Friday, 21 March 2014

ಪಾರ್ಲೆ ಜಿ ಬಿಸ್ಕಿಟು, ಕೋಲ್ಗೇಟ್ ಟೂಥಪೇಸ್ಟು

                    ಪಾರ್ಲೆ ಜಿ ಬಿಸ್ಕಿಟು, ಕೋಲ್ಗೇಟ್ ಟೂಥಪೇಸ್ಟು


ಮರಿ ಫುಡಾರಿ ಭಾಳ ಘಾಬರಿ ಆಗಿದ್ದ. ಎಲ್ಲಾ ನ್ಯಾಷನಲ್ ಚ್ಯಾನಲ್ಲಗೋಳು ಬರೇ ಭ್ರಷ್ಟಾಚಾರದ ಸುದ್ದಿನs.. ಮಾತಾಡಲಿಖತ್ತಾವ. ಅವಕ್ಕ ಸರಕ ಒದಗಸ್ಲಿಕ್ಕಂತ ದಿನಕ್ಕೊಂದೊಂದು ಸ್ಕ್ಯಾಮು ಪೈಪೊಟಿಮ್ಯಾಲೆ ಹೊರಗ ಬೀಳಲಿಖತ್ತಾವ. ಅಯ್ಯೋ ದೇವರೇ ಹಿಂಗಾದರ ಮುಂದಿನ ಇಲೆಕ್ಷನ್ನದಾಗ ನಮ್ಮ ಗತಿಯೇನು? ಅವರಪ್ಪ ಹಿರಿಯ ಫುಡಾರಿ ಮುಂದ ಹೋಗಿ ಘೋಳಾಡಲಿಖತ್ತ. "ಅಪ್ಪಾ ಈ ಸರ್ತೆ ಇಲೆಕ್ಷನ್ನದಾಗ ನಾವು ಗೆದ್ದಂಗ ತೊಗೊ. ಬರೇ ಒಂದರ ಮ್ಯಾಲ ಒಂದು ಭ್ರಷ್ಟಾಚಾರ ಹೊರಗೆಳಿಲಿಖತ್ತಾರ ಟಿ.ವಿ. ಚ್ಯಾನಲ್ಲಿನವ್ರು ".
"ಅಯ್ಯೋ ಮಗನ ಅದನ್ನೆಲ್ಲ ಮನಸ್ಸಿಗೆ ಹಚಗೋಬ್ಯಾಡ ತಗಿ, ಗೆಲ್ಲೋದ ಗೆಲ್ಲೋದ ನವs  ಗ್ಯಾರಂಟೀ, ಇನ್ನ್ಯಾರ ಬರ್ತಾರಲೇ ನಮ್ಮನ್ನ್ನ ಸೈಡ್ ಒಗದು!" ಅಂತ ಆತ್ಮವಿಶ್ವಾಸದಿಂದ ಹಿರಿ ಫುಡಾರಿ ಉಡಾಫೆ ಮಾಡಿದ. "ಇಲ್ಲಪ್ಪಾ ನಿನಗ ಗೊತ್ತಿಲ್ಲ ಜನಾ ಈಗ ಶ್ಯಾಣೆ ಆಗ್ಯಾರ, ಹಿಂದಿನ ಹಂಗ ನಮಗ ಕಾಲ ಬಿದ್ದು ವೋಟು ಕೊಡಂಗಿಲ್ಲ, ನೋಡ್ತಾ ಇರು, ಇನ್ನ ಐದ ವರ್ಷ ನಮಗೆಲ್ಲಾ ರಜಾ ಕೊಟ್ಟಬಿಡ್ತಾರ".
"ಛೇ ಮಗನ ನಿನ್ನ ದಿಲ್ಲಿ ಕಾಲೇಜಿನ್ಯಾಗ ಇಟ್ಟು ಓದಿಸಿದ್ದರ ದುಷ್ಪರಿಣಾಮ ಇದು ತಮ್ಮಾ . ನಮ್ಹಂಗ ಹಳ್ಳಿ ಸಾಲ್ಯಾಗ ಕಲತಿದ್ದರ ನಮ್ಮ ಸುತ್ತಮುತ್ತಲ ಮಂದಿ ಆಚಾರಾ- ವಿಚಾರಾ ಎಲ್ಲಾ ತಿಳೀತಿತ್ತು ನಿಂಗ. ಈಗ ಒಂದು ಕೆಲಸಾ ಮಾಡೋಣು. ಒಂದಿಷ್ಟು ಮಂದಿನ್ನ ಮಾತಾಡಿಸಿಕೊಂಡು ಬರೋಣು ನಡಿ, ನಮ್ಮೂರಾಗ".
