರಹ" ಭಾಳ ದೊಡ್ಡ ಲೆಕ್ಚರ್ ಕೊಟ್ಟ ಮಹರಾಯಾ! ನನ್ನ ಹೆಂಡ್ತಿ ಒಳಗಿಂದನ ನನ್ನ ಕಡೆ ದುರುಗುಟ್ಟಿಕೊಂಡು ನೋಡಲಿಕತ್ಲು, ಏನೇನೂ ಗೊತ್ತಿಲ್ಲ ಈ ಪ್ರಾಣಿಗೆ, ಎಂಥಾ ಲೇಖಕನೋ ಏನೋ ಅಂತ ಸಿಟ್ಟ ಬಂದಿರಬೇಕು. ಇನ್ನು ಇವ್ರು ಹೊರಗ ಹೋಗೋದಕ್ಕೂ ಒಳಗಿಂದ ತಿವಿತಾಳ ನನ್ನ.
ಇನ್ನೊಬ್ಬ ಹುಡುಗ ಈಗ ಶುರು ಮಾಡಿದ, "ಸರ್, ನಿಮಗ ಎಡಾ ಬ್ಯಾಡಂದ್ರ ಬಲಕ್ಕ ಹೋಗ್ರಿ, ಅಲ್ಲೂ ಫಾಯದೇನ ಅದ. ನೀವೇನರೆ ಒಂದು ಸ್ಟೇಟಮೆಂಟ್ ಕೊಟ್ಟು ನೋಡ್ರಿ, ಅಥವಾ ಒಂದು ಸಣ್ಣ ಲೇಖನಾ ಬರೀರಿ. ಎಡದಾವ್ರು ನಿಮ್ಮ ಹೆಸರಿನ ಸಹಸ್ರ ನಾಮಾವಳಿ ತೊಗೊಂಡು ಉಗದು ಉಪ್ಪಿನಕಾಯಿ ಹಾಕಾತಾರ, ಲಟಲಟಾಂತ ಮಾತಿಗೊಮ್ಮೆ ಅದನ್ನs ನೆಂಜಿಕೋತಾರ. ಆಗ ತಾನ ತಾನಾಗಿ ನಿಮ್ಮ ಹೆಸರಿಗೆ ಒಂದು ಪಾಪ್ಯುಲ್ಯಾರಿಟಿ ಅಂಟಕೊಂಡಬಿಡತದ, ಫೆವಿಕಾಲಿನಂಗ, ನೀವು ಬಿಟ್ಟರೂ ಆಮ್ಯಾಲದು ನಿಮ್ಮನ್ನ ಬಿಡಂಗಿಲ್ಲ. ಒಟ್ಟು ತಾತ್ಪರ್ಯ ಏನಪಾ ಅಂದ್ರ ಇಲ್ಲಾ ಎಡಕ್ಕ ಬರ್ರಿ, ಇಲ್ಲಾ ಬಲಕ್ಕ ಹೋಗ್ರಿ, ಈ ಮಧ್ಯಮ ಮಧ್ಯಮ ಅನಕೋತ ಕೂತ್ರಿ, ಸತ್ರಿ ನೀವು" ಅಂತ ತನ್ನ ಭಾಷಣಾ ಮುಗಿಸಿದಾ.
"ಹುಡುಗುರ್ಯಾ, ಖರೆ ಹೇಳಬೇಕಂದ್ರ ನನಗಿಂತ ನೀವs ಎಲ್ಲಾರೂ ಛೊಲೊ ಭಾಷಣಾ ಮಾಡತೀರಿ. ನನಗಿಂತಾ ಹೆಚ್ಚು ತಿಳವಳಿಕಿನೂ ನಿಮಗ ಅದ. ಇನ್ನ ನಾ ಬಂದ ಹೇಳೋದೇನು ಉಳದದ ಹೇಳ್ರಿ. ನೀವs ನನ್ನ ಗುರುಗೋಳು ಆಧಂಗ ಆದ್ರಿ. ಇನ್ನ ನಾ ಯಾವದರೇ ಒಂದ ಕಡೆ ಹೋಗಲಿಕ್ಕೆ ಡಿಸೈಡ್ ಮಾಡಬೇಕಲಾ" ಅಂದೆ. ಅವರೆಲ್ಲಾ ಖುಶಿಯಿಂದ "ಮಾಡ್ರಿ, ಮಾಡ್ರಿ, ಸರ್, ಮುಂದಿನ ರವಿವಾರದೊಳಗ ನೀವು ಯಾವದರೇ ಒಂದು ಬಣಕ್ಕ ಸೇರಕೊಳ್ರಿ, ನಾವು ಬಂದು ನಿಮ್ಮನ್ನ ಭಾಷಣಕ್ಕ ಕರಕೊಂಡು ಹೋಗ್ತೇವಿ" ಅಂತ ಎದ್ರು. ನಾನು ಬೆಂಕಿಯಲ್ಲಿ ಅರಳಿದ ಹೂವು ಸಿನಮಾದೊಳಗ ಸುಂದರ ರಾಜ ಮಾಡಿಧಂಗ ಎಡಗೈಯಿಂದ ಬಲಗೈ, ಬಲಗೈಯಿಂದ ಎಡಗೈ ಮುಟಗೋತ ಯಾವದು ಸರಿ ಆಗಬಹುದು ಅಂತ ವಿಚಾರ ಮಾಡಲಿಖತ್ತೆ.
***************************

Thursday, 14 January 2016

ಪ್ರೇಮಾಯಣ


ಪ್ರೇಮಾಯಣ

ಮಾಡಲು ಕೆಲಸವಿಲ್ಲದೆ, ಓದಲು ಆಸ್ಥೆ ಇಲ್ಲದೆ ಉಂಡು ಮಲಗುವ ಕತ್ತೆಯಂತಾಗಿದ್ದೆ. ಆ ಕತ್ತೆಗಾದರೂ ಕೆಲಸವಿರುತ್ತದೆ ಪಾಪ! ನನಗಿಲ್ಲ ಅಷ್ಟೇ. ರೇಡಿಯೋ ಆದರೂ ಕೇಳೋಣವೆಂದು ವಿವಿಧಭಾರತಿಗೆ ತಿರುಗಿಸಿದೆ. "ಪ್ಯಾರ ತೆರಾ ಪಾನೇಕೊ" ಎಂದು ಮುಕೇಶ ಅಡ್ಡಾದಿಡ್ಡಿಯಾಗಿ ಅಳುತ್ತಿದ್ದ. ಈ ಗೊಡ್ಡು ಹಿಂದಿಯವಕ್ಕೆ ಪ್ರೀತಿ ಮಾಡಿ ಎಲ್ಲಾ ಕಳಕೊಳ್ಳುವುದು ಬಿಟ್ಟು ಇನ್ನೇನು ಬರುತ್ತದೆ? ಧಾರವಾಡಕ್ಕೆ ಹಚ್ಚಿದೆ. ಅಬ್ಬಾ! ಇವರಿಗೂ ಪ್ರೀತಿಯ ಸಾಂಕ್ರಾಮಿಕ ರೋಗ ಹರಡಿಯೇ ಬಿಟ್ಟಿದೆ. "ಪ್ರೀತಿಯೇ ನನ್ನುಸಿರು" ಎಂದು ಕಿರುಚತೊಡಗಿದಾಗ ನಾವೆಲ್ಲ ಹಾಗಾದರೆ ಉಸಿರು ಸಿಕ್ಕು ಸಾಯುತ್ತಿದ್ದೇವೆಯೇ ಎನಿಸಿತು. ಏಕೆಂದರೆ ನಾವು ಅಂದರೆ ನಾನಂತೂ ಪ್ರೀತಿ ಮಾಡಲಿಲ್ಲ ನೋಡಿ.
ಈ ಹೊಲಸು ಹೊತ್ತು ಹೋಗುವುದೇ ಕಠಿಣವಾಗಿ ಗೆಳತಿಯ ಮನೆಗಾದರೂ ಹೋಗೋಣವೆಂದು ಹೊರಟೆ. ಹೋದೆ. ನನ್ನ ದುರದೃಷ್ಟ! ಅವಳ ಮೂಡೂ ಚೆನ್ನಾಗಿರಲಿಲ್ಲ. "ಏಕೇ ಏನಾಗಿದೆ?" ಎಂದು ಕೇಳಿದೆ. "ಶ್ .. ಹೇಳುತ್ತೇನೆ ಬಾ" ಎಂದು ಕೋಣೆಯಲ್ಲಿ ಕರೆದೊಯ್ದವಳು ತನ್ನ ಗೋಳನ್ನು ತೋಡಿಕೊಂಡಳು. "ನನ್ನ ಲವರ್ ಎಂಟುದಿನದಿಂದ ಕಂಡೇ ಇಲ್ಲ ಕಣೆ. ಎಲ್ಲಿ ಹೋಗುವೆನೆಂದು ಹೇಳುವುದು ಬೇಡವೇ?" ಇಷ್ಟು ಹೇಳುವುದರಲ್ಲಿ ಪಾಪ ಅವಳ ಕಣ್ಣೀರು ಮಳೆನೀರಿನಂತೆ ಎಲ್ಲಿ ಹರಿಯುವುದೋ ಎಂದು ನಾನು ಹೆದರಿಬಿಟ್ಟೆ. "ನೀನು ಯಾವಾಗ ಲವ್ ಮಾಡಿದೆಯೇ?" ಎಂದೆ. ಒಮ್ಮಿಲೇ ಆ ಕಣ್ಣುಗಳು ಏನು ಹೊಳೆದವು! "ನಿನ್ನಂಥ ಗುಗ್ಗೂಗೆ ಹೇಗೆ ಗೊತ್ತಾಗಬೇಕು? ಅದಕ್ಕೂ ಬೇಕು ಬುದ್ಧಿ" ಎಂದಳು. ಅವಳ ವಿರಹವೇದನೆ ನನಗೆ ಕೇಳಲು ಅಸಹನೆಯಾಗಿ ಎದ್ದು ಬಂದೆ. 