ಅಪ್ಪ ಮಗ ರಾಜಕಾರಣಿಗಳು ಮತ್ತವರ ಪಟಾಲಂ ಹಳ್ಳಿಗೆ ಬಂದು ತಮ್ಮ ಹಳೆ ಮನ್ಯಾಗ ಟೆಂಟ ಹಾಕ್ತು. ಫುಡಾರಿ ಸಾಹೇಬರು ಊರಿಗೆ ಬಂದ ಸುದ್ದಿ ಊರಿಗೆಲ್ಲಾ ತಿಳೀತು. ಹಳ್ಳಿ ಅಜ್ಜಾರು, ಮುತ್ತ್ಯಾಗಳು, ಕಾಕಾ - ಮಾಮಾಗೋಳು, ಕೆಲಸಿಲ್ದ ಬೀಡಿ ಎಳದ ಎಳದ ಹೊಗಿ ಬಿಟಕೊಂತ ಆಲದ ಮರದ ಕಟ್ಟಿ ಮ್ಯಾಲ ಹಾಳ ಹರಟಿ ಹೊಡಕೊಂತ ಕೂತ ಪಡ್ಡೆ ಹೈಕಳು, ಎಲ್ಲಾ ಸಾಹೇಬ್ರ ದರ್ಶನಾ ತೊಗೊಂಡು ಧನ್ಯ ಆಗ್ಲಿಕ್ಕೆ ಓಡೋಡಿ ಬಂದ್ರು. ಸಾಹೇಬ್ರು ತಮ್ಮನಿ ಜಗಲಿ ಮ್ಯಾಲ ಅವರ್ನೆಲ್ಲಾ ಕೂಡಿಸಿ, ತಾವಿಬ್ರು ಹಳೇ ಕಾಲದ ಧೊಡ್ಡ ಕುರ್ಚಿಗಳ ಮ್ಯಾಲೆ ಆಸೀನರಾದ್ರು. ಮಳೀ -ಬ್ಯೆಳಿ ವಿಚಾರಿಸಿದ್ರು. ಹಳ್ಳಿ ಮಂದಿ ಇನ್ನೂ ಹುರುಪಾದ್ರು. ಐದ ವರ್ಷ, ಒಳಗs ಇಟಗೊಂಡ ಇಟಗೊಂಡ ಉಬ್ಬಿದ ಹೊಟ್ಟಿ ಒಳಗಿನ ದು:ಖಾ ಎಲ್ಲಾ ಹೊರಗ ಹಾಕಿ ನಿರಾಳಾದ್ರು. ಹಳ್ಳಿ ಮಕ್ಕಳಂದ್ರ ಸಾಹೇಬ್ರಿಗರೇ ಏನು ಕಡಿಮಿ ಪ್ರೀತೀ ಅಂತೀರಿs ! ಈ ಹಳ್ಳಿ ಅಲ್ದನs ಸುತ್ತಮುತ್ತಲ ಇಪ್ಪತ್ತು ಮೂವತ್ತು ಹಳ್ಳಿ ಜನಾ ಎಲ್ಲಾ ವೋಟ ಹಾಕಿ ಪ್ರತೀ ಸಲ ಅವರನ್ನ ಗೆಲ್ಲಿಸಿಕೊಟ್ಟಾರ. ಸಾಹೇಬ್ರರೇ ಅವರನ್ನ ಮರತಾರೇನು, ಊಹುಂ, ಎರಡ ವರ್ಷದ ಹಿಂದ ಮಗಳ ಮದವಿ ಮಾಡಿ ಎಲ್ಲಾರಿಗೂ ಭರ್ಜರೀ ಊಟಾ ಹಾಕಸ್ಯಾರ. ಹೋದ ವರ್ಷ ಮಗನ ಮದವಿ ಮೂರ ಮೂರ ದಿನಾ ಮಾಡಿದಾಗ ಸುತ್ತಮುತ್ತಲ ಹಳ್ಯಾಗೆಲ್ಲಾ ಒಂದ ಮನ್ಯಾಗೂ ಒಲಿ ಉರಿಬಾರ್ದು, ಎಲ್ಲಾರೂ ಮೂರೂ ದಿನಾ ಮದವಿ ಮನ್ಯಾಗs ಊಟಾ ಮಾಡ್ಬೇಕಂತ ಫ಼ರ್ಮಾನು ಹೊಂಡಿಸಿದ ಮ್ಯಾಲೆ ಪಾಪ ಮಂದ್ಯರ ಯಾಕ ಸುಮ್ಮ ಸುಮ್ಮನ ತ್ರಾಸ ತೊಗೋತಾರ? ಮೂರೂ ದಿನಾ ಹಗಲ -ರಾತ್ರಿ ಅನದನ ಧಕ್ಕನ ದುಡದು ಕಂಠ ಮಟ ಉಂಡು ತೃಪ್ತ ಆಗಿ ಹೊಗ್ಯಾರ. ಮುಂದಿನ ವರ್ಷ ಸಾಹೇಬ್ರಿಗೆ ಮಮ್ಮಗಾ ಆಗ್ಲಿ, ಊರಿಗೇ ಊಟಾ ಹಾಕಸ್ಲಿ ಅಂತ ಕಾಯ್ಲಿಖತ್ಯಾರ ಅಂಥ ಒಳ್ಳೆ ದಾನಶೂರ ಕಳ್ನಾ ನಮ್ಮ ಸಾಹೇಬರು ಇನ್ನು ಈಗೀಗ ರಾಜಕಾರಣಕ್ಕ ಇಳಿದಿರೋ ಅವರ ಡೆಲ್ಲಿ ರಿಟರ್ನಡ್ ಮಗಾ. ಅಂದಮ್ಯಾಲ ಕೇಳ್ತೀರ, ಎಲ್ಲಾ ಜನ್ರ ಪ್ರೀತಿ ಸುರಕೊಂಡು ಸೂರಿ ಮಾಡಿಬಿಟ್ಟರ ಅಪ್ಪಾ-ಮಗಾ. ಅಂಥ ಸಾಹೇಬ್ರು ಮಗನ್ನ ಕರಕೊಂಡು ಅಪರೂಪಕ್ಕ ಊರಕಡೀ ಬಂದ್ರಂದ್ರ ಜನ ಮನ್ಯಾಗ ಇರಲಿಕ್ಕಾಗತದೇನು? ಎಲ್ಲಾ ಕೆಲಸಾ ಬಿಟ್ಟು ಊರಿಗ ಊರs ಅವರ ಮುಂದ ನೆರದದ.
      "ಹ್ಯಾಂಗದಪಾ ರಾಮಣ್ಣಾ ಇಲೆಕ್ಷನ್ ಭರಾಟಿs. ನಮಗೇನರೇ ಸಹಾಯ ಮಾಡ್ತಿರೋ ಇಲ್ಲೋ ಮತ್ತ? " ಸಾಹೇಬ್ರು ಹಗೂರಕ ಮುಖ್ಯ ವಿಷಯಕ್ಕ ಬರಲಿಕ್ಕ ಸುರು ಮಾಡಿದ್ರು.
      "ಹಂಗ್ಯಾಕ ಅಂತೀರಿ,  ತಗೀರೀ ಯಪ್ಪಾ, ನಿಮಗಲ್ದನ ಇನ್ಯಾರಿಗೆ ವೋಟು ಕೊಡೋದು  ನಾವು. ಇಲ್ಲೆ ಅಷ್ಟೂ ಜನಾ, ಸುತ್ತಮುತ್ತಲ ಹಳ್ಳಿ ಜನಾ ಎಲ್ಲರ ವೋಟು ನಿಮಗs, ಕಾಳಜಿ ಬಿಡ್ರಿ" ಅಂದ ಊರಿನ ಹಳೇ ಮನಷ್ಯಾ ರಾಮಣ್ಣ.