ಮತ್ತೆ ಮನೆಯಲ್ಲಿ ಬಿದ್ದಿರುವುದೇಕೆಂದು ಎದ್ದು ವಾಕಿಂಗಿಗೆ ಹೋದರೆ ಅಲ್ಲೂ ಗೆಳತಿಯರ ಕಾಟ. ಏನೋ ಗೊಳ್ಳು ಮಾತಾಡಿ ಹೋಗುವ ಎಂದು ಪ್ರೇಮಾವತಿಯೊಡನೆ ನಿಂತೆ. ಮಾತನಾಡುತ್ತ ನಿಂತವಳು ಒಮ್ಮಿಲೇ ನಾಚಿದಂತೆ ನಕ್ಕಾಗ "ಏನಾಯಿತೇ?" ಎಂದೆ. ಉತ್ತರ ಹೇಳದೇ ಪಕ್ಕಕ್ಕೆ ವಾರೆನೋಟ ಬೀರಿದಳು. ಕೋಡಂಗಿಯಂಥವನೊಬ್ಬ ನಿಂತಿದ್ದ. ಯಾರಾದರೂ ಇರಲಿ ಎಂದು ಧೈರ್ಯದಿಂದ ಕೇಳಿಬಿಟ್ಟೆ, "ನಿನ್ನ ಲವರಾ?" "ನಿನಗೆ ಹೇಗೆ ಗೊತ್ತಾಗಿಬಿಟ್ತು!" ಎಂದು ಮತ್ತೆ ಮತ್ತೆ ನಕ್ಕಾಗ ಸಮಾಧಾನವಾಯ್ತು, ಈ ಗುಗ್ಗೂಗೂ ಸ್ವಲ್ಪ ಬುದ್ಧಿ ಬರಲಾರಂಭಿಸಿದೆ ಎಂದು. ದಾರಿಯಲ್ಲೆಲ್ಲಾ ಅದೇ ಯೋಚನೆ ಅಂತರ್ರಾಷ್ಟ್ರೀಯ ಪ್ರಶ್ನೆಯಾಗಿ ತಲೆ ತುಂಬಿತ್ತು. ಅಲ್ಲಾ, ನೋಡಿದವರೆಲ್ಲಾ ಪ್ರೀತಿ ಮಾಡುತ್ತಿದ್ದಾರೆ. ಇಷ್ಟು ದಿನ ಬರೀ ನೋಡಲು ಚೆಂದ ಎಂದು ತಿಳಿದುಕೊಂಡವರಷ್ಟೇ ಪ್ರೀತಿ ಮಾಡುತ್ತಾರೆಂದುಕೊಂಡಿದ್ದೆ. ಈಗ ಇದೇನು? ಮಂಗನಂತಿದ್ದವರು ಕತ್ತೆಯಂಥವರನ್ನೂ, ಕುರೂಪಿಗಳು ಕೋಡಂಗಿಗಳನ್ನೂ, ಹುಚ್ಚರು ಬೆಪ್ಪರನ್ನೂ, ಒಟ್ಟು ಎಲ್ಲ ಗಂಡುಗಳು ಎಲ್ಲ ಹೆಣ್ಣುಗಳನ್ನು ಒಟ್ಟು ಸಿಕ್ಕಿದವುಗಳನ್ನು ಪ್ರೀತಿಸುತ್ತಿದ್ದಾರೆ. ಅಂದರೆ ಪ್ರೀತಿ ದೇಶ, ಕಾಲ, ಸೌಂದರ್ಯ, ಜಾತಿ ಎಲ್ಲವುಗಳಿಂದ ಅತೀತ. ಹೆತ್ತವರಿಗೆ ಹೆಗ್ಗಣ ಮುದ್ದೆಂಬ ಮಾತನ್ನು ಕೇಳಿದ್ದೆ. ಈಗ "ಪ್ರೀತಿಸಿದವರಿಗೆ ಪಿಗ್ಗೂ (pig) ಮುದ್ದೆಂದು ತಿಳಿದುಕೊಂಡೆ. ಜಗತ್ತಿನ ಒಂದೇ ಶಕ್ತಿ ಪ್ರೀತಿ. "ಪ್ರೀತಿಗೆ ಜೈವಾಗಲಿ" ಎಂದು ಜೋರಾಗಿ ಒದರಿದೆ, ಪುಣ್ಯಕ್ಕೆ ಮನೆಯಲ್ಲಿ.
ನನಗೆ ನನ್ನ ಮೇಲೇ ಬಹಳ ಸಿಟ್ಟು ಬಂದುಬಿಟ್ಟಿದೆ, ಬೇಜಾರಾಗಿದೆ. ಅಲ್ಲಾ ಎಲ್ಲರೂ ಪ್ರೇಮದ ದಾಸರಾಗಿರುವಾಗ ನಾನೊಬ್ಬಳೇ ಅದಕ್ಕೆ ಅಧಿಪತಿಯಾಗಿ ಅದನ್ನು ನಿಯಂತ್ರಿಸಲು ಸಾಧ್ಯವೇ? ಛೇ! ಸಾಧ್ಯವೇ ಇಲ್ಲ, ಅದೂ ಈ ಪ್ರಜಾತಂತ್ರ ರಾಜ್ಯದ ಪ್ರೇಮಿಗಳೆಲ್ಲರ ಮಧ್ಯೆ. ಅದಕ್ಕೇ ನಾನಾಗಿಯೇ ಮೊದಲು ಶರಣಾಗುವುದು ಒಳ್ಳೆಯದೆನಿಸಿ ಪ್ರೇಮ ಮಾಡಬೇಕೆಂದೆ. ಆದರೆ ಒಂದು ಒಳ್ಳೆಯ ಗಂಡು ಸಿಗಬೇಕಲ್ಲಾ ದೇವರೇ!
ಎರೆಡು ದಿನ ಸತತವಾಗಿ ಧ್ಯಾನದಲ್ಲಿದ್ದೆ. ಚಿಂತನೆ-ಮಂಥನಗಳ ನಿರಂತರ ತಪದಿಂದ ಸುಂದರವಾದ ವಿಚಾರ ಹೊಳೆಯಿತು. ರಾಜಮಾರ್ಗ! ಹೇಗೂ ದಿನಪತ್ರಿಕೆಯ ಕಾರ್ಯಾಲಯದಲ್ಲಿ ನನ್ನ ಗೆಳತಿಯೊಬ್ಬಳಿದ್ದಾಳೆ. (ಅವಳೂ ಪ್ರೇಮರೋಗಿ). ಅವಳಿಗೆ ಹೇಳಿ ಒಂದು ಜಾಹಿರಾತು ಕೊಟ್ಟುಬಿಡುವುದು. ಹೌದು. ಸುಂದರವಾದ ಜಾಹಿರಾತು ತಯಾರಿಸಿದೆ. ’ಹದಿನಾರರ ಮೇಲಿನ ಹುಡುಗಿಗೆ ಸುಂದರ, ಸಾಹುಕಾರ, ಒಳ್ಳೆಯ ಹುದ್ದೆ, ಗದ್ದೆ, ಮನೆ ಇರುವ ೨೦ ರಿಂದ ೨೫ ವಯಸ್ಸಿನ ಒಳಗಿನ ಹುಡುಗನೊಬ್ಬ ಪ್ರೀತಿ ಮಾಡಲು ಬೇಕಾಗಿದ್ದಾನೆ. ಪ್ರತಿ ಗುರುವಾರ ಮಠಕ್ಕೆ ಹೋಗುವವನಾಗಿರಬೇಕು. ಬೇರೆ ಯಾವ ಹುಡುಗಿಯನ್ನೂ ಸರಿಯಾಗಿ ನೋಡಿರಬಾರದು. ನೋಡಿದ್ದರೂ ಪ್ರೀತಿ, ಪ್ರೇಮಗಳ ಬಗ್ಗೆ ವಿಚಾರ ಮಾಡಿರಬಾರದು" 
ತೆಗೆದುಕೊಂಡು ಹೋಗುವಾಗ ದೇವರಿಗೆಲ್ಲಾ ಅಡ್ಡಬಿದ್ದೆ. ಕೃಷ್ಣನ ಮುಂದೆ ಹತ್ತು ನಿಮಿಷ ಸಾಷ್ಠಾಂಗ ನಮಸ್ಕಾರ ಮಾಡಿ ಬೇಡಿಕೊಂಡೆ, "ಕೃಷ್ಣಾ ಇಂಥ ವಿಚಾರಗಳೆಲ್ಲಾ ಉಳಿದವರಿಗಿಂತ ನಿನಗೇ ಹೆಚ್ಚು ತಿಳಿಯುವುದು, ದಯವಿಟ್ಟು ಒಂದು ಒಳ್ಳೆಯ ಹುಡುಗನನ್ನು ದಯಪಾಲಿಸು."
ಗೆಳತಿಗೆ ಜಾಹಿರಾತು ಬರೆದ ಹಾಳೆಯನ್ನು ಕೊಟ್ಟೆ. ಜೋರಾಗಿ ನಕ್ಕಳು ಸೊಕ್ಕಿಷ್ಟೆ! "ಜೊತೆಗೆ ಜಾತಕಾನೂ ತಂದಿದ್ರಾಗ್ತಿತ್ತೇ." ಎಂದಳು. ಇವಳಿಗೇನು ಗೊತ್ತು ನನ್ನ ಸಂಕಟ? ಯಾವ ಕೆಲಸವೂ ಇಲ್ಲದೇ ಒದ್ದಾಡುವವಳು ನಾನು. ಎರೆಡೆರೆಡು ಕೆಲಸಗಳನ್ನು ಹಿಡಿದು ಹಾಯಾಗಿರುವವಳು ಅವಳು. ಪ್ರೀತಿಯನ್ನಾದರೂ ಮಾಡಬೇಕೆಂದು ನಾನು ಜಾಹಿರಾತು ಕೊಡಬೇಕೆಂದರೆ ಶುರುವಾಯಿತು ಅವಳ ಉಪದೇಶ. "ಹೀಗೆ ಪೇಪರನಲ್ಲಿ ಕೊಟ್ಟು ಪ್ರೀತಿ ಮಾಡುವುದಲ್ಲವೇ ಹುಚ್ಚಿ. ಪ್ರೀತಿ ತಾನಾಗಿಯೇ ಉದಯಿಸಬೇಕು. ನಿನಗೆ ಪರಿಚಯವಿದ್ದವರಲ್ಲಿ, ಕಾಲೇಜಿನಲ್ಲಿ ಯಾರಾದರೂ ಸಿಕ್ಕರೆ ಮಾಡು" ಎಂದಳು.
ಅಂದಿನಿಂದ ಪ್ರಾರಂಭವಾಯಿತು ಪ್ರೇಮಿಯ ಹುಡುಕಾಟ. ದಾರಿಯಲ್ಲಿ ಹೊರಟ ಗಂಡುಪ್ರಾಣಿಗಳನ್ನೆಲ್ಲ ನೋಡಿದೆ. ಕೆಲವನ್ನು ನೆನಪಿಟ್ಟುಕೊಂಡೆ. ಇನ್ನೂ ಕೆಲವನ್ನು ಮಾತನಾಡಿಸಲು ಪ್ರಯತ್ನಿಸಿದೆ. ಆದರೂ ಪ್ರೀತಿ ಹೇಗೆ ಮಾಡಬೇಕೆಂದು ತಿಳಿಯಲಿಲ್ಲ. ಹೇಗೆ ಪ್ರೀತಿ ಮಾಡುತ್ತಾರೆ ಈ ಜನ! ದನಗಳು ಹುಲ್ಲು ಮೇಯ್ದಷ್ಟು ಸುಲಭವಾಗಿ. ನನ್ನ ಗೆಳತಿಯರೆಲ್ಲ ಪ್ರೇಮಾನಂದದ, ವಿರಹತಾಪದ ಅನುಭವವನ್ನು ಮೇಯುತ್ತಿರುವಾಗ ಇದೇನು ನನ್ನ ಸ್ಥಿತಿ! ಒಂದು ಗಂಡಿಗೂ ಇಲ್ಲ ಗತಿ! ಎನಿಸಿತು. ಆದರೂ ಅದೊಂದು ತಪಸ್ಸೇ ಸರಿ, ಮಾಡಿಯೇ ತೀರಬೇಕೆಂಬ ಛಲ ಹೊತ್ತೆ. 
ನನ್ನ ಅಣ್ಣ ತನ್ನ ಹೊಸ ಗೆಳೆಯನೊಬ್ಬನ ಪರಿಚಯವನ್ನ ಭಾರಿಯಾಗಿ ಮಾಡಿಕೊಟ್ಟ. ಅಬ್ಬಬ್ಬ! ಅಂತೂ ಒಂದು ಮಿಕ ಸಿಕ್ತು ಟ್ರೈ ಮಾಡಲು ಅಡ್ಡಿ ಇಲ್ಲ ಎಂದುಕೊಂಡೆ. "ಅಣ್ಣಾ ನಿನ್ನ ಗೆಳೆಯ ಹ್ಯಾಗೋ? ತುಂಬಾ ಒಳ್ಳೆಯವನ ಹಾಗೆ ಕಾಣ್ತಾನಲ್ಲಾ?" ರಾತ್ರಿ ಎಂದಿಲ್ಲದ ಪ್ರೀತಿಯಿಂದ ಅಣ್ಣನ ಹತ್ತಿರ ಕುಳಿತು ಕೇಳಿದೆ. ಉಳಿದ ದಿನಗಳಲ್ಲಿ ಆ ಮಂಗನ ಹತ್ತಿರ ಕೂಡಲು ನನಗೇನು ಕೆಲಸವಿಲ್ಲವೇ ಹೇಳಿ. ಏಕೆಂದರೆ ಅದಕ್ಕೋ ಕೇವಲ ತನ್ನ ಆಫೀಸಿನಲ್ಲಿ ಕೆಲಸ ಮಾಡುವ ಹುಚ್ಚು ಹುಡುಗಿಯರ ಧ್ಯಾನವೇ ಧ್ಯಾನವಾಗಿರುತ್ತದೆ.
“ಏನು ಒಳ್ಳೆ ಪತ್ತೆದಾರನ ಥರಾ ತೀರಾ ಮೃದುವಾಗಿ ಎಲ್ಲಾ ವಿಷಯ ಕೇಳಕೊಳ್ಳೋಣ ಅಂತೀ. ಆ ಬೇಕೂಫ ಒಂದು ಹುಡುಗೀನ ಲವ್ ಮಾಡಿ ಬಿಟ್ಟು ಈಗ ಯೋಗಿಯಾಗಿ ರೋಗಿ ಥರಾ ಕಾಣ್ತಾ ಇದ್ದಾನೆ" ಎಂದ. ಥತ್! ಇವನಿಗೆ ಬೇರೆ ಉದ್ಯೋಗ ಇದ್ದಿರಲಿಲ್ಲವೇ? ಏನು ಮಹಾ ಸುಂದರಾಂಗ ಅಂತ ಲವ್ ಮಾಡಿಬಿಟ್ಟ, ಇನ್ನೊಮ್ಮೆ ಅವನನ್ನ ಹೊರಳಿ ಕೂಡ ನೋಡಬಾರದೆನಿಸಿತು. 
ಬ್ಯಾಂಕಿನಲ್ಲಿ ಒಂದು ಅಕೌಂಟ ತೆಗೆಯೋಣ ಎನಿಸಿತು. ಬೇಕೇ ಆಗಿತ್ತು ಬಿಡಿ. ಮೊನ್ನೆ ನನ್ನ ಗೆಳತಿನೂ ಹೇಳಿದ್ದಳು, ಅವರ ಮನೆ ಪಕ್ಕದ ಬ್ಯಾಂಕಿನಲ್ಲಿ ಧಂಡಿಯಾಗಿ ಹುಡುಗರಿದ್ದಾರೆ ಎಂದು. ಅವಳನ್ನು ಕರೆದುಕೊಂಡು ಹೋದೆ. ಕಣ್ಣು ಪ್ರತಿ ಗಂಡು ಪ್ರಾಣಿಯನ್ನೂ ಪರೀಕ್ಷಾದೃಷ್ಟಿಯಿಂದ ನೋಡುತ್ತಿತ್ತು. ಅರೆರೆರೆ! ಅಲ್ಲಿ ಕೊನೆಗೆ ಕೂತವನು ಏನು ಚೆನ್ನಾಗಿದ್ದಾನೆ ದೇವ್ರೇ. ಪ್ರೀತಿ ಮಾಡಿದ್ರೆ ಇಂಥವನನ್ನ ಮಾಡಬೇಕು, ಇಲ್ಲಾಂದ್ರೆ ಏನು ಯಾವುದೋ ಹುಚ್ಚನನ್ನು ಮಾಡೋದು ಒಂದೇ ಬಾವಿ ಹಾರೋದು ಒಂದೇ. ಲವರ್ ಅಂದರೆ ಇವನು. "ಅಲ್ನೋಡೇ, ಆಫೀಸರ್ ಕಣೆ ಅವನು" ಗೆಳತಿ ಕೈತಿವಿದಾಗ ಮತ್ತಿಷ್ಟೂ ಉಬ್ಬಿ ಹೋದೆ. "A lover must be an officer" ಎಂದೆ ಮನಸ್ಸಿನಲ್ಲೇ. "ಅಕೌಂಟ್ ಓಪನ್ ಮಾಡ್ತೀಯಾ?" ಎಂದಳು. "ಯಾರು, ಅವನ ಹತ್ರಾನಾ?" ಎಂದು ನಾನೂ ನಕ್ಕೆ.
ಅಷ್ಟರಲ್ಲಿ ಯಾವನೋ ಒಬ್ಬ, ಕ್ಲಾರ್ಕೊ, ಪ್ಯೂನೋ ಇರಬಹುದು, ಅವನ್ನ ನೋಡಿದ್ರೆ ತಿಳಿಯುತ್ತೆ, ಲವ್ ಮಾಡಲಿಕ್ಕಲ್ಲಾ ಅವನು ಪಾಪ ಎಂದು, "ಸರ್ ನಿಮ್ಮಗ ಮನೆಗೆ ಹೋಗಬೇಕಂತೆ, ಅಳ್ತಾ ಇದಾನೆ ಸಾರ್" ಎಂದ. ಈ ಸಾಹೇಬ, ಬೇರೆಯವರಿಗೆ ಮಕ್ಕಳೇ ಇಲ್ಲ ತನ್ನದೊಂದೇ ಎನ್ನುವಂತೆ ದಿಕ್ಕೆಟ್ಟು ಓಡಿದ. ಅಲ್ಲಾ ಇವನಿಗೇನು ಬಂದಿತ್ತು ಅಂಥದ್ದು? ಇವನ ವಯಸ್ಸಿನವರಿನ್ನೂ ಕೆಲಸ ಮಾಡುತ್ತಿಲ್ಲ, ಇವ ಈಗಾಗಲೇ ಮದುವೆ ಮಾಡಿಕೊಂಡು, ಮಕ್ಕಳೂ ಕೂಡ ಆಗಿಬಿಡುವುದೇ? ಇಷ್ಟು ಅವಸರ ಏನಿತ್ತು? ಈಗಿನ್ನೂ ನನ್ನಂಥವರನ್ನು ಲವ್ ಮಾಡುವ ಕಾಲ. ಮಕ್ಕಳು ಮರಿ ಎಂದು ಮಂಡೆ ಬಿಸಿ ಮಾಡಿಕೊಳ್ಳುವ ಹುಚ್ಚರಿಗೆ ಏನೆನ್ನಬೇಕು ತಿಳಿಯಲಿಲ್ಲ. ಅಲ್ಲಿ ಅಕೌಂಟ್ ತೆಗೆದಾದರೂ ಏನು ಉಪಯೋಗ ಹೇಳಿ. ಹತ್ತು ರೂಪಾಯಿ ದಂಡ ಸುಮ್ಮನೇ. "ಬಾರೇ ಬ್ಯಾಂಕ್ ಚೆನ್ನಾಗಿಲ್ಲ, ಮುದುಕಾಗಿ ಬಿಟ್ಟಿದೆ ಅಕಾಲದಲ್ಲಿ" ಎಂದು ಗೆಳತಿಯನ್ನು ದೂಡುತ್ತ ಹೊರಬಂದುಬಿಟ್ಟೆ.
ಅಂದ ಹಾಗೆ ಈಗ ಪ್ರೇಮರೋಗದ ಮೇಲೆ ಚಿಕಿಚ್ಛೆ ಮಾಡುವ ಮಹಾವೈದ್ಯನೊಬ್ಬ ನಮ್ಮ ಮನೆಹತ್ತಿರದಲ್ಲೇ ಬಂದಿದ್ದಾನೆ. ಅವನ ಸ್ಪೆಶಾಲಿಟಿ ಅಂದರೆ ಅವನು ಮೊದಲು ಪ್ರೇಮರೋಗವನ್ನು ಬರಿಸುತ್ತಾನೆ. ನಂತರ ಎಂಥ ಮದ್ದು ಕೊಡುತ್ತಾನೋ ಸರಿಯಾಗಿ ಗೊತ್ತಿಲ್ಲ, ನನಗೆ ಬೇಕೂ ಇಲ್ಲ ಬಿಡಿ, ಮೊದಲ ಮದ್ದು ಸಾಕು ನನಗೆ ಎಂದು ಇವತ್ತೇ ಹೋಗಿ ಅವನಲ್ಲಿ ನಂಬರ ಹಚ್ಚಿ ಬಂದಿದ್ದೇನೆ. ತುಂಬಾ ರಷ್ ಅಲ್ಲಿ ಗೊತ್ತೇ?
ಆದರೂ ನೀವೂ ಯಾವುದಾದರೂ ನಿಮ್ಮ ಗುರುತಿನ ಒಳ್ಳೆಯ ಹುಡುಗನಿದ್ದರೆ ತಿಳಿಸುತ್ತೀರಾ? ನಿಮ್ಮ ಉಪಕಾರವನ್ನು ಈ ಪ್ರೇಮಯುಗದಲ್ಲಿ ಎಂದೂ ಮರೆಯುವುದಿಲ್ಲ. ನನ್ನ ಬೇಡಿಕೆಗಳು ನೆನಪಿವೆ ತಾನೇ? ಹಾಗೆಯೇ ಇದ್ದರೆ ತುಂಬಾ ಒಳ್ಳೆಯದು. ನಾನು ಪೂರ್ಣವಾಗಿ ಪ್ರೀತಿ ಮಾಡಲು ತುಂಬಾ ಸಹಾಯಕವಾಗುತ್ತದೆ. ನಿಮಗೊಂದು ಪ್ರೀತಿಯ ಕಾಣಿಕೆಯೂ ಸಿಗುತ್ತದೆ, ನೆನಪಿಡಿ "ಪ್ರೀತಿ ಮಾಡಲು ನನಗೊಂದು ಹುಡುಗ ಬೇಕು (ವಿವರಗಳಿಗಾಗಿ ಒಳಗಿನ ಜಾಹಿರಾತು ನೋಡಿ).
ನೀತಾ ರಾವ್


(ಸ್ನೇಹಿತರೇ, ಸುಮಾರು ಇಪ್ಪತೈದು ವರ್ಷಗಳ ಹಿಂದೆ ಈ ನನ್ನ ಬರಹ ತುಷಾರದಲ್ಲಿ ಪ್ರಕಟಗೊಂಡಿತ್ತು. ಮೊದಲಸಲ ರಾಜ್ಯಮಟ್ಟದ ಮಾಸಿಕಪತ್ರಿಕೆಯಲ್ಲಿ ಪ್ರಕಟವಾಗಿದ್ದರಿಂದ ನನಗೆ ತುಂಬಾ ಖುಶಿಯೂ ಆಗಿತ್ತು. ಮತ್ತೆ ಈ ಲೇಖನಕ್ಕೆ ಉತ್ತರ-ರೂಪದಲ್ಲಿ ಶ್ರೀ ಚಂದ್ರಶೇಖರ ವಸ್ತ್ರದ ಸರು ’ಉತ್ತರಕಾಂಡ’ ಎನ್ನುವ ಇನ್ನೊಂದು ಹಾಸ್ಯಲೇಖನವನ್ನೇ ಬರೆದು ಅದು ಮರುತಿಂಗಳು ತುಷಾರದಲ್ಲೇ ಪ್ರಕಟಗೊಂಡಿದ್ದು ಈ ’ಪ್ರೇಮಾಯಣ’ದ ಹೆಗ್ಗಳಿಕೆ.)

Saturday, 3 October 2015

ಪತ್ರ Vs ಫೋನ್ Vs ಸೆಲ್ ಫೋನ್


ಪತ್ರ  Vs ಫೋನ್ Vs ಸೆಲ್ ಫೋನ್



        ದಿನ ಕಳೆದಂತೆ ಸಂಪರ್ಕ ಸಾಧನೆಗಳಲ್ಲಿ ವಿಧವಿಧ ಬದಲಾವಣೆಗಳಾಗಿರುವುದನ್ನುನಾವೇ ಕಣ್ಣಾರೆ ನೋಡುತ್ತಿದ್ದೇವೆ.ಅದರ ಜೊತೆಜೊತೆಗೇ ನಮ್ಮ ಮಾನವೀಯ ಸಂಬಂಧಗಳ ರೂಪ ರೇಶೆಗಳೂ ಬದಲಾಗುತ್ತಿವೆ. ಜೀವನದ ಬಗ್ಗೆ, ಸಂಬಂಧಗಳ ಬಗ್ಗೆ ನಮ್ಮ ದೃಷ್ಟಿಕೋನಗಳೂ ವಿಪರೀತವಾಗಿ ಬದಲಾಗುತ್ತಿವೆ. ಹಳೆಯ ತಲೆಮಾರಿನ ಜನ ಪತ್ರಗಳಲ್ಲೇ ತಮ್ಮೆಲ್ಲ ಭಾವನೆಗಳನ್ನು ತೋಡಿಕೊಂಡು ತಣ್ಣಗಾಗಿ ಹೋದರು. ಇಂದಿನ ತಲೆಮಾರಿನವರು ಸೆಲ್ ಫೋನಗಳ ಕೈಗೆ ತಮ್ಮ ಸರ್ವಸ್ವವನ್ನೂ ಅರ್ಪಿಸಿ ಸಮಾಧಾನದಿಂದಿದ್ದಾರೆ. ಆದರೆ ಪತ್ರಗಳಿಂದ ಪ್ರಾರಂಭಿಸಿ, ಮುಂದುವರೆಸಲಾಗದೇ ಫೋನಗಳ ರಿಸಿವರಗಳಲ್ಲಿ ನಮ್ಮ ಧ್ವನಿಯನ್ನು ಕಳಿಸಿ, ಇದೀಗ ಮೊಬೈಲ್ ಫೋನಗಳ ಹಾಳೆಗಳ ಮೇಲೆ ಎಸ್ಸೆಮ್ಮೆಸ್ ಟೈಪ್ ಮಾಡುತ್ತಾ, ಹಳೆಯದನ್ನು ಮರೆಯಲಾಗದೇ ಹೊಸತನ್ನು ಬಿಡಲಾಗದೇ ತ್ರಿಶಂಕು ಸ್ಥಿತಿಯಲ್ಲಿರುವ ನಾವು ಅಂದರೆ ನಲವತ್ತರಿಂದ ಐವತ್ತು ವಯಸ್ಸಿನವರು ಈ ಸ್ಥಿತ್ಯಂತರ ಅವಧಿಯ ಬಲಿಪಶುಗಳು ಎಂದೆನಿಸುತ್ತದೆ, ಅಥವಾ ಎಲ್ಲ ಸಂಪರ್ಕ ಸಾಧನಗಳನ್ನು ಉಪಯೋಗಿಸಿದ, ಪ್ರತಿಸಲ ಸಂಕ್ರಮಣ ಕಾಲವನ್ನು ದಾಟಿ ಬಂದ ಧೀರರು ಹೌದೇನೋ!
ನಾವು ಚಿಕ್ಕವರಿದ್ದಾಗ ಅಮ್ಮ ತನ್ನ ಇಬ್ಬರು ತಂಗಿಯರಿಗೆ ಅಂದರೆ ನನ್ನ ಚಿಕ್ಕಮ್ಮಂದಿರಿಗೆ ಇನ್ ಲ್ಯಾಂಡ್ ಕವರಿನಲ್ಲಿ ಪತ್ರ ಬರೆಯುತ್ತಿದ್ದಳು. ಒಬ್ಬ ತಂಗಿ ಗೋವಾದ ಪಣಜಿಯಲ್ಲಿದ್ದರೆ ಇನ್ನೊಬ್ಬ ತಂಗಿ ಮಹಾರಾಷ್ಟ್ರದ ಠಾಣೆಯಲ್ಲಿದ್ದಳು. ಹಾಗೂ ನಾವು ಬೆಳಗಾವಿಯಲ್ಲಿ. ಪ್ರತಿ ಹದಿನೈದು ಇಪ್ಪತ್ತು ದಿನಗಳಿಗೊಮ್ಮೆ ಸರಿಯಾಗಿ ಅವರೆಲ್ಲ ಪತ್ರದ ಮೂಲಕ ಖಾಯಂ ಆಗಿ ಸಂಪರ್ಕ ಇರಿಸಿಕೊಂಡಿದ್ದರು. ಹೀಗೆ ಬರೆಯುವ ಪತ್ರದ ಕೆಲವು ಭಾಗಗಳು ಕರಾರುವಕ್ಕಾಗಿರುತ್ತಿದ್ದವು. ಮೊದಲಿಗೆ ಪ್ರೀತಿಯ ಇಲ್ಲವೇ ಪೂಜ್ಯ ಎಂಬ ಸಂಬೋಧನೆಯ ನಂತರ "ಶಿ.ಸಾ. ನಮಸ್ಕಾರಗಳು (ಶಿರ ಸಾಷ್ಠಾಂಗ) ಇಲ್ಲಿ ನಾವೆಲ್ಲ ಕ್ಷೇಮ. ತಮ್ಮ ಕ್ಷೇಮಕ್ಕೆ ಮೇಲಿಂದ ಮೇಲೆ ತಿಳಿಸುತ್ತಿರಬೇಕು" ಎಂಬ ಅವೇ ಶಬ್ದಗಳ ಅವೇ ವಾಕ್ಯಗಳಿರುತ್ತಿದ್ದವು. ಅವು ಶಿಷ್ಟಾಚಾರದ ಸಂಕೇತವಾಗಿರುತ್ತಿದ್ದವು.ಅದೇ ರೀತಿ ಮುಕ್ತಾಯ ಮಾಡುವಾಗ "ಮನೆಯಲ್ಲಿ ಎಲ್ಲ ಹಿರಿಯರಿಗೆ ನನ್ನ ನಮಸ್ಕಾರಗಳು, ಹಾಗೂ ಕಿರಿಯರಿಗೆ ಸಿಹಿ ಆಶೀರ್ವಾದಗಳು". ಎನ್ನುವ ಸಾಲುಗಳು ತಪ್ಪದೇ ಇರುತ್ತಿದ್ದವು. ಪತ್ರದ ಮಧ್ಯಭಾಗದಲ್ಲಿ ಮುಖ್ಯವಾದ ಹಾಗೂ ನಿಯಮಿತವಾದ ವಿಷಯಗಳಿರುತ್ತಿದ್ದವು. ಮಳೆ ಬೆಳೆಯ ಬಗ್ಗೆ, ಮಕ್ಕಳ ವಿದ್ಯಾಭ್ಯಾಸ, ಹಿರಿಯರ ಆರೋಗ್ಯ, ನೋಡಿದ ಯಾವುದಾದರೂ ಸಿನೆಮಾ, ಓದಿದ ಪುಸ್ತಕ ಹೀಗೆ ನಾನಾ ವಿಷಯಗಳ ಬಗ್ಗೆ ಲೇಖನಿ ಹರಿದಾಡುತ್ತಿತ್ತು.ಬಹುಷ: ಅದೇ ಆಕರ್ಷಣೆ ನಮಗೇ ಗೊತ್ತಿಲ್ಲದಂತೆ ನಮ್ಮ ಮನಸ್ಸಿನೊಳಗೂ ಗೂಡುಕಟ್ಟಿತ್ತು ಎನಿಸುತ್ತದೆ. ಆರು ಏಳನೇ ಕ್ಲಾಸಿನಲ್ಲಿದ್ದಾಗಿನಿಂದ ನಾನು, ನನ್ನಕ್ಕ ಕೂಡಾ ನಮ್ಮ ಬಂಧುಗಳಿಗೆ ಕಾಗದ ಬರೆಯಲಾರಂಭಿಸಿದೆವು. ಆಗ ಅಂದರೆ 80-90 ರ ದಶಕಗಳಲ್ಲಿ, ಸಾಹಿತ್ಯದ ಓದು ಬರವಣಿಗೆ ಅತ್ಯಂತ ಉಚ್ರಾಯ ಸ್ಥಿತಿಯಲ್ಲಿದ್ದ ವೈಭವದ ಕಾಲ. ಎಲ್ಲರೂ ಕತೆ ಕಾದಂಬರಿಗಳನ್ನೋದುವವರೇ. ತಾವೂ ಕೂಡಾ ಸಾಹಿತಿ, ಕವಿ, ಕತೆಗಾರ್ತಿ ಆಗಬೇಕೆಂದು ಕನಸು ಕಾಣುವವರೇ. ಕೊನೆಗೆ ಅದೆಲ್ಲ ಆಗದಿದ್ದರೆ ಹೋಗಲಿ, ಪತ್ರಗಳಲ್ಲಾದರೂ ಒಂದಿಷ್ಟು ಸುಂದರವಾದ ವಾಕ್ಯಗಳನ್ನು ರಚಿಸಿ ಬರೆದು, ಅಷ್ಟರ ಮಟ್ಟಿಗೆ ಸಾಹಿತ್ಯ ಕೃಷಿ ಮಾಡಿಬಿಡುವ ಉತ್ಸಾಹ ಅನೇಕರಲ್ಲಿತ್ತು. ಅಲ್ಲದೇ ಪತ್ರಗಳು ನಿಜವಾಗಿಯೂ ಅತ್ಯಂತ ಸೂಕ್ಷ್ಮ ಸಂವೇದನೆಗಳ ಅಭಿವ್ಯಕ್ತಿಯಾಗಿರುತ್ತಿದ್ದುದೂ ಸುಳ್ಳಲ್ಲ. ಅವ್ಯಕ್ತವಾಗಿದ್ದುಕೊಂಡೇ ವ್ಯಕ್ತವಾಗುವ ಅನೇಕ ಭಾವನೆಗಳು ಬರೆಯಲಾರದ ಶಬ್ದಗಳ ಮೂಲಕ ಹೊರಹೊಮ್ಮುತ್ತಿದ್ದವು. ಇಂಥವೇ ಅನೇಕ ಕಾರಣಗಳಿಂದ ಪತ್ರಗಲು ಅನೇಕರ ಅಚ್ಚುಮೆಚ್ಚಿನ ಸಂಗಾತಿಗಳಾಗಿದ್ದವು. ಪತ್ರ ಬರೆಯುವುದು ಒಂದು ಪ್ರೀತಿಯ ಹವ್ಯಾಸವಾಗಿರುತ್ತಿತ್ತು.