      "ಅಲ್ಲಪಾ ಮತ್ತ, ಈಗೀಗ ಟಿ. ವ್ಹಿ. ಅವ್ರು ಏನೇನೋ ಸುದ್ದಿ ತಗದು ಸುಳ್ಳ ಸುಳ್ಳs ನಮ್ಮನ್ನೆಲ್ಲಾ ಬಯ್ಯಾಕತ್ತಾರ ಏನಪಾs . ಮತ್ತ ನೀವೆಲ್ಲರೇ ಅದನ್ನs ಖರೇ ಅಂತ ನಂಬಿ ನಮಗ ವೋಟ ಹಾಕಬಾರ್ದಂತ ಒಳಗೊಳಗ ನಿರ್ಣಯ ಮಾಡಿದ್ರ ಈ ವಯಸ್ಸಿನ್ಯಾಗ ನಾವೆಲ್ಲೆ ಬ್ಯಾರೆ ಕ್ಷೇತ್ರಕ್ಕ ಹೋಗಿ ವೋಟ ಕೊಡ್ರಿ ವೋಟ ಕೊಡ್ರಿ ಅಂತ ಬ್ಯಾರೆದಾವ್ರನ ಭಿಕ್ಷಾ ಬೇಡೋಣೋ  ಭೀಮಶಿ, ನನ್ನ ಭವಿಷ್ಯ ನನ್ನ ಮಗನ ಭವಿಷ್ಯ ಎರಡೂ ನಿಮ್ಮ ಉಡ್ಯಾಗ ಹಾಕಿ ಬರಿಗೈಲೆ ನಿಂತೇವಿ ನೋಡ್ರ್ಯಪಾ, ಉಳಸೋದು, ಮುಳಗಸೋದು ನಿಮಗs ಬಿಟ್ಟಿದ್ದು" ಅಂತ ನಾಜೂಕಾಗಿ  ಅಸ್ತ್ರ ಉಪಯೋಗಿಸಿದರು ಹಿರೀ ಸಾಹೇಬ್ರು.
       "ತಗೀರಿ ಅಣ್ಣಾರ ಆ ಟಿ. ವ್ಹಿ. ಅವರು ಏನ ಹೇಳ್ತಾರೋ ಏನೋ ಅದೆಲ್ಲಾ ನಾವು ತಲಿ ಕೆಡಿಸಿಗೋಳಾಂಗಿಲ್ಲರೀs. ನಮ್ಮ ವೋಟ ಏನಿದ್ರೂ ನಿಮಗs... " ಅಂತ ವಿಶ್ವಾಸ ಕೊಟ್ಟ ಭೀಮಶೀ. ಆದ್ರೂ ಮರಿ ಫ಼ುಡಾರಿ ಜೀವ ಫುಕು ಫುಕು ಅನ್ನೋದು ಬಿಡವಲ್ತು. ಅದಕ್ಕs ತಾನs  ಕೇಳಿದ.
"ನೀವು ದಿನಾ ಟಿ.ವ್ಹಿ.ನ್ಯಾಗ ಏನೇನ ನೋಡ್ತೀರಪಾ?
" ಏ ಬಿಡ್ರಿ ಸಾಹೇಬ್ರ‌s ಬೆಳಗಿನ ಟೈಮಂತೂ ನೋಡಾಕ ಆಗೂದಿಲ್ರೀ  ರಾತ್ರಿ ಒಂದಿಷ್ಟು ಹೆಣ್ಮಕ್ಕಳು ಧಾರಾವಾಹಿ ಹಚ್ಕೊಂಡು ಕೂತಿರ್ತಾರ, ಅದನ ನಾವೂ ನೋಡೋದು. ಅದ ಬಿಟ್ಟರ ಒಂದೀಟ ಕ್ರಿಕೆಟ್ಟು ಅದೂ ಇದು ಅಂತ ಆಟಾ ನೋಡ್ತೇವರೀ, ಆತು" ಅಂತ ನಿಂಗಣ್ಣ ಉತ್ತರಾ ಕೊಟ್ಟಾ.