ನಮ್ಮ ಕಥೆ ಕವನ ಹೀಗೆ ಯಾವುದೋ ಒಂದು ಪತ್ರಿಕೆಯಲ್ಲಿ ಪ್ರಕಟವಾದರಂತೂ ಅದೆಲ್ಲಿಂದ ಓದುಗರು ನಮ್ಮ ವಿಳಾಸವನ್ನು ಸಂಗ್ರಹಿಸುತ್ತಿದ್ದರೋ ದೇವರೇ ಬಲ್ಲ! ಅಂತೂ ಅತ್ಯಂತ ಹೊಗಳಿಕೆಯಿಂದ ಕೂಡಿದ ಪತ್ರಗಳು ಕೈಸೇರುತ್ತಿದ್ದವು. ಅದಕ್ಕೇನಾದರೂ ಉತ್ತರ ಬರೆದು ಕೃತಜ್ನತೆ ಸಲ್ಲಿಸಿದಿರೋ ಮತ್ತೊಂದು ಪತ್ರ. ಇಷ್ಟರಲ್ಲೇ ಒಂದು ಪತ್ರದಷ್ಟು ಹಳೆಯ ಪರಿಚಯವಿರುವುದರಿಂದ ಇನ್ನಷ್ಟು ಆತ್ಮೀಯತೆ. ಒಮ್ಮೊಮ್ಮೆ ಸ್ವಂತ ವಿಷಯಗಳ ತೋಡಿಕೊಳ್ಳುವಿಕೆ, ಹೀಗೆ ಎನೇನೋ ಅಂತೂ ಒಳ್ಳೆ ಮಜವಾದ ಕಾಲ.
 ಗುರುತು ಪರಿಚಯವಿಲ್ಲದ ಪತ್ರಮಿತ್ರರಿಂದಾಗಿ ಅನೇಕ ಹಾಸ್ಯ ಪ್ರಸಂಗಗಳೂ ಉಂಟಾಗುತ್ತಿದ್ದವು. ಹೇಗೂ ಒಬ್ಬರ ಮುಖವನ್ನೊಬ್ಬರು ನೋಡಿರದೇ ಇರುವುದರಿಂದ, ಮತ್ತೆ ಯಾವುದೇ ರಿಸ್ಕ್ ಇಲ್ಲದೇ ಇದ್ದುದರಿಂದ ಕೆಲವರು ಸುವಾಸಿತ ಗುಲಾಬಿ ಹಾಳೆಗಳ ಮೇಲೆ ಬರೆದದ್ದೂ ಉಂಟು. ಅವನ್ನೆಲ್ಲ ನೋಡಿ, ಓದಿ ನಕ್ಕು ಮರೆತದ್ದೂ ಉಂಟು.
    ಆದರೆ ಪರಿಚಯವಿದ್ದ ಆತ್ಮೀಯರೊಡನೆ ಉಂಟಾಗುವ ಪತ್ರ ಮೈತ್ರಿ ನೋವು ನಲಿವು ಎರಡನ್ನೂ ತರುತ್ತವೆ. ವರ್ಷಾನುಗಟ್ಟಲೇ ಪತ್ರಗಳನ್ನು ಬರೆಯತ್ತಾ ಆತ್ಮೀಯತೆ, ಸ್ನೇಹವನ್ನು ಮುಂದುವರೆಸಿದವರು ಆಗಿನ‌ ಕಾಲದಲ್ಲಿ ಅನೇಕರಿರುತ್ತಿದ್ದರು. ಸ್ನೇಹ ಒಂದು ಹೆಣ್ಣು ಮತ್ತು ಒಂದು ಗಂಡಿನ ಮಧ್ಯದ್ದಾದರಂತೂ ಈ ತುಡಿತ ತೀವ್ರತೆ ಇನ್ನೂ ಹೆಚ್ಚಾಗಿರುತ್ತಿತ್ತು. ಪತ್ರಗಳು ಇಬ್ಬರ ಮಧ್ಯೆಯೂ ರಾಕೆಟಿನಂತೆ ಹಾರಾಟ ನಡೆಸಿರುತ್ತಿದ್ದವು. ಸ್ನೇಹಿತನಿಂದ ಪತ್ರ ಬಂತೆಂದರೆ ಎರೆಡೆರೆಡು ಬಾರಿ, ಒಮ್ಮೊಮ್ಮೆ ಮೂರ್ನಾಲ್ಕು ಬಾರಿ ಓದುವುದು, ತಕ್ಷಣ ಉತ್ತರ ಬರೆದು ಪೋಸ್ಟ್ ಡಬ್ಬಿಯಲ್ಲಿ ಹಾಕಿ ಬರುವುದು. ಎಲ್ಲಿ ತಡವಾಗುತ್ತದೋ ಎಂದು ಒಮ್ಮೊಮ್ಮೆ ಹೆಡ್ ಪೋಸ್ಟಿಗೇ ಹೋಗಿ ಪತ್ರವನ್ನು ಹಾಕಿ ಬರುವುದು, ಮತ್ತು ಉತ್ತರ ಬರುವ ತನಕ ಚಡಪಡಿಸುವುದು, ಪೋಸ್ಟ್ ಮನ್ ಬರುವ ಟೈಮಿಗೆ ಸರಿಯಾಗಿ ಹೋಗಿ ಗೇಟಿಗೇ ನಿಲ್ಲುವುದು, ಇವೆಲ್ಲ ನಿತ್ಯಕಾಯಕಗಳಾಗಿ ಬಿಟ್ಟಿರುತ್ತಿದ್ದವು.ಪತ್ರದ ವಿಷಯಗಳೂ ವೈವಿಧ್ಯಮಯವಾಗಿರುತ್ತಿದ್ದವು. ಅಲ್ಲಿ ವಯ್ಯ‌ಕ್ತಿಕ ವಿಷಯಗಳಲ್ಲದೇ ಪ್ರಸಕ್ತ ರಾಜಕೀಯ ವಿದ್ಯಮಾನಗಳು, ಹವಾಮಾನ, ಓದಿದ ಕಥೆ ಕಾದಂಬರಿಗಳ ಚರ್ಚೆ ಹೀಗೆ ನಾನಾ ವಿಷಯಗಳು ಹಾದುಹೋಗುತ್ತಿದ್ದವು. ಆ ದೃಷ್ಟಿಯಿಂದಲೇ ಅನೇಕರು ತಮ್ಮ  ಮತ್ತು ತಮಗೆ ಬಂದ ಪತ್ರಗಳನ್ನೇ ಜತನದಿಂದಿಟ್ಟುಕೊಂಡು ನಂತರದ ದಿನಗಳಲ್ಲಿ ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ.
   ಕ್ರಮೇಣವಾಗಿ ತಡವಾಗಿಯಾದರೂ ಎಲ್ಲರ ಮನೆಗಳಲ್ಲಿ ಫೋನುಗಳು ರಿಂಗಣಿಸತೊಡಗಿದ್ದು 90 ರ ದಶಕದ ಮಧ್ಯಭಾಗದಲ್ಲಿ. ಸ್ಥಿರಫೋನುಗಳು ಸರ್ವವ್ಯಾಪಿಯಾದ ನಂತರ ಈ ಪತ್ರ ಬರೆಯುವ ತಾಪತ್ರಯ ಯಾರಿಗೂ ಬೇಡವಾಗಿರಬಹುದು. ಮೊದಲು ಪೋಸ್ಟಾಫಿಸಿಗೆ ಹೋಗಿ ಇನ್ ಲ್ಯಾಂಡ್, ಇಲ್ಲವೇ ಕವರ್ ಗಳನ್ನು ತಂದಿಟ್ಟುಕೊಳ್ಳುವುದು, ವಿಚಾರ ಮಾಡಿ ಬರೆಯುವುದು, ಅವುಗಳನ್ನು ಸರಿಯಾಗಿ ಮಡಚಿ ಅಂಟಿಸಿ ಹತ್ತಿರದಲ್ಲಿರುವ ಪೋಸ್ಟ್ ಡಬ್ಬಕ್ಕೆ ಹಾಕಿ ಬರುವುದು, ಈ ಯಾವ ರಗಳೆಯೂ ಇಲ್ಲದೇ ಕೇವಲ ಒಂದಿಷ್ಟು ನಂಬರಗಳನ್ನು ತಿರುವಿದರೆ ಅಥವಾ ಒತ್ತಿದರೆ ಸಾಕು, ಆ ಕಡೆಯಿಂದ ನಮಗೆ ಬೇಕಾದವರ ಕಂಠದಿಂದ 'ಹಲೋ' ಉಲಿತ. ನೇರ ಸಂಪರ್ಕ. ಎರಡೂ ಕಡೆಗಳಿಂದ ಮಾತು ಕತೆ. ಈ ಎಲ್ಲ ಅನುಕೂಲತೆಗಳಿಂದಾಗಿ ಕ್ರಮೇಣ ಪತ್ರ ಬರೆಯುವ ಅಭ್ಯಾಸ, ಹವ್ಯಾಸ ಎರಡೂ ಬಿಟ್ಟು ಹೋಯಿತು. ಪತ್ರಗಳಲ್ಲಿ ನೀರಿನಂತೆ ಸುಲಲಿತವಾಗಿ ಹರಿಯುತ್ತಿದ್ದ ಭಾವನೆಗಳಿಗೆ ಕಡಿವಾಣ ಖಂಡಿತ ಬಿತ್ತು. ಏಕೆಂದರೆ ಪತ್ರದಲ್ಲಿ ಬರೆದು ನಿಮ್ಮ ಭಾವನೆಗಳನ್ನು ತೋಡಿಕೊಂಡಂತೆ ಫೋನಿನಲ್ಲಿ ಎಲ್ಲವನ್ನೂ ಹೇಳಲಾಗುವುದಿಲ್ಲ. ಆದರೂ ಕ್ರಮೇಣ ವಯ್ಯಕ್ತಿಕ ಪತ್ರಗಳು ಇಲ್ಲವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಕಾಲ ಬದಲಾಯಿತು. 
ನಿಜ, ಆದರೆ ಅಂಚೆಅಣ್ಣನ ಕೆಲಸವೇನೂ ಕಡಿಮೆಯಾಗಿಲ್ಲ. ಆಗಿನ ವಯ್ಯಕ್ತಿಕ ಪತ್ರಗಳ ಬದಲಾಗಿ ಈಗ ವ್ಯವಹಾರಿಕ, ವ್ಯಾಪಾರಿ ಪತ್ರಗಳು ಬಂದಿವೆ. ದಿನಾಲೂ ನಿಮ್ಮ ಅಂಚೆಪೆಟ್ಟಿಗೆಯಲ್ಲಿ ಜಿವವಿಮಾ ಕಂತು ತುಂಬಲು ನೆನಪಿನೋಲೆ, ನಿಮ್ಮ ಬ್ಯಾಂಕಿನ, ಮ್ಯೂಚವಲ್ ಫಂಡಿನ, ಡಿಮ್ಯಾಟ್ ಅಕೌಂಟಿನ ಸ್ಟೇಟಮೆಂಟುಗಳು ಹೀಗೆ ಒಂದಿಲ್ಲ ಒಂದು ಅಂಚೆ ಕಾದು ಕುಳಿತಿರುತ್ತದೆ. ಹೊರತು ಯಾರಿಂದಲೂ ಪತ್ರ ಬಂದಿರುವುದಿಲ್ಲ. ಹಾಗಾಗಿ ಮೊದಲಿನ ಕುತೂಹಲ, ಉತ್ಸಾಹ ಈಗೇನಿಲ್ಲ. ಹಾಗೆ ಅಂಚೆಗಾಗಿ ಕಾಯುವ ನಮ್ಮ ವಯಸ್ಸೂ ಕಳೆದುಹೊಗಿರುವುದರಿಂದ ಬೇಜಾರೂ ಇಲ್ಲ. ಯೌವನದ ಸುಂದರ ದಿನಗಳಲ್ಲಿ ಈ ಪತ್ರಗಳ ಅಪರಿಮಿತ ಲಾಭವನ್ನು ನನ್ನಂಥ ಅನೇಕರು ಬೊಗಸೆತುಂಬ ಪಡೆದಿದ್ದೇವೆ, ಖುಶಿ ಪಟ್ಟಿದ್ದೇವೆ. ಪತ್ರಗಳಿಗಾಗಿ ಕಾಯುವ ಮಧುರ ಯಾತನೆಯನ್ನು ಅನುಭವಿಸಿದ್ದೇವೆ. ಅದು ಬಂದೊಡನೆ ಗಡಿಬಿಡಿಯಲ್ಲಿ ಒಡೆದು ಓದಿ ಅತ್ತಿದ್ದೇವೆ, ನಕ್ಕಿದ್ದೇವೆ.
ಇದೀಗ ಕಾಗದದ ತ್ಯಾಜ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ನಮ್ಮೆಲ್ಲ ವ್ಯಾಪಾರೀ/ವ್ಯವಹಾರೀ ವಿಷಯಗಳನ್ನು e-mail ಮತ್ತು smsಮೂಲಕ ತಲುಪಿಸುವ, ತಿಳಿಸುವ ವ್ಯವಸ್ಥೆ ಪ್ರಾರಂಭವಾಗಿದೆ. ನಿಜ, e-mail ಗಳು ವಯ್ಯಕ್ತಿಕ ಪತ್ರಗಳ ಜಾಗವನ್ನೂ ತುಂಬಬಲ್ಲವು. ಆದರೆ ಪತ್ರಗಳ ಖುಶಿಯನ್ನು ಕೊಡಲಾರವು. ಪತ್ರಗಳೇ ಇಲ್ಲದ್ದರಿಂದ ಪತ್ರಗಳ ಬಗ್ಗೆ ಮೊದಲು ಬರುತ್ತಿದ್ದ "ನಾ ಮೆಚ್ಚಿದ ಹುಡುಗನಿಗೆ ಕಾಣಿಕೆ ತಂದಿರುವೆ, ಈ ಪತ್ರದಿ ಬರೆದಾ ಪದಗಳನು ಚುಂಬಿಸಿ ಕಳೆಸಿರುವೆ" ಎನ್ನುವ ಸುಂದರವಾದ ಮಧುರ ಹಾಡುಗಳೂ ಇನ್ನಿಲ್ಲವಾಗಿವೆ. ಸಿನೇಮಾಗಳಲ್ಲಿ ಪತ್ರಗಳ ಪ್ರೇಮಾಲಾಪನೆ ಮುಗಿದು ಇದೀಗ ಫೋನಾಯಣ ಪ್ರಾರಂಭವಾಗಿದೆ. ನಮ್ಮ ಮಕ್ಕಳು ತಮ್ಮ ಸ್ನೇಹಿತರೊಂದಿಗೆ smsಭಾಷೆಯಲ್ಲಿ ಸಂವಹನ ಶುರುವಿಟ್ಟುಕೊಂಡ ಈ ಸಂಕ್ರಮಣ ಕಾಲದಲ್ಲಿ ಕೂಡಾ ಪತ್ರಗಳ ಗತವೈಭವದ ನೆನಪಿನಲ್ಲಿ ನಮ್ಮ ಕಣ್ಣೂಗಳು ಒದ್ದೆಯಾಗುವಷ್ಟು ಭಾವುಕತೆಯನ್ನು ಇನ್ನೂ ಉಳಿಸಿಕೊಂಡಿರುವುದೇ ನಮ್ಮ ಹೃದಯಗಳ ಹೆಗ್ಗಳಿಕೆ!
ಶ್ರೀಮತಿ. ನೀತಾ. ರಾವ್.

*******************

Friday, 2 October 2015

ಹಳೇ ಸಿನಮಾ ಹಳೇ ಥೇಟರ್


ಹಳೇ ಸಿನಮಾ ಹಳೇ ಥೇಟರ್


          ಇಂದಿನ ದಿನಗಳಲ್ಲಿ ಒಂದು ಭಾನುವಾರ ಸಿನೆಮಾ ನೋಡಬೇಕೆಂದು ಟಿ.ವ್ಹಿ. ಮುಂದೆ ಕುಳಿತು, ನಡುನಡುವೆ ಜಾಹಿರಾತುಗಳಿಗಾಗಿ ಕೊಡುವ ಬ್ರೇಕ್ ಗಳಲ್ಲಿ ಮನೆಯವರಿಗೆ ಟೀ, ಕಾಫಿ ಸಮಾರಾಧನೆ ಮಾಡಿ, ಮತ್ತೇನಾದರೂ ಸಣ್ಣಪುಟ್ಟ ಕೆಲಸ ಮಾಡುತ್ತಲೇ ನಡುನಡುವೆ ಬಂದು ಕುಳಿತುಕೊಂಡು ನಾಲ್ಕು ತಾಸಿನ ದೀರ್ಘವಾದ ಸಿನೆಮಾ+ಜಾಹಿರಾತುಗಳನ್ನು ನೋಡುವಾಗ ಮಧ್ಯೆ ಮಧ್ಯೆ ಮಕ್ಕಳು, ಮನೆಯವರು ರಿಮೋಟ್ ಕಸಿದುಕೊಂಡು 'ಕ್ರಿಕೆಟ್ ಸ್ಕೋರ್ ಎಷ್ಟಾಯ್ತು ನೋಡಿ ಕೊಟ್ಟುಬಿಡ್ತೀನಿ' ಅಂತ ತಲೆ ಚಿಟ್ಟು ಹಿಡಿಸುವುದು, ಮಧ್ಯೆ ಯಾರೋ ಮನೆಬಾಗಿಲಿಗೇ ಬಂದು ಹಪ್ಪಳ-ಸಂಡಿಗೆ ಬೇಕಾ ಎನ್ನುವುದು, ನಾನು ಅಸಹನೆಯಿಂದಲೇ ಬೇಡ ಬೇಡ ಎಂದು ಬೇಗ ಮಾತು ಮುಗಿಸಲು ಗಡಿಬಿಡಿ ಮಾಡಿದರೂ ಅವನು ವಾರ ಚುಡಿದಾರ ಸೆಟ್ ಕೂಡಾ ತಂದಿದಿನಿ ನೋಡ್ತೀರಾ ಎಂದು ಗೋಗರೆಯುವುದು - ಎಲ್ಲದರ ಮಧ್ಯೆ ಹಾಳು ಸಿನೆಮಾನೂ ಬೇಡ, ಟಿ.ವ್ಹಿ. ಸಹವಾಸಾನೂ ಬೇಡ ಎಂದು ಎದ್ದು ಹೋಗಿ ಬೆಡ್ ರೂಮಿನ ಬಾಗಿಲು ಹಾಕಿ ಮಲಗಿಕೊಂಡು ನಿದ್ರೆಯಿಲ್ಲದೇ ಒದ್ದಾಡುವಾಗ ನಮ್ಮ ಹಳೆಯ ಕಾಲೇಜು ದಿನಗಳ ಸಿನೆಮಾ ನೋಡುವ ಸಂಭ್ರಮದ ಗತವೈಭವ ಕಣ್ಣಿಗೆ ಕಟ್ಟುತ್ತದೆ.