ಅಷ್ಟರಾಗ ಜಮಾಯಿಸಿದ್ದ ಹೆಣ್ಣಮಕ್ಕಳನ್ನ ನೋಡಿ ಮರಿ ಕೇಳಿದ, "ತಾಯಂದ್ರ, ನೀವು ಏನೇನ ನೋಡ್ತೀರಿ ಟಿವ್ಯಾಗ, ನೀವು ಮನ್ಯಾಗ ಇರ್ತೀರಂದ್ರ ಮುಂಜಾನೆ, ಮಧ್ಯಾನ್ನನೂ ನೋಡ್ತಿರಬೇಕಲಾ?"
"ನೋಡ್ತೇವರೀ. ಮಧ್ಯಾನ್ನ ಕೆಲವೊಂದು ಚಾನಲ್ಲಿನ್ಯಾಗ ಗಂಡಾ ಹೆಣ್ತೀ ಜಗಳ, ಡೈವರ್ಸ ಕೊಡ್ತೇನಂತ ಗಂಡ ಹೇಳೋದು, ಕೊಡಂಗಿಲ್ಲಂತ ಹೇಣ್ತೀ ಅಳೋದು, ತಾಸಗಟ್ಳೇ ಕೆಲಸಾ ಮಾಡೋದು ಬಿಟ್ಟ ಬಿಟ್ಟ ನೋಡೇವ್ರೀ. ಇನ್ನ ಆ ಸ್ವಾಮಿ, ಈ ಸ್ವಾಮಿ ಅಂತೆಲ್ಲಾ ನೂರಾಎಂಟು ಕಥೀ ತೋರಸ್ತಾರ ನೋಡ್ರೀ, ಬಲೇ ಮಜಾ ಇರ್ತಾವ್ರೀ, ಅವನ್ನೆಲ್ಲಾ ನೋಡ್ತೇವ್ರೀ. ರಾತ್ರೀ ಮಾತ್ರ ಸೀರಿಯಲ್ ಬೇಕು. ಅದೇನ ಛ್ಂದ ಮನೀ, ಅದೇನ ವಸ್ತಾ ವಡವಿ, ದಾಗೀಣು, ಸೀರೀ,  ಭಾಳ ಛಂದ ಇರ್ತಾವ್ರೀ" ಅಂದ್ಲು ಕಡೀಮನೀ ಕಲ್ಲಕ್ಕ.
"ಅಲ್ಲಾ ಅಕ್ಕಾರ, ನಿಮಗ ಈ 2ಜಿ, 3ಜಿ ಅಂದ್ರ ಏನು ಅಂತ ಗೊತ್ತದ ಏನು?" ಮರಿ ಮತ್ತೂ ಕೆದಕಿದ.
"ಏ ಇಲ್ಲ ಬಿಡ್ರೀ, ನಮಗ ಗೊತ್ತಿರೋದು ಪಾರ್ಲೆ ಜಿ ಒಂದ" ಅಂದ್ರು ಹೆಣ್ಮಕ್ಕಳು.
"ಅಲ್ಲಾ ಗಂಡಸರಿಗೆ ಯಾರಗರೇ ಈ ಕೋಲಗೇಟು ಅನ್ನೋದು ಗೊತ್ತದ ಏನು?"
"ಹೇ ಅದೇನ ಚಾಷ್ಟೀ ಮಾಡ್ತಿರೀ ಸಾಹೇಬ್ರ, ನಾವ ಹುಟ್ಟಿದಾಗಿಂದ ಕೋಲ್ಗೇಟ ಪೇಸ್ಟ‌s ಅಲ್ಲೇನರೀ ಹಲ್ಲ ತಿಕ್ಕಾಕ ಬಳಸೂದು? ಬ್ರಷ್ ಉಪಯೋಗಿಸ್ದೇ ಇದ್ರೂ ಪೇಸ್ಟ ಮಾತ್ರ ಯಾವಾಗ್ಲೂ ಕೋಲ್ಗೇಟರೀ" ಅಂದ ಪಂಪಣ್ಣಾ. ಮರಿಗೆ ಖುಶಿ ಆತು, ಅಬ್ಬಾ ಅಂತೂ ಇಲ್ಲಿನ ಮ‍ಂದಿಗೆ ಕೋಲ್ಗೇಟು, 2ಜಿ, CWG, ಎಲ್ಲಾ ಏನೂ ಗೊತ್ತಿಲ್ಲ ಅಂತಾತು. ಇನ್ನ ಆದರ್ಶ ಅದೂ ಇದೂ ಅಂತ ಕೇಳೋದ್ಯಾಕ ಅಂತ ಸುಮ್ಮನಾದ. ದೊಡ್ಡ ಸಾಹೇಬ್ರೂ ಅದು ಇದು ಮಾತಾಡಿ ಊರಮಂದಿನ್ನ ಕಳಿಸಿ ಕೊಟ್ರು.