       ಅವು ಎಂಬತ್ತರ ದಶಕದ ಆರಂಭದ ದಿನಗಳು, ನಾವೂ ಆಗಷ್ಟೇ ಶಾಲೆ ಮುಗಿಸಿ ಪಿ.ಯು.ಸಿ.ಗೆ ಕಾಲೇಜು ಕಟ್ಟೆ ಏರಿದವರು. ಬೆಳಗಾವಿಯ ತುಂಬೆಲ್ಲಾ ಎಲ್ಲಿ ನೋಡಿದರಲ್ಲಿ ಟಾಕೀಜುಗಳು ತುಂಬಿದ್ದವು. ಮನೆಯ ಹತ್ತಿರವೇ ಎಂಟು-ಹತ್ತು ಥೇಟರುಗಳು. ಒಂದಂತೂ ಮನೆಯ ಹಿತ್ತಲಿನಲ್ಲೇ, ರೇಡಿಯೊ ಥೇಟರ ಅಂತ. ಮನೆಯಿಂದ ನಾಲ್ಕು ಹೆಜ್ಜೆ ನಡೆದರೆ ರಿಟ್ಝ್ ಟಾಕೀಜು. ಮತ್ತೆ ಹುರುಪು, ಕಸುವು ಎರಡೂ ಇದ್ದ ಕಾಲದಲ್ಲಿ ಕಪೀಲ್, ಕೃಷ್ಣಾ, ಬಾಳಕೃಷ್ಣಾ, ಗ್ಲೋಬ್, ರೂಪಾಲಿ, ಅಝಾದ್, ಅರುಣ, ಹೀಗೆ ಯಾವ ಥೇಟರಗಳೂ ದೂರವಲ್ಲ ನಮಗೆ. ಒಂದು ಸಿನೆಮಾ ಬರುವುದಿದೆಯೆಂದರೆ ಅದರ ಕಥೆ ಏನಿರಬಹುದು, ನಾಯಕ-ನಾಯಕಿ ಯಾರು ಯಾರು, ನಿರ್ದೇಶಕ ಯಾರು, ಹಾಡುಗಳನ್ನು ಯಾರು ಯಾರು ಹಾಡಿದ್ದಾರೆ, ಅವು  ಚೆನ್ನಾಗಿವೆಯೇ, ಎಂದೆಲ್ಲಾ ಚರ್ಚೆಯಾಗುತ್ತಿತ್ತು, ಗೆಳತಿಯರ ಮಧ್ಯೆ, ಮುಖ್ಯವಾಗಿ ನಾವಿಬ್ಬರು ಅಕ್ಕ-ತಂಗಿಯರ ಮಧ್ಯೆ. ಆನಂತರ, ಹಾಗಾದರೆ ಸಿನೆಮಾಕ್ಕೆ ಹೋಗುವುದೋ ಬೇಡವೋ ಎಂದು ಡಿಸೈಡ್ ಮಾಡಿ ಕಾಲೇಜಿನಿಂದ ಬಂದವರೇ ಗಬಗಬನೇ ಊಟ ಮಾಡಿ ಅಮ್ಮನ ಮುಂದೆ ಹಾಜರಾಗಿ ಬೇಡಿಕೆಯಿಡುವುದು. ಅವಳು ಮೊದಲು "ಊಹೂಂ, ಊಹೂಂ, ಸಿನೆಮಾ ನೋಡಿ ಇನ್ನೂ ಒಂದು ತಿಂಗಳೂ ಕಳೆದಿಲ್ಲ. ಈಗ ಇಷ್ಟು ಬೇಗ ಇನ್ನೊಂದಕ್ಕೆ ಕಳಿಸುವುದಿಲ್ಲ" ಎನ್ನುವಳು. "ಅಮ್ಮಾ ಪ್ಲೀಜ್" ಅಂತ ಗೋಗರೆತದ ನಂತರ "ಹಾಗಾದ್ರೆ ಬಾಲ್ಕನಿಗೆ ಹೋಗಬೇಡ್ರಿ, ಸ್ಟಾಲಿಗೆ ಹೋಗಿ ಸಾಕು" ಅಂತ ಒಂದು ಕಂಡಿಷನ್ ಹಾಕುವಳು. ಅಂತೂ ಒಪ್ಪಿಗೆ ಸಿಕ್ಕಿತಲ್ಲಾ ಅಷ್ಟೇ ಸಾಕು ಅಂತ ನಾವು ಓಡುವುದು.
        ಅಲ್ಲಿ ನೋಡಿದರೆ ಗದ್ದಲವೋ ಗದ್ದಲ. ಉದ್ದಾನುದ್ದ ಕ್ಯೂಗಳು- ಹುಡುಗರ ಕ್ಯೂ ಬೇರೆ, ಹುಡುಗಿಯರದೇ ಬೇರೆ. ಅಷ್ಟರ ಮೇಲೆ "ಒಬ್ಬರಿಗೆ ಎರಡೇ ಟಿಕೆಟ್ ಕೊಡ್ತಾರಂತೆ ಕಣೆ" ಅಂತ ಮುಂದೆ ನಿಂತವರಾರೋ ಹೆದರಿಸುವುದು. ಹಾಗಾಗಿ ಎನಾದರಾಗಲಿ ಎಂದು ಎಲ್ಲರೂ ಕ್ಯೂನಲ್ಲಿ ನಿಂತೇ ಬಿಡುವುದು. ಉಡಾಫೆ ಮಾಡ್ಕೊಂಡು ಲೇಟಾಗಿ ಬಂದ ಹುಡುಗರು ನಮ್ಮ ಹತ್ತಿರ ಬಂದು ಬಹಳ ಸಭ್ಯರಂತೆ ಸುಳ್ಳು ಸುಳ್ಳೇ ನಟಿಸುತ್ತಾ, "ಸಿಸ್ಟರ್ ಸಿಸ್ಟರ್, ನಮಗೆರಡು ಟಿಕೆಟ್ ತೆಗಿಸಿಕೊಡಿ ಸಿಸ್ಟರ್, ಹುಡುಗರ ಲೈನಲ್ಲಿ ಭಾಳ ರಷ್ ಇದೆ" ಎಂದು ದೈನಾಸಿ ಪಡುವುದು ಕೇಳಿ ಮೇಲೆ ಮೇಲೆ "ಹೂಂ ಹೂಂ" ಎಂದು ದುಡ್ಡಿಸಿದುಕೊಂಡ್ರೂ ಅವರು ಸ್ವಲ್ಪ ಆಚೆ ಹೋಗುತ್ತಲೂ ಕಡೆ "ಸಿಸ್ಟರ್ ಮೈ ಫುಟ್" ಅಂತ ಹುಡುಗರನ್ನು ಬೈಯ್ಯುವುದು, ಆದ್ರೂ "ಇರ್ಲಿ ಪಾಪ, ಅವೂ ನೋಡ್ಕೊಳ್ಲಿ" ಅಂತ ಒಂದೆರಡು ಟಿಕೆಟು ತೆಗಿಸಿಕೊಟ್ಟು ಉಪಕಾರ ಮಾಡಿ, ಅವರ ಥ್ಯಾಂಕ್ಸಿಗೆ ಒಂದು ಹೂನಗೆ ನಕ್ಕು ಸೀಟು ಹಿಡಿಯಲು ಧಾವಿಸುವುದು.
       ಗುದ್ದಾಡಿ ಸೀಟು ಸಿಕ್ಕು ಗೆಳತಿಯರು, ಅಕ್ಕ, ಒಮ್ಮೊಮ್ಮೆ ಅವಳ ಗೆಳತಿಯರು ಹೀಗೆ ಉದ್ದಾನುದ್ದ ಸಾಲು ನಾವೇ ಕೂತ್ಕೊಂಡು, ಸಣ್ಣ ಪುಟ್ಟ ಡೈಲಾಗಿಗೆಲ್ಲಾ ಖೊಳ್ ಅಂತ ನಕ್ಕು ಸೊಕ್ಕು ತೋರಿಸಿ, ಒಮ್ಮೊಮ್ಮೆ ಬೇರೆ, ವಯಸ್ಸಾದ ಸಿರಿಯಸ್ ಜನರಿಂದ ಬೈಸಿಕೊಂಡಿದ್ದೂ ಇದೆ. ನನಗಿನ್ನೂ ನೆನಪಿದೆ, ವಿಷ್ಣುವರ್ಧನ, ಭವ್ಯಾ ಅಭಿನಯದ 'ನೀ ಬರೆದ ಕಾದಂಬರಿ' ಚಿತ್ರದಲ್ಲಿ ಸಿ.ಆರ್. ಸಿಂಹ ಅವರ ಡೈಲಾಗ್ ಕೇಳಿ ಇಡೀ ಒಂದು ಸಾಲು ನಾವೇ ನಾವಾಗಿ ಕುಳಿತಿದ್ದ ಗೆಳತಿಯರ ಬಳಗ ನಕ್ಕಿದ್ದೇ ನಕ್ಕಿದ್ದು.
      ಹಾಗಂತ ಎಲ್ಲಾ ಸಿನೆಮಾಗಳಿಗೆ ಥರ ರಶ್ ಇರ್ತಿತ್ತು ಅಂತಲ್ಲ. ಒಂದೊಂದು ಸಿನೆಮಾಕ್ಕೆ ಹೋಗಿ ಅವು ಖಾಲಿ ಹೊಡೆಯುವುದನ್ನು ನೋಡಿ, ಇನ್ನೇನು ಇಷ್ಟು ದೂರ ಬಿಸಿಲಲ್ಲಿ ಹ್ಯಾಗೂ ನಡಕೊಂಡು ಬಂದಿದ್ದೀವಲ್ಲ ಸಿನಮಾ ನೋಡಿಯೇ ಹೋದರಾಯ್ತು ಅಂತ ಕೂತ್ಕೊಂಡು ಅಷ್ಟು ಕಷ್ಟ ಪಟ್ಟಿದಕ್ಕೆ ಮತ್ತೆ ಹಂಗೇ ಮಜಾ ಮಾಡಿ ನಕ್ಕು ನಕ್ಕು ಹೊರಬಂದ ಉದಾಹರಣೆಗಳೂ ಇವೆ.
       ಮುಂದೆ ೮೬-೮೭ರಲ್ಲಿ ನಮ್ಮಣ್ಣ (ದೊಡ್ಡಪ್ಪನ ಮಗ) ಬೆಳಗಾವಿಗೆ ಬಂದಮೇಲಂತೂ ನಾವು ಮನೆಮಂದಿಯೆಲ್ಲಾ ಕೂಡಿ ರಾತ್ರಿ ಒಂಬತ್ತರ ಆಟಕ್ಕೆ ಸಿನೆಮಾಕ್ಕೆ ಹೋಗುವುದು ಬಹಳ ಕಾಮನ್ ಆಯಿತು. ಅವನು ತನ್ನ ಕೆಲಸ ಮುಗಿಸಿ ಎಂಟು ಗಂಟೆಗೆ ಬಂದು "ಕಾಕು ಇವತ್ತು ನಯಾ ದೌರ ಸಿನೆಮಾಕ್ಕೆ ಹೋಗುವುದೇ, ಬೇಗ ಅಡಿಗೆ ಮಾಡು" ಎನ್ನುವುದು, ನಮ್ಮಮ್ಮ ಗಡಬಡಿಸಿ ಮುಂದೆ ಹದಿನೈದು ಇಪ್ಪತ್ತು ನಿಮಿಷದೊಳಗೆ ಅನ್ನ ಝುಣಕ ರೆಡಿ ಮಾಡುವುದು, ಬಿಸಿ ಬಿಸಿ ಅನ್ನ ಉಂಡು ಓಡುವ ನಡಿಗೆಯಲ್ಲಿ ಹೋಗಿ ಟಿಕೆಟ್ ತೆಗೆದುಕೊಂಡು ಒಳಸೇರಿ ಕತ್ತಲೆಯಲ್ಲಿ, ಲೈಟ್ ಬಿಡುವವನ ಹಿಂದೆ ಹಿಂದೆ ಹೊರಟು ಯಾರದೋ ಕಾಲು ತುಳಿದು ಸಾರಿ ಹೇಳಿ, ಆತ ತೋರಿಸಿದ ಸೀಟ್ ಮೇಲೆ ಉಫ್ ಅಂತ ಕುಳಿತು, ಪಿಕ್ಚರ್ ಸುರುವಾಗಿಬಿಟ್ಟಿದೆಯೇನೋ ಅಂತ ಹೆದರಿ ಪರದೆ ಮೇಲೆ ಇನ್ನೂ ಜಾಹಿರಾತು ಬರುತ್ತಿರುವುದನ್ನು ನೋಡಿ ನಿಟ್ಟುಸಿರು ಬಿಟ್ಟು ಖುಶಿ ಪಡುವುದು, .... ಹೀಗೆ ಎಷ್ಟು ಸಿನೆಮಾಗಳನ್ನು ನೋಡಿದೆವೋ ಲೆಕ್ಕವಿಲ್ಲ.