"ಆತಿಲ್ಲಪಾ ಮಗನ‌s  ಸಮಾಧಾನ! ನಮ್ಮ ಜನಾ ಒಳ್ಳೆವ್ರು. ಆ ಸುಪನಾತಿ ಟಿ.ವ್ಹೀ. ಅವ್ರು ನೂರು ಒದರ್ಲೀ, ನಮ್ಮ ಜನಾ ನಮಗs ವೋಟು ಕೊಡ್ತಾರ, ನೋಡ್ತಿರು. ಹೋದ ಸರ್ತಿ ಮನಿಗೆ ಸಾವಿರ ರೂಪಾಯ ಹಂಗ ಹಂಚಿತ್ತು, ಈ ಸಲ ಮನಷ್ಯಾಗ ಸಾವ್ರ ರೂಪಾಯ ಹಂಗ ಹಂಚಿದ್ರ ಓಡಿ ಬಂದ ವೋಟ ಹಾಕಿ  ಹೋಕ್ತಾರ, ಅಷ್ಟ ನಿಯತ್ತಿನ ಮಂದಿ" ಅಂತ ಮಂಚದ ಮ್ಯಾಲೆ ಮೈ ಚಾಚಿದ್ರು.
ಏನೋ ಯೊಚ್ನಿ ಮಾಡ್ಕೋತ ಮರಿ ಫುಡಾರಿನೂ ಅಡ್ಡಾದ. ಆದರ ಮೈಗೆಲ್ಲಾ ಸೊಳ್ಳಿ  ಕಡದು ನಿದ್ದಿ ಬರಲಿಲ್ಲಾ. ಮತ್ತ ತಲ್ಯಾಗ ಹುಳಾ ಕೊರಿಲಿಕತ್ತು. ಅಲ್ಲಾ ಈ ಹಳ್ಳಿ ಮಂದಿ ಹಕ್ತಾರ, ಅಡ್ಡಿ ಇಲ್ಲಾ. ಆದ್ರ ಆ ಹರಾಮಖೋರ್ ಶಹರದ ಜನಾ? ಈ ಲೋಕಸಭಾ ಇಲೆಕ್ಷನ್ನದಾಗ ಅವ್ರದೂ ಮರ್ಜಿ ಕಾಯಬೇಕಲ್ಲಾ! ಅವ್ರಿಗೆ 2ಜಿ, ಕೊಲ್ಗೇಟು ಎಲ್ಲಾ ಸ್ಕ್ಯಾಮೂ ಗೊತ್ತ ಇರ್ತಾವ! ಅದಕ್ಕೇನು ಮಾಡೋದು? "ಅಪ್ಪಾ ಹಳ್ಳಿ ಮಂದಿದಂತೂ ಖಾರ್ತಿ ಆತು, ಆದರ ಶಹರದ ಜನಾ, ಅವರನ್ನೇನು ಮಾಡೋದು, ಅವ್ರು ಮಹಾ ದಗಾಖೋರ ಮಂದಿ" ಅಂದ. "ಥತ್ತೇರಿ ನಾಳೆ ನೋಡೋಣು ಮಲಕ್ಕಳಲೇ" ಅಂತ ಹಿರಿ ಫುಡಾರಿ ಮತ್ತ ಮಗ್ಗಲಾದ್ರು.
ಮರಿ ಫುಡಾರಿ ಬಿಡಬೇಕಲ್ಲಾ? ದಿಲ್ಲಿಯೊಳಗ ಕಲತ ಬಂದಾವ, ಹಳ್ಳಿ ಮನಷ್ಯಾ ಈ ಅಪ್ಪಗ ಏನ ತಿಳಿತದ ಅಂತ ಹೆದರಿಕಿ ಅವಂಗ. ಮರದಿನಾ ಇಬ್ಬರದೂ ಸವಾರಿ ಶಹರ ಕ್ಷೇತ್ರದೊಳಗ ಬಿಜಯಂಗೈದು ಜನರಿಗೆ ದರ್ಶನ ಕೊಟ್ಟಿತು.
ಕಾಲೇಜಿನ್ಯಾಗ ಮರಿ ಫುಡಾರಿತರುಣ ಮತದಾರರಿಗೆ ಕೇಳೇಬಿಟ್ಟ "ಯಾವ್ಯಾವ ಟಿ.ವ್ಹಿ. ಚ್ಯಾನಲ್ ನೋಡ್ತೀರಿ ತಮ್ಮಗೋಳ್ರ್ಯಾ"
"M ಟಿ.ವ್ಹಿ,  f ಟಿ.ವ್ಹಿ.  V ಚ್ಯಾನೆಲ್, ಬಿಟ್ರ ಉದಯಾ ಮ್ಯುಜಿಕ್, ರಾಜ್ ಮ್ಯುಜಿಕ್, ಕಾಮಿಡಿ, ಸಿನಮಾ ಇವನ್ನ‌s ನೋಡುದ್ರೀ ನಾವು" ಅಂದ ತರುಣರ ಪ್ರತಿನಿಧಿ ಹಂಗಿದ್ದ ವಿಚಿತ್ರ ವೇಷ ಭೂಷಣದ ಹುಡುಗನೊಬ್ಬ. "ಪೇಪರ್ ಯಾವ್ದು ಓದ್ತೀರಿ ತಮ್ಮಾ" "ಏ ಪೇಪರ್ ಓದಾಕ ಟೈಂ ಯಾರಿಗದರೀ?" ಅಂದ್ರು ಹುಡುಗ್ರು. "ಮತ್ತ ಕ್ಲಾಸ್ ಮುಗದ ಮ್ಯಾಲೆ ಏನ್ ಮಾಡ್ತೀರಪ್ಪಾ?" ಅಂದದ್ದಕ್ಕ "ಕ್ಲಾಸಿಗ್ಯಾರ ಹೋಗ್ತಾರ್ರೀ, ಕಾಲೇಜ ಇದ್ದಾಗ ಕ್ಯಾಂಪಸ್ಸಿನ್ಯಾಗ ಅಡ್ಡಾಡತೇವಿ, ಇಲ್ಲಾ ಕ್ಯಾಂಟೀನ್ ನ್ಯಾಗ ಬಿದ್ದಿರತೇವಿ, ಯಾವಾಗರೆ ಬ್ಯಾಸರ ಬಂದಾಗ ಕ್ಲಾಸಿಗೆ ಹೋದ್ರ ಮಾಸ್ತರ ಕಾಲ ಎಳಿತೇವಿ" ಎಲ್ಲಾ ಖೊಳ್ ಅಂತ ನಕ್ಕರು. "ಮನ್ಯಾಗ, ಹೊರಗ ಎಲ್ಲೆಂದ್ರಲ್ಲೆ ಮೊಬೈಲ್ ಮ್ಯಾಲೆ ಮೆಸ್ಸೆಜು ಕಳಸೋದು, ಬಂದದ್ದನ್ನ ಓದೋದು, ಫೇಸ್ ಬುಕ್ಕು, ವಾಟ್ಸ್ಯಾಪು, ಅಯ್ಯೋ ಭಾಳ ಎಂಗೇಜಮೆಂಟ್ಸ್ ಅವರೀ ನಮಗ‌s" ಅಂತ ಮತ್ತ ಎಲ್ಲಾರೂ ನಕ್ರು.
"ನಿಮಗ 2ಜಿ, 3ಜಿ, CWG ಬಗ್ಗೆ ಏನರೆ ಗೊತ್ತದ ಏನು ತಮ್ಮಾ" ಅಂದದ್ದಕ್ಕ "ಸ್ವಲ್ಪ ಸ್ವಲ್ಪ ಗೊತ್ತದರೀ, ಯಾರು ತಲಿ ಕೆಡಿಸಿಗೊಳ್ಳಾವ್ರು, ತಿನ್ನಾವ್ರು ತಿಂದು ಹಾಯಾಗಿ ಸಾಯ್ಲಿ, ನಮಗ ಹೊಸಾ ಹೊಸಾ ವರ್ಷನ್ ಗ್ಯಾಜೆಟ್ ಸಿಗಲಿ ಅಷ್ಟ‌s" ಅಂದ್ರು. ಮರಿ, ಹಿರಿ ಇಬ್ರೂ ಅಲ್ಲಿಂದ ಮರೆಯಾದ್ರು.
ಒಂದಿಷ್ಟು ನಡು ವಯಸ್ಸಿನ ಸಿರಿಯಸ್ ಜಾಣರನ್ನ ಭೆಟ್ಟಿ ಆಗಿ ಬಿಡ್ಬೇಕು ಅಂದ ಮರಿ. ಬೈಕೊಂಡೇ ಒಪಗೊಂಡ್ರು ಹಿರಿ.
"ಸರಕಾರದ ಭ್ರಷ್ಟಾಚಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು?" ಅಂತ ಕೇಳಿದ್ದಕ್ಕ, ಅವರೊಂದಿಷ್ಟು ಮಂದಿ ಉದ್ದುದ್ದ ಭಾಷಣ ಬಿಗಿದು ಕುತಗೊಂಡ್ರು. "ಹಂಗಾರ ವೋಟು ಯಾರಿಗೆ ಹಾಕ್ತೀರಿ/" ಅಂದದ್ದಕ್ಕ, "ಎಲ್ಲೀ ವೋಟು ಸ್ವಾಮೀ,  ಯಾರಿಗೆ ಹಾಕಿದ್ರೂ ಅಷ್ಟs, ಸ್ವಲ್ಪ ಹೆಚ್ಚು ಸ್ವಲ್ಪ ಕಡಿಮೆ, ಎಲ್ಲಾರೂ ಭ್ರಷ್ಟರs, ನಾವ್ಯಾರಿಗೂ ವೋಟು ಹಾಕಂಗಿಲ್ಲ, ಇಲೆಕ್ಷನ್ ದಿನ, ಅದರ ಹಿಂದ ಮುಂದ ಜೋಡಿಸಿಕೊಂಡು ಎರಡ ದಿನಾ ಎಲ್ಲೆರೆ ಟೂರಿಗೆ ಹೋಗಿ ಬರ್ತೇವಿ, ಅಷ್ಟs ಮಜಾ ಆದ್ರು ಆಗ್ತದ" ಅಂದ್ರು.
ದಿಲ್ಲಿ ಕಾಲೇಜಿನ್ಯಾಗ ಕಲತ ನನಗಿಂತ ಹಳ್ಳೀ ಸಾಲ್ಯಾಗ ಕಲತ ನಮ್ಮಪ್ಪನ ಶಾಣ್ಯಾ ಅಂತ ಖಾತ್ರಿ ಆಗಿ ಮರಿ ರಾಜಕಾರಣಿ ನಕ್ಕೋತ ನಿದ್ದಿ ಮಾಡಿದ.

ನೀತಾ ರಾವ್

4 comments:

  1. wa...wa...wa...wa.....maam parle g biccattu coalgate toothpastu super maam super.....!!!!! 95% you are absolutely true maam.....and your writing style in urban language is relly beautiful ...I really enjoyed the whole theme and your writing.....STRATEGY OF OUR POLITICS

    ReplyDelete
  2. ಸಕತ್ತಾಗಿದೇರೀ , ಇನ್ನೂ ಝಾಡಿಸಬೇಕಿತ್ತು , ಅವರ ಮೈಚರ್ಮ ಎಮ್ಮೆಯದಕ್ಕಿಂತ ಗಟ್ಟಿ. ನಿಮ್ಮಿಂದ ಇನ್ನೂ ಜಾಸ್ತಿ ತಮಾಷೆ ಬರಹಗಲನ್ನು ನಿರೀಕ್ಷಿತ್ತೇನೆ. ನನಗೆ ಖುಷಿ ಇದೆ , ನಿಮ್ಮ ಭಾಷಾಶೈಲಿ. ನಮಸ್ತೇ, ನಿಮಗೆ

    ರವಿಶಂಕರ್

    ReplyDelete