       ಹಳೇ ಕಪ್ಪು ಬಿಳುಪಿನ ಚಿತ್ರಗಳು ಮತ್ತೆ ಮತ್ತೆ ಬರುವ ಕಾಲವದು. ಹಾಗಾಗೇ ಅನೇಕ ಹಳೆಯ ಹಿಂದಿ ಚಿತ್ರಗಳನ್ನು ಟಾಕೀಜಿನಲ್ಲೇ ನೋಡುವ ಭಾಗ್ಯ ನಮ್ಮದಾಯಿತು. ಬೈಜೂ ಬಾವರಾ, ಅನಾರಕಲಿ, ಹರಿಯಾಲಿ ಔರ್ ರಾಸ್ತಾ, ದೋ ಬದನ್, ಕಶ್ಮೀರ್ ಕಿ ಕಲಿ, ಲೀಡರ್, ನಯಾದೌರ್, ಪ್ಯಾಸಾ, ಸಾಹಿಬ್ ಬೀಬಿ ಔರ್ ಗುಲಾಮ, ಸಂಗಮ, ಇಂಥ ನೂರಾರು ಹಳೆಯ ಚಿತ್ರಗಳನ್ನು ಈಗ ಬಣ್ಣಗೆಟ್ಟು ಹಳೆಯದಾದ, ಅಥವಾ ಅಳಿದು ಇನ್ನಾವುದೋ ಕಟ್ಟಡಕ್ಕೆ ಆಧಾರವಾದ ಹಳೆಯ ಟಾಕೀಜುಗಳಲ್ಲೇ ನಾವೆಲ್ಲಾ ನೋಡಿದ್ದೇವೆ. ಅಷ್ಟೇ ಅಲ್ಲ, ಆಯಾ ಕಾಲಕ್ಕೆ ಬರುತ್ತಿದ್ದ ಹೊಸ ಚಿತ್ರಗಳನ್ನೂ ಇದೇ ಥರ ನೋಡುತ್ತಿದ್ದೆವು. ಅಭಿಮಾನ, ಮಿಲಿ, ತ್ರಿಶೂಲ, ದೋಸ್ತಾನ, ಮುಂತಾದ ಚಿತ್ರಗಳನ್ನು ನಿಜಕ್ಕೂ ಟಾಕೀಜಿನಲ್ಲೇ ನೋಡಬೇಕು. ಮುಕದ್ದರ ಕಾ ಸಿಕಂದರ, ಶಂಕರ ಗುರುಅನಂತರದ ದಿನಗಳಲ್ಲಿ ಬಂದ ತೆಲಗಿನ ಸ್ವಾತಿಮುತ್ಯಂ ಚಿತ್ರಗಳನ್ನಂತೂ ನಾವು ಟಾಕೀಜಿನಲ್ಲಿ ಮೂರು ಮೂರು ಸಲ ನೋಡಿದ್ದೆವು ಎಂದು ಹೇಳಿ ಮಕ್ಕಳಿಂದ ಮಂಗಳಾರತಿ ಮಾಡಿಸಿಕೊಂಡೂ ಆಗಿದೆ.
      ಈಗ ಬೆಳಗಾವಿಯ ಹೆಚ್ಚಿನ ಟಾಕೀಜುಗಳು ನೆಲಸಮವಾಗಿ ಸ್ಥಳದಲ್ಲಿ ಕಾಂಪ್ಲೆಕ್ಸಗಳು ತಲೆ ಎತ್ತಿವೆಯಾವ ರೇಡಿಯೋ ಥೇಟರಿನಲ್ಲಿ (ನಮ್ಮ ಮನೆಯ ಹಿತ್ತಲಿನಲ್ಲೇ ಇದ್ದ ಥೇಟರು) ನಾವು ಜಯಪ್ರದಾ, ರಿಷಿಕಪೂರನ 'ಸರಗಮ್' ಚಿತ್ರವನ್ನು ನೋಡಿ, ನಂತರ ಆರು ತಿಂಗಳ ಕಾಲ ಹಾಡುಗಳನ್ನು ಕೇಳಿ ಖುಶಿಪಟ್ಟಿದ್ದೆವೋ, ಅನಂತನಾಗ, ಆರತಿ, ರೂಪಾ ಅಭಿನಯದ 'ಮುಳ್ಳೀನ ಗುಲಾಬಿ' ಚಿತ್ರವನ್ನು ನೋಡಿ ಹುಚ್ಚುಹಿಡಿದವರಂತೆ ತಿಂಗಳುಗಟ್ಟಲೇ ಹಿತ್ತಲಲ್ಲಿ ಕುಳಿತು ಹಾಡು, ಡೈಲಾಗುಗಳನ್ನು ಕೇಳಿ ಬಾಯಿಪಾಠ ಮಾಡಿ ಆನಂದಿಸಿದ್ದೆವೋ, ರೇಡಿಯೋ ಥೇಟರ್ ಈಗ ನಾಲ್ಕು ಅಂತಸ್ತಿನ ರೇಡಿಯೋ ಕಾಂಪ್ಲೆಕ್ಸ್ ಆಗಿ ಮಾರ್ಪಟ್ಟಿದೆ. ಕಪೀಲ ಥೇಟರ್ ಹೋಗಿ ನ್ಯೂಕ್ಲಿಯಸ್ ಮಾಲ್ ಆಗಿದ್ದರೂ ಅದರ ನೆತ್ತಿಯ ಮೇಲೆ ಬಿಗ್ ಸಿನೆಮಾದ ಎರೆಡು ಸ್ಕ್ರೀನಗಳಿವೆ. ಎಂದೂ ನಡೆಯದ ಚಂದನ ಟಾಕೀಜ್ ಈಗ ಚಂದನ ಐನಾಕ್ಸ್ ಆಗಿ ಮೂರು ಮೂರು ಸ್ಕ್ರೀನಗಳಲ್ಲಿ ಚಿತ್ರಗಳನ್ನು ಜನರಿಗೆ ತೋರಿಸುತ್ತ ಬಹುಷಃ ಲಾಭ ಮಾಡಿಕೊಳ್ಳುತ್ತಿದೆ. ಆಝಾದನ ನೆನಪೂ ಜನಕ್ಕೆ ಉಳಿಯಲಾರದಂತೆ ಅದನ್ನು ಕಾಲ್ಕೆಳಗೆ ದಬ್ಬಿ, ಅದರ ಮೇಲೆಯೇ 'ಸ್ವರೂಪ ಪ್ಲಾಝಾ' ಎತ್ತರವಾಗಿ ಎದ್ದು ನಿಂತಿದೆ. ಕೃಷ್ಣಾ ಟಾಕೀಜ ಹೋಗಿ ಯಾವುದೋ ಕಂಪನಿಯ ಶೋರೂಮ್ ಆಗಿದೆ. ಅರುಣ ಥೇಟರ್ ಏನೂ ಆಗದೇ ಪಿಕ್ಚರೂ ನಡೆಯದೇ, ಬಂದಾಗಿ, ಮೂಕವಾಗಿ ಖಾಲಿ ನಿಂತಿದೆ. ರಿಟ್ಝ್ ಥೇಟರ್ ಸ್ವಲ್ಪವೇ ಪರಿವರ್ತನೆಗೊಂಡು ಲೋಕಮಾನ್ಯ ರಂಗಮಂದಿರವಾಗಿದೆ. ನರ್ತಕಿ ಥೇಟರ್ ಹೋಗಿ ಅಪಾರ್ಟಮೆಂಟ ಆಗಿದೆ. ಸ್ವರೂಪ, ಚಿತ್ರಾ, ಪ್ರಕಾಶ ಮುಂತಾದ ಕೆಲವೇ ಕೆಲವು ಟಾಕೀಜುಗಳು ಕಾಲಕ್ಕೆ ತಕ್ಕಂತೆ ನವೀಕರಣಗೊಂಡು ಒಂದಿಷ್ಟು ಲಾಭ ಮಾಡಿಕೊಳ್ಳೂತ್ತಿವೆಯೇನೋ! ಉಳಿದವೆಲ್ಲ ಹಾಗೆಯೇ ಹರಿದ ಕುಶನ್ನಿನ ಚೇರುಗಳು, ಬಣ್ಣ ಕಿತ್ತುಹೋದ ಗೋಡೆಗಳು, ಅದೇ ಹಳೆಯ ಸ್ಕ್ರೀನು ಇಟ್ಟುಕೊಂಡು ಅಂತೂ ಇನ್ನೂ ಬದುಕಿದ್ದೇವೆ ಎಂದು ಉಸಿರಾಡುತ್ತಿರುವ ಹಳೇ ಥೇಟರುಗಳು.
        ದಿನಗಳ ಮಜಾ, ಹುಚ್ಚು, ಆಗಿನ ಕಾಲದ ಸಿನೆಮಾಗಳು ಈಗ ಬರುವುದು ಸಾಧ್ಯವೇ ಇಲ್ಲ. ಈಗಿನ ಕೆಲವು ಸಿನೆಮಾಗಳನ್ನು ನೋಡಲಾಗದೇ ಟಾಕೀಜಿನಿಂದ ಎದ್ದು ಬಂದ ಮೇಲೆ ನಾನು ಮತ್ತು ನನ್ನಕ್ಕ ಇದನ್ನೆಲ್ಲ ನೆನಪಿಸಿಕೊಂಡು ಮಾತಾಡಿ ನಕ್ಕು, ಒಂದಿಷ್ಟು ವಿಷಾದಿಸಿ, ನೋವು ನಲಿವುಗಳನ್ನು ಒಟ್ಟಿಗೆ ಅನುಭವಿಸಿದೆವು. ಯಾಕೆಂದರೆ ಆಗಿನ ಕಾಲದ ತುಡಿತಗಳೇ ಬೇರೆ, ನಮ್ಮ ವಯಸ್ಸೂ ಹಾಗಿತ್ತು.
ನೀತಾ ರಾವ್
**